ಕಾರ್ಕಳ, ಡಿ.10 (DaijiworldNews/SM): ಜಾಗದ ತಕರಾರಿಗೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರಿಗೆ ಆತನ ರಕ್ತಸಂಬಂಧಿಗಳೇ ಹಲ್ಲೆಗೈದಿರುವ ಘಟನೆ ಹಿರ್ಗಾನದ ಗುಂಡ್ಯಡ್ಕ ಎಂಬಲ್ಲಿ ನಡೆದಿದೆ.
ಹಿರ್ಗಾನ ಗುಂಡ್ಯಡ್ಕದ ಭೋಜ ಪೂಜಾರಿ(52) ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದಾರೆ.
ಹಿರ್ಗಾನ ಗ್ರಾಮದ ಗುಂಡ್ಯಡ್ಕ ಎಂಬಲ್ಲಿ ಭೋಜ ಪೂಜಾರಿ ತನ್ನ ಸ್ಥಿರಾಸ್ಥಿಯ ಗದ್ದೆ ಊಳಲು ಟ್ರಾಕ್ಟರ್ನ್ನು ತಂದಿದ್ದರು. ಈ ವೇಳೆ ದಾರಿಯಲ್ಲಿದ್ದ ನೀರಿನ ಪೈಪನ್ನು ತೆಗೆದು ಗದ್ದೆಗೆ ಟ್ರಾಕ್ಟರ್ ತೆರಳಿದ ಬಳಿಕ ರಸ್ತೆಯಲ್ಲಿ ಹಾದು ಹೋಗಿರುವ ಪೈಪ್ ಲೈನನ್ನು ಜೋಡಣೆ ಮಾಡುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.
ಭೋಜ ಪೂಜಾರಿಯ ಅಕ್ಕ ಲೀಲಾ ಹಾಗೂ ಅವರ ಮಕ್ಕಳಾದ ಹೃಶಿಕೇಶ ಇಬ್ಬರು ಸೇರಿಕೊಂಡು ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.