ಕಾರ್ಕಳ, ಡಿ.08 (DaijiworldNews/PY): ಇಲ್ಲಿನ ಕುಂಟಲ್ಪಾಡಿ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದ ಗೀತಾ (68) ಅವರು ಬೆಂಕಿ ತಗುಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು, ಅವರ ಸಾವಿಗೆ ಸಂಬಂಧಿಸಿ ಪುತ್ರಿ ಅನುಮಾನ ವ್ಯಕ್ತಪಡಿಸಿದ್ದಾರೆ.
ಗೀತಾ ಅವರ ಪುತ್ರಿ ಧನಶ್ರೀ ಕುಡ್ವ ಮೂಡುಬಿದಿರೆಯಲ್ಲಿ ಪತಿಯ ಮನೆಯಲ್ಲಿ ವಾಸವಾಗಿದ್ದು, ಕಾಲೇಜೊಂದರಲ್ಲಿ ಅಧ್ಯಾಪಕಿಯಾಗಿದ್ದರು. ಧನಶ್ರೀ ಅವರ ತಂದೆ ಸುರೇಂದ್ರ ಕುಡ್ವ (70) ಹಾಗೂ ತಾಯಿ ಗೀತಾ ಅವರು ಕಾರ್ಕಳದ ಕುಂಟಲ್ಪಾಡಿ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದರು. ಡಿ.6ರಂದು ಪಕ್ಕದ ಫ್ಲಾಟ್ನವರು ಧನಶ್ರೀ ಅವರಿಗೆ ಕರೆ ಮಾಡಿ ತಾಯಿಗೆ ಬೆಂಕಿಯಿಂದ ಸುಟ್ಟ ಗಾಯಗಳಾಗಿವೆ ಎಂದು ತಿಳಿಸಿದ್ಧಾರೆ. ಬಳಿಕ ಫ್ಲಾಟ್ನಲ್ಲಿದ್ದವರು ಗೀತಾ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆಸ್ಪತ್ರೆಗೆ ಬಂದ ಪುತ್ರಿ ತಾಯಿಯ ಬಳಿ ಘಟನೆಯ ಬಗ್ಗೆ ಕೇಳಿದ್ದಾರೆ. ಗೀತಾ ಅವರ ಇಡೀ ದೇಹದಲ್ಲಿ ಸುಟ್ಟ ಗಾಯಗಳಾಗಿದ್ದು, ಕಾರ್ಕಳ ಆಸ್ಪತ್ರೆಯಿಂದ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಡಿ.7ರಂದು ಸಾವನ್ನಪ್ಪಿದ್ದಾರೆ.
ತಾಯಿಯ ಸಾವಿನ ಬಗ್ಗೆ ಅನುಮಾನ ಇರುವುದಾಗಿ ಪುತ್ರಿ ಧನಶ್ರೀ ಪೊಲೀಸರಲ್ಲಿ ತಿಳಿಸಿದ್ದು, ಬೆಂಕಿಯಲ್ಲಿ ಸುಡುತ್ತಿರುವ ತಾಯಿಯನ್ನು ನೋಡಿಯೂ ತಂದೆ ಏನೂ ಮಾಡದೇ ಹಾಗೆ ಎದುರು ನಿಂತಿದ್ದರು ಎಂದು ಫ್ಲಾಟ್ನ ಇತರ ಮನೆಯವರು ತಿಳಿಸಿದ್ದಾರೆ. ಹಾಗಾಗಿ ತಾಯಿಯ ಸಾವಿನಲ್ಲಿ ಅನುಮಾನ ಇರುವುದಾಗಿ ಹೇಳಿದ್ದಾರೆ.
ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.