ಉಡುಪಿ, ಡಿ.09 (DaijiworldNews/PY): "ಆಹಾರದ ವಿಷಯದಲ್ಲಿ ಎಲ್ಲರಿಗೂ ಸ್ವಾತಂತ್ರ್ಯವಿದೆ. ಮಕ್ಕಳಿಗೆ ತಿಳಿವು ಇರುವುದಿಲ್ಲ. ಮನೆಯಲ್ಲಿ ರೂಢಿಸಿಕೊಂಡು ಬಂದಿರುವಂತಹ ಆಹಾರ ಪದ್ದತಿಯನ್ನು ಬದಲಿಸಬಾರದು. ಸರಕಾರ ಸಾಮೂಹಿಕವಾಗಿ ಮೊಟ್ಟೆ ಕೊಟ್ಟರೆ ಸಮಾಜಕ್ಕೆ ಕೆಟ್ಟ ಅಭಿಪ್ರಾಯವನ್ನು ಕೊಟ್ಟಂತಾಗುತ್ತದೆ. ಮೊಟ್ಟೆ ಕೊಡುವ ಬದಲು ಎಲ್ಲ ಮಕ್ಕಳಿಗೆ ಅದರ ಹಣವನ್ನು ನೀಡಲಿ. ಶಾಲೆ ಇರುವುದು ಶಿಕ್ಷಣಕ್ಕಾಗಿ, ಅಲ್ಲಿ ಜೀವನದ ಶೈಲಿಯನ್ನು ಬದಲಿಸುವುದಕ್ಕೆ ಕೈ ಹಾಕಬಾರದು. ಮಕ್ಕಳಲ್ಲಿ ಮತಬೇಧ ಉಂಟಾಗುವಂತೆ ಮಾಡಬಾರದು, ನಮ್ಮ ಕಳಕಳಿಯ ವಿನಂತಿ" ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥರು ಹೇಳಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು, "ಮತಾಂತರದ ಚಟುವಟಿಕೆಯಿಂದಾಗಿ ಮಂಗಳೂರಿನಲ್ಲಿ ನಾಲ್ಕು ಮಂದಿ ಅಸುನೀಗಿದ್ದನ್ನು ಕಾಣುತ್ತಿದ್ದೇವೆ. ಮತಾಂತರದ ಹಾವಳಿ ಒಂದು ಕುಟುಂಬವನ್ನೇ ಬಲಿ ತೆಗದುಕೊಂಡಂತಾಗಿದೆ. ಇಂತಹ ಪ್ರವೃತ್ತಿಯನ್ನು ಯಾರೂ ಮಾಡಬಾರದು ಎಂದು ಅಪೇಕ್ಷಿಸುತ್ತಿದ್ದೇವೆ. ಮನೆ ಮನೆಯೊಳಗೇ, ಸಮಾಜದೊಳಗೆ ವೈಮನಸ್ಸನ್ನು ಆತಂಕವನ್ನು ಹುಟ್ಟು ಹಾಕುವಂಥ ಈ ಮತಾಂತರ ಪ್ರಕ್ರಿಯೆಯನ್ನು ಕಾನೂನು ಮೂಲಕ ಅದನ್ನು ವಿರೋಧಿಸಬೇಕು" ಎಂದಿದ್ದಾರೆ.
"ಸಹಜವಾಗಿ ಯಾರಿಗೆ ಮತಾಂತರ ಆಗುವ ಅಭಿಪ್ರಾಯ ಇದೆ ಯಾರ ಅಡ್ಡಿಯೂ ಇಲ್ಲ. ಆದರೆ ಬಲವಂತ, ಆಮಿಷಗಳ ಮೂಲಕ ಮುಂದಾದರೆ ಮನೆಯನ್ನು ಒಡೆದಂತಾಗುತ್ತದೆ. ಕುಟುಂಬ ಒಡೆದಂತಾಗುತ್ತದೆ. ಸಮಾಜವನ್ನು ಒಡೆದಂತಾಗುತ್ತದೆ. ಇದು ಕೆಟ್ಟ ಗಾಳಿ ಎಂದು ಭಾವಿಸುತ್ತೇವೆ. ಸರಕಾರ ಇದನ್ನು ಕಾನೂನು ಮೂಲಕ ನಿಗ್ರಹ ಮಾಡಬೇಕು ಎಂದು ಕೇಳಿಕೊಳ್ಳುತ್ತೇವೆ" ಎಂದು ಸರಕಾರಕ್ಕೆ ಮನವಿ ಮಾಡಿದ್ದಾರೆ.
ಬಿಪಿನ್ ರಾವತ್ ನಿಧನದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ತಾವು ಕರ್ತವ್ಯದಲ್ಲಿರುವಾಗಲೇ ದುರಂತದಲ್ಲಿ ಅಸುನೀಗಿದ್ದಾರೆ. ದೇಶದ ಸೇವೆಯಲ್ಲಿರುವಾಗಲೇ ಈ ದುರಂತ ನಡೆದಿದೆ. ಅವರ ಈ ತ್ಯಾಗ ಸಮಾಜಕ್ಕೆ ತುಂಬಲಾರದ ನಷ್ಟ. ಅವರ ಜೊತೆಗೆ ಅನೇಕ ಯೋಧರೂ ಕೂಡ ಪ್ರಾಣ ಕಳೆದುಕೊಂಡಿದ್ದಾರೆ. ಅವರೆಲ್ಲರಿಗೂ ದೇವರು ಸದ್ಗತಿ ನೀಡಲಿ. ದೇವನಿಗೆ ಇಲ್ಲಿಯ ಸೇನಾನಿ ಬೇಕೇನೋ ಎಂಬಂತೆ ಅಲ್ಲಿಗೆ ಕರೆದುಕೊಂಡು ಹೋಗಿದ್ದಾನೆ. ಮತ್ತೆ ಮತ್ತೆ ಅಂತಹ ಯೋಧರು ಈ ಭೂಮಿಯಲ್ಲಿ ಹುಟ್ಟಿ ಬರುವಂತೆ ಅನುಗ್ರಹಿಸಲಿ" ಎಂದಿದ್ದಾರೆ.