ಮಂಗಳೂರು, ಡಿ.08 (DaijiworldNews/PY): "ಹಿಂದುತ್ವ, ಆರ್ಥಿಕ ಹಾಗೂ ವಿದೇಶಾಂಗ ನೀತಿಗಳು ಸೇರಿದಂತೆ ಬಿಜೆಪಿ ತನ್ನ ಮೂಲ ಸಿದ್ದಾಂತದಿಂದ ಹಿಂದೆ ಸರಿಯುತ್ತಿದ್ದು, ಈ ಸಮಸ್ಯೆಗಳನ್ನು ಮೊದಲು ಪರಿಹರಿಸಬೇಕು ಎಂಬುದು ನನ್ನ ನಿಲುವು. ನಾನು ಪ್ರಧಾನಿ ನರೇಂದ್ರ ಮೋದಿಯವರನ್ನು ವಿರೋಧಿಸುವುದಿಲ್ಲ ಆದರೆ ಅವರು ಅನುಸರಿಸುತ್ತಿರುವ ನೀತಿಗಳನ್ನು ವಿರೋಧಿಸುತ್ತೇನೆ" ಎಂದು ಕೇಂದ್ರ ಮಾಜಿ ಸಚಿವ ಹಾಗೂ ರಾಜ್ಯಸಭಾ ಸದಸ್ಯ ಡಾ. ಸುಬ್ರಮಣಿಯನ್ ಸ್ವಾಮಿ ಹೇಳಿದ್ಧಾರೆ.
ಉಡುಪಿ ಹಾಗೂ ಶೃಂಗೇರಿ ಭೇಟಿಯ ಹಿನ್ನೆಲೆ ಮಂಗಳವಾರ ಮಂಗಳೂರಿಗೆ ಆಗಮಿಸಿದ ವೇಳೆ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಡಾ. ಬಿ.ಎಂ. ಹೆಗ್ಡೆ ಅವರ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
"ಚೀನಾದ ಆಕ್ರಮಣಕಾರಿ ನೀತಿಯ ವಿರುದ್ದ ನರೇಂದ್ರ ಮೋದಿ ಸರ್ಕಾರದ ದುರ್ಬಲ ನಿಲುವಿನ ಕುರಿತು ತೀವ್ರ ಅಸಮಾಧನ ಹೊಂದಿದ್ದೇನೆ. ಉತ್ತರಾಖಂಡದಲ್ಲಿ ಪುರಾತನ ದೇವಾಲಯಗಳನ್ನು ಸ್ವಾಧೀನಪಡಿಸಿಕೊಳ್ಳುವ ಸರ್ಕಾರದ ಪ್ರಯತ್ನಗಳ ವಿರುದ್ಧ ಹೋರಾಡಿದ್ದೇನೆ. ರಾಮಸೇತು ಒಡೆಯುವುದರ ವಿರುದ್ದ ನ್ಯಾಯಾಲಯದ ಮೆಟ್ಟಿಲೇರಿ ತಡೆಯಾಜ್ಞೆ ತಂದಿದ್ದೆ. ಮೋದಿ ಸರ್ಕಾರ ರಾಮಸೇತುವನ್ನು ಪಾರಂಪರಿಕ ತಾಣವನ್ನಾಗಿ ಮಾಡಿಲ್ಲ. ಈ ಬಗ್ಗೆ ನನ್ನ ಅಸಮಾಧಾನವನ್ನು ಪತ್ರಗಳ ಮೂಲಕ ಹಲವಾರು ಬಾರಿ ಗಮನಕ್ಕೆ ತಂದಿದ್ದೇನೆ" ಎಂದಿದ್ದಾರೆ.
"ನಾನು ಜನಸಂಘದೊಂದಿಗೆ ಇದ್ದವನು. ಮೋದಿ ನೀತಿಯ ಕುರಿತು ಅಸಮಾಧಾನವಿದೆಯೇ ಹೊರತು ಬಿಜೆಪಿಯ ಬಗ್ಗೆ ಅಲ್ಲ. ಬಿಜೆಪಿ ತೊರೆಯುವ ಪ್ರಶ್ನೆಯೇ ಇಲ್ಲ. ಇನ್ನು ಮುಂದೆಯೂ ನಾನು ಬಿಜೆಪಿಯಲ್ಲೇ ಇರುತ್ತೇನೆ" ಎಂದು ಹೇಳಿದ್ದಾರೆ.
"ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ನನ್ನ ಹಳೆಯ ಸ್ನೇಹಿತೆ. ನವದೆಹಲಿಯಲ್ಲಿ ಅವರನ್ನು ಭೇಟಿ ಮಾಡಿರುವುದಕ್ಕೆ ಯಾವುದೇ ರೀತಿಯಾದ ರಾಜಕೀಯ ಅರ್ಥ ಕಲ್ಪಿಸುವುದು ಬೇಡ. ಈ ಹಿಂದೆ ಪಶ್ಚಿಮ ಬಂಗಾಳದಲ್ಲಿ ಹಿಂದೂ ದೇವಾಲಯಗಳ ಕುರಿತು ಚರ್ಚಿಸಿದ್ದು, ಅವರಿಗೆ ಹಿಂದೂಗಳ ಭಾವನೆಗಳನ್ನು ತಿಳಿಸಿದ್ದೇನೆ" ಎಂದಿದ್ದಾರೆ.
ಸುಬ್ರಮಣಿಯನ್ ಸ್ವಾಮಿ ಅವರು ಬುಧವಾರ ಬೆಳಗ್ಗೆ ಶೃಂಗೇರಿಗೆ ತೆರಳಿ ಮಧ್ಯಾಹ್ನ ಉಡುಪಿಯ ರಾಜಾಂಗಣದಲ್ಲಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ಧಾರೆ.