ಉಡುಪಿ, ಡಿ 10(DaijiworldNews/MS): ಉಡುಪಿ ಜನತೆಯ ಹಲವಾರು ವರ್ಷಗಳ ಬೇಡಿಕೆಯಾಗಿದ್ದ ತೀರ್ಥಹಳ್ಳಿ - ಮಲ್ಪೆ ರಾಷ್ಟ್ರೀಯ ಹೆದ್ದಾರಿ - 169A ಹೆದ್ದಾರಿಯ ಆದಿ ಉಡುಪಿಯಿಂದ ಮಲ್ಪೆ ವರೆಗೆ ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿಪಡಿಸುವ ಯೋಜನೆಗೆ ಟೆಂಡರ್ ನೋಟಿಫಿಕೇಶನ್ ಆಗಿದ್ದು, ಜನವರಿ 25 ಕ್ಕೆ ಟೆಂಡರ್ ಬಿಡ್ ತೆರೆದು ತಕ್ಷಣದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳುವ ಪ್ರಕ್ರಿಯೆ ಆರಂಭಗೊಳ್ಳಲಿದೆ.
ಸಾಂದರ್ಭಿಕ ಚಿತ್ರ
ಪ್ರವಾಸೋದ್ಯಮ ಹಾಗೂ ಮೀನುಗಾರಿಕೆ ವಲಯದ ಅಭಿವೃದ್ಧಿಯ ದೃಷ್ಟಿಯಿಂದ ಆದಿ ಉಡುಪಿಯಿಂದ ಮಲ್ಪೆ ವರೆಗಿನ ರಸ್ತೆ ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿಗೊಳಿಸುವುದು ಪ್ರಮುಖ ಬೇಡಿಕೆಯಾಗಿರುತ್ತದೆ. ಈ ನಿಟ್ಟಿನಲ್ಲಿ ಮುತುವರ್ಜಿವಹಿಸಿ ಯೋಜನೆಗೆ ಅನುಮೋದನೆ ದೊರಕುವವರೆಗೆ ನಿರಂತರವಾಗಿ ಪ್ರಯತ್ನಿಸಿ ಶ್ರಮವಹಿಸಿದ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವರು ಉಡುಪಿ - ಚಿಕ್ಕಮಗಳೂರು ಸಂಸದರಾದ ಶೋಭಾ ಕರಂದ್ಲಾಜೆ ಹಾಗೂ ಯೋಜನೆಗೆ ಅನುಮೋದನೆ ನೀಡಿದ ಕೇಂದ್ರ ಭೂ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರಿಗೆ ಉಡುಪಿ ಜನತೆಯ ಪರವಾಗಿ ಶಾಸಕ ರಘುಪತಿ ಭಟ್ ಅವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.
ರೂ. 355.72 ಕೋಟಿ ಮೊತ್ತದ ಈ ಯೋಜನೆಯಲ್ಲಿ ತೀರ್ಥಹಳ್ಳಿ - ಮಲ್ಪೆ ರಾಷ್ಟ್ರೀಯ ಹೆದ್ದಾರಿ - 169A ರ ಹೆದ್ದಾರಿ ಹಾದು ಹೋಗುವ ಆದಿ ಉಡುಪಿಯಿಂದ ಮಲ್ಪೆ ವರೆಗೆ ಹಾಗೂ ಪರ್ಕಳದಿಂದ ಹಿರಿಯಡ್ಕ ವರೆಗೆ ಚತುಷ್ಪಥ ಮತ್ತು ಹಿರಿಯಡ್ಕದಿಂದ ಹೆಬ್ರಿ ವರೆಗೆ ದ್ವಿಪಥವಾಗಿ ಅಭಿವೃದ್ಧಿ ಪಡಿಸಲಾಗುವುದು.
ತೀರ್ಥಹಳ್ಳಿ - ಮಲ್ಪೆ ರಸ್ತೆ ಅಭಿವೃದ್ಧಿ ಗೊಂಡರೆ ಪ್ರವಾಸಿ ತಾಣ ಆಗಿರುವ ಮಲ್ಪೆಗೆ ಉದ್ಯಮಗಳಿಗೆ ಮರುಜೀವ ನೀಡಿದಂತಾಗುತ್ತದೆ. ಪ್ರಸ್ತುತ ಮಲ್ಪೆ ಆದಿ-ಉಡುಪಿ ರಸ್ತೆ, ಹಿರಿಯಡ್ಕದಿಂದ ಹೆಬ್ರಿಯವರೆಗೆ ಕಿರಿದಾದ ರಸ್ತೆ ಇದ್ದು ವಾಹನ ದಟ್ಟಣೆಯಿಂದ ಚಾಲಕರು ಕಿರಿಕಿರಿ ಅನುಭವಿಸುವಂತಾಗಿತ್ತು. ವಾರಾಂತ್ಯದಲ್ಲಂತೂ ಒಂದು ಕಿಮಿ ಉದ್ದದ ವಾಹನಗಳ ಸಾಲು ನಿಲ್ಲುತ್ತದೆ. ಈಗಾಗಲೆ ರಸ್ತೆ ಯುದ್ದಕ್ಕೂ ಹೊಂಡಗುಂಡಿಗಳು ತುಂಬಿದ್ದು, ಅಲ್ಲಲ್ಲಿ ಅಗೆದು ಹಾಕಿ ವಾಹನ ಚಾಲಕರು ಪರದಾಡುವ ಸ್ಥಿತಿ ಇದೆ. ಹಾಗಾಗಿ ಈ ರಸ್ತೆ ಚತುಷ್ಪಥವಾದರೆ ವಾಹನ ಸಂಚಾರಕ್ಕೆ ನಿರಾಳವಾಗುತ್ತದೆ.