ಮಂಗಳೂರು,ನ 08 (DaijiworldNews/MS): ಇಬ್ಬರು ಮಕ್ಕಳ ಸಹಿತ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ತಿರುವು ಪಡೆದಿದ್ದು , ಪ್ರಾಥಮಿಕ ಮಾಹಿತಿ ಪ್ರಕಾರ ಆತ್ಮಹತ್ಯೆಗೆ ಕೌಟುಂಬಿಕ ಕಲಹ ಹಾಗೂ ಮತಾಂತರವೇ ಪ್ರಮುಖ ಕಾರಣ ಎನ್ನಲಾಗಿದೆ. ಆತ್ಮಹತ್ಯೆ ಮಾಡಿಕೊಂಡ ನಾಗೇಶ್ ಶೇರಿಗುಪ್ಪ ಡೆತ್ ನೋಟ್ ಬರೆದಿಟ್ಟಿದ್ದು , ಅದರಲ್ಲಿ ಮತಾಂತರದ ಭೀತಿ ಹಾಗೂ ಕೌಟುಂಬಿಕ ಕಲಹವನ್ನು ಪ್ರಸ್ತಾಪಿಸಿದ್ದಾರೆ.
ಈ ಘಟನೆ ಕುರಿತು ಮಾತನಾಡಿರುವ ಪೊಲೀಸ್ ಆಯುಕ್ತ ಶಶಿಕುಮಾರ್, " ಡೆತ್ ನೋಟ್ ಹಾಗೂ ಸದ್ಯ ಸಿಕ್ಕ ಮಾಹಿತಿಯಂತೆ ಪ್ರಕರಣದಲ್ಲಿ, " ಕೌಟುಂಬಿಕ ಕಲಹ ಮತ್ತು ಮತಾಂತರ ಭೀತಿ ಮೇಲ್ನೋಟಕ್ಕೆ ಕಂಡುಬಂದಿದೆ. ನಾಗೇಶ್ ಶೇರಿಗುಪ್ಪ, ಹೆಂಡತಿ ವಿಜಯಲಕ್ಷ್ಮಿಗೆ ಹಲ್ಲೆ ನಡೆಸಿದ್ದು
ಹೀಗಾಗಿ ಕಳೆದ ಎರಡು ತಿಂಗಳ ಹಿಂದೆ ಪತ್ನಿ ಮನೆ ಬಿಟ್ಟು ಹೋಗಿದ್ದು ಬಳಿಕ ಆಕೆಯನ್ನು ಪತ್ತೆ ಹಚ್ಚಿ ಪೊಲೀಸ್ ಠಾಣೆಯಲ್ಲಿ ದಂಪತಿಗಳಿಗಿಬ್ಬರಿಗೂ ಬುದ್ದಿ ಹೇಳಿ ಸರಿಪಡಿಸಲಾಗಿತ್ತು.
ನಾಗೇಶ್ ಶೇರಿಗುಪ್ಪ ಬರೆದ ಡೆತ್ ನೋಟ್ ನಲ್ಲಿ ನೂರ್ ಜಹಾನ್ ಎಂಬ ಮಹಿಳೆಯ ಹೆಸರನ್ನು ಉಲ್ಲೇಖಿಸಿದ್ದು , ಆಕೆಯೇ ನಮ್ಮ ಸಾವಿಗೆ ಕಾರಣ. ಪತ್ನಿಯನ್ನು ತನ್ನ ಧರ್ಮಕ್ಕೆ ಮತಾಂತರಕ್ಕೆ ಯತ್ನಿಸುತ್ತಿದ್ದಾಳೆ. ಇದೇ ಕಾರಣಕ್ಕೆ ಪತ್ನಿ ವಿಜಯಲಕ್ಷ್ಮಿ ಆಗಾಗ ಮನೆ ಬಿಟ್ಟು ಹೋಗುತ್ತಿದ್ದಳು ಎಂದು ನಾಗೇಶ್ ಆರೋಪಿಸಿದ್ದಾರೆ. ವಿಜಯಲಕ್ಷ್ಮಿ ನೂರ್ ಜಹಾನ್ ಮನೆಯಲ್ಲಿ ಮನೆ ಕೆಲಸಮಾಡುತ್ತಿದ್ದು ಪ್ರಕರಣಕ್ಕೆ ಸಂಬಂಧಿಸಿ ನೂರ್ಜಾನ್ ನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿದೆ " ಎಂದು ಮಾಹಿತಿ ನೀಡಿದ್ದಾರೆ.
ಮೂಲತಃ ಬಾಗಲಕೋಟೆ ಬೀಳಗಿಯ ಸುನಗ್ ಗ್ರಾಮದವರಾಗಿದ್ದ ಕುಟುಂಬ ಕಳೆದ ೮ ವರ್ಷಗಳಿಂದ ಮಂಗಳೂರಿನಲ್ಲಿ ನೆಲೆಸಿತ್ತು.
ಹಿಂದಿನ ವರದಿ:
ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾದ ಘಟನೆ ದಾರುಣ ಘಟನೆ ನಗರದ ಮೋರ್ಗನ್ಸ್ ಗೇಟ್ ಬಳಿ ಡಿ. 08 ರ ಬುಧವಾರ ಬೆಳಕಿಗೆ ಬಂದಿದೆ.
ಮೃತರನ್ನು ನಾಗೇಶ ಶೇರಿಗುಪ್ಪಿ(30), ವಿಜಯಲಕ್ಷ್ಮಿ ( 26), ಸಪ್ನಾ (8 ) ಸಮರ್ಥ್ (4 ) ಎಂದು ಗುರುತಿಸಲಾಗಿದೆ. ಮೂಲತಃ ಬಾಗಲಕೋಟೆ ಬೀಳಗಿಯ ಸುನಗ್ ಗ್ರಾಮದವವರಾಗಿರುವ ಇವರು ಮಂಗಳೂರಿನಲ್ಲಿ ನೆಲೆಸಿ ಕೆಲಸ ಮಾಡುತ್ತಿದ್ದರು . ನಾಗೇಶ್ ಡ್ರೈವರ್ ಆಗಿ ದುಡಿಯುತ್ತಿದ್ದರೆ , ವಿಜಯಲಕ್ಷ್ಮಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು.
ನಾಗೇಶ್ ಅವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿದ್ದರೆ, ವಿಜಯಲಕ್ಷ್ಮೀ ಮತ್ತು ಮಕ್ಕಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ