ಉಡುಪಿ, ಡಿ 10(DaijiworldNews/MS): ರಾಜ್ಯದ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಬೇಯಿಸಿದ ಮೊಟ್ಟೆ ಹಾಗೂ ಬಾಳೆಹಣ್ಣು ನೀಡಲು ಮುಂದಾಗಿರುವ ರಾಜ್ಯ ಸರ್ಕಾರ ಕ್ರಮವನ್ನು ಉಡುಪಿಯ ಶಾಸಕ ರಘುಪತಿ ಭಟ್ ಬೆಂಬಲಿಸಿದ್ದಾರೆ.
ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಮೊಟ್ಟೆ ಕೊಟ್ಟ ಕೂಡಲೇ ಮೊಟ್ಟೆಯನ್ನು ತಿನ್ನಲೇಬೇಕು ಎಂದೆನಿಲ್ಲ,ಕೊಟ್ಟರೆ ತಪ್ಪು ಎಂದು ನನಗೆ ಅನಿಸುವುದಿಲ್ಲ. ಸಣ್ಣ ಪ್ರಾಯಾದಲ್ಲಿ ಮಕ್ಕಳು ಸಸ್ಯಹಾರಿ ಇದ್ದರೆ ಸಸ್ಯಹಾರಿಯಾಗಿಯೇ ಇರುತ್ತಾರೆ. ಆದರೆಬೆಳೆದು ದೊಡ್ಡವರಾದ ಮೇಲೆ ಅವರು ಬದಲಾಗುವುದು ಉಂಟು . ಮೊಟ್ಟೆಯನ್ನು ಮಕ್ಕಳಿಗೆ ವಿತರಿಸುವ ಸಂದರ್ಭದಲ್ಲಿ ಪ್ರತ್ಯೇಕವಾಗಿ ಕೊಡುವ ವ್ಯವಸ್ಥೆ ಮಾಡಬಹುದು.ಕೆಲವೊಮ್ಮೆ ಸಸ್ಯಹಾರಿ ಮಕ್ಕಳಿಗೆ ಮೊಟ್ಟೆ ತಿನ್ನುವುದನ್ನು ನೋಡುವಾಗ ಬೇರೆ ತೆರನಾದ ಭಾವನೆಗಳು ಬರಬಹುದು. ಹೀಗಾಗಿ ಇದಕ್ಕೆ ಶಾಲೆಯಲ್ಲಿ ಪ್ರತ್ಯೇಕ ವ್ಯವಸ್ಥೆಗಳನ್ನು ಮಾಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಕ್ಕಳಿಗೆ ಮೊಟ್ಟೆ ಕೊಡದೇ ಇರುವುದು ಸೂಕ್ತವಾದ ನಿರ್ಧಾರವಲ್ಲ.ಇತರ ಮಕ್ಕಳು ಮೊಟ್ಟೆ ತಿನ್ನುವುದನ್ನು ನೋಡಿ ಮಕ್ಕಳು ಪ್ರಭಾವಿತರಾಗುವುದು ಇಲ್ಲ. ಹೀಗಾಗಿ ಮಕ್ಕಳಿಗೆ ಮೊಟ್ಟೆ ನೀಡುವುದು ಸೂಕ್ತ ಎಂದು ಸರ್ಕಾರದ ನಿರ್ಧಾರದ ಬಗ್ಗೆ ಶಾಸಕರು ಬೆಂಬಲ ವ್ಯಕ್ತಪಡಿಸಿದರು.