ಕಾಪು, ಡಿ.10 (DaijiworldNews/HR): ಫಕೀರರ ವೇಷದಲ್ಲಿ ಬಂದು ವಂಚಿಸಿ ಚಿನ್ನಾಭರಣ ಹಾಗೂ ಗ್ರಾಹಕನೊಬ್ಬ 18 ಸಾವಿರ ಮೌಲ್ಯದ ಮೊಬೈಲ್ ಪೋನ್ ದೋಚಿರುವ ಪ್ರತ್ಯೇಕ ಎರಡು ಘಟನೆ ಉಡುಪಿಯಲ್ಲಿ ನಡೆದಿದೆ.
ಕಟಪಾಡಿ ಯೇನಗುಡ್ಡೆಯಲ್ಲಿ ಮುಸ್ಲಿಂ ಕುಟುಂಬವೊಂದು ವಾಸವಿದ್ದ ಮನೆಗೆ ಹಾಡುಗಳನ್ನು ಹಾಡುತ್ತ ಭಿಕ್ಷೆ ಬೇಡುವ ನೆಪದಲ್ಲಿ ಮೂವರು ವ್ಯಕ್ತಿಗಳು ಬಂದಿದ್ದು, ಮನೆಯ ಮುಂದೆ ಧೂಪದ ಹೊಗೆ ಹಾಕಿ ಮಹಿಳೆಯನ್ನು ಯಾಮಾರಿಸಿದ್ದು, ಆಕೆ ಮನೆಯಲ್ಲಿದ್ದ ಚಿನ್ನಾಭರಣ ಫಕೀರರಿಗೆ ತಂದುಕೊಟ್ಟಿದ್ದಾಳೆ. ಬಳಿಕ ಚಿನ್ನಾಭರಣ ಸಹಿತ ಅಲ್ಲಿಂದ ಫಕೀರರು ಪರಾರಿಯಾಗಿದ್ದಾರೆ.
ಇನ್ನು ಕಳ್ಳರು ಹೋದ ಬಳಿಕ ಮಹಿಳೆಗೆ ಪ್ರಜ್ಞೆ ಬಂದಿದ್ದು, ಸಿಸಿಟಿವಿ ದೃಶ್ಯಾವಳಿಗಳಲ್ಲಿ ಫಕೀರರು ಅಂಗಳದ ಸುತ್ತಲೂ ನಡೆಯುತ್ತಿರುವುದನ್ನು ಕಾಣಬಹುದು. ಇದೀಗ ಘಟನೆಯ ಸಿಸಿಟಿವಿ ವಿಡಿಯೋ ವೈರಲ್ ಆಗಿದೆ.
ಇನ್ನು ಈ ಘಟನೆಯ ಬಳಿಕ ಮನೆಗೆ ಬರುವ ಭಿಕ್ಷುಕರ ಬಗ್ಗೆ ಎಚ್ಚರ ವಹಿಸುವಂತೆ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.
ಇನ್ನೊಂದು ಘಟನೆಯಲ್ಲಿ ರಸಗೊಬ್ಬರ ಅಂಗಡಿಗೆ ಭೇಟಿ ನೀಡಿದ ವ್ಯಕ್ತಿಯೊಬ್ಬರು ಸಾವಿರ ರೂಪಾಯಿಗೂ ಅಧಿಕ ವ್ಯಾಪಾರ ಮಾಡಿ ಪ್ರಾಮಾಣಿಕರಂತೆ ವರ್ತಿಸಿದ್ದಾರೆ. ಕೆಲವು ಸಂಭಾಷಣೆಯ ನಂತರ ಮಾಲೀಕರು ಅವನ ಮೇಲಿನ ನಂಬಿಕೆಯಿಂದ ಆತ ಮೊಬೈಲ್ ಕೇಳಿದಾಗ ಕೊಟ್ಟಿದ್ದಾನೆ. ಆದರೆ ಕಳ್ಳ ಅಂಗಡಿ ಮಾಲೀಕ ಉದಯ ಶೆಟ್ಟಿ ಅವರ 18 ಸಾವಿರ ಮೌಲ್ಯದ ಮೊಬೈಲ್ ಅನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ.
ಎರಡು ಪ್ರಕರಣಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳಿಗಾಗಿ ಸ್ಥಳೀಯರು ಮತ್ತು ಪೊಲೀಸರು ವ್ಯಾಪಕ ಶೋಧ ನಡೆಸಿದ್ದಾರೆ. ಕಾಪು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.