ಉಡುಪಿ, ಡಿ.08DaijiworldNews/PY): "ಈಗಿನ ಶಿಕ್ಷಣ ಪದ್ದತಿ ಬದಲಾಗಬೇಕಿದೆ. ಇದರ ಬಗ್ಗೆ ಸ್ಪಷ್ಟ ಕಲ್ಪನೆ ಯಾರಿಗೂ ಇಲ್ಲ ಬ್ರಿಟಿಷರ ಇಂಗ್ಲಿಷ್ ಭಾಷೆಯಿಂದ ಸಮಸ್ಯೆ ಆಗಿಲ್ಲ ಬ್ರಿಟೀಷ್ ಶಿಕ್ಷಣ ಪದ್ದತಿಯಿಂದ ಬದಲಾಗಿದೆ. ಮುಂದೆ ಪಠ್ಯಗಳನ್ನು ಬರೆಯುವಾಗ ಪಾಶ್ಚಾತ್ಯರ ನೆರಳಿನಿಂದ ಹೊರಬರಬೇಕು. ಬ್ರಿಟೀಷರ ಮೂಲಚಿಂತನೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಬ್ರಿಟೀಷರ ಸರಪಳಿಯನ್ನು ನಮಗೆ ನಾವೇ ಸುತ್ತಿಕೊಂಡು ಒದ್ದಾಡುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿಯೇ ಮೂಲಸ್ವರೂಪ ಬದಲಾಗಬೇಕು. ಶಿಕ್ಷಣ ಕ್ರಾಂತಿ ವ್ಯವಸ್ಥೆಯಲ್ಲಿ ಆಗಬೇಕಿದೆ" ಎಂದು ಖ್ಯಾತ ಅಂಕಣಕಾರ ರೋಹಿತ್ ಚಕ್ರತೀರ್ಥರು ತಿಳಿಸಿದರು.
ಅವರು ಮಂಗಳವಾರದಂದು ಉಡುಪಿ ಶ್ರೀಕೃಷ್ಣ, ಪರ್ಯಾಯ ಶ್ರೀಅದಮಾರು ಮಠದ ವತಿಯಿಂದ ಪರ್ಯಾಯ ಮಂಗಲೋತ್ಸವದ ವಿಶ್ವಾರ್ಪಣಮ್ ಕಾರ್ಯಕ್ರಮದ ಅಂಗವಾಗಿ ರಾಜಾಂಗಣದ ಶ್ರೀನರಹರಿ ತೀರ್ಥ ವೇದಿಕೆಯಲ್ಲಿ ನಡೆದ ಮೂರನೇ ದಿನದ ವಿಶ್ವಾರ್ಪಣಮ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಿಕ್ಷಣ ವಿಮರ್ಶೆ ಮತ್ತು ಮಕ್ಕಳಿಗೆ ಎಂತಹ ಶಿಕ್ಷಣ ಬೇಕು ಎಂಬ ವಿಷಯದ ಕುರಿತಾಗಿ ವಿಶೇಷ ಉಪನ್ಯಾಸ ನೀಡಿದರು.
"ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸರ್ಕಾರ ಜಾರಿಗೆ ತಂದಿದೆ. ಅ ಹೊರಗಡೆಯಿಂದ ತಿದ್ದುಪಡಿ ಮಾಡುವ ಬದಲಾಗಿ ಮೂಲ ಸ್ವರೂಪದಲ್ಲಿ ಬದಲಾಯಿಸಬೇಕು. ಅದು ಭಾರತೀಯ ಸಂಸ್ಕೃತಿಯನ್ನು ಕಟ್ಟಿಕೊಡುವಂತಿರಬೇಕು. ಮೊದಲು ನಾವು ಪಾಶ್ಚಾತ್ಯ ಶಿಕ್ಷಣ ಪದ್ದತಿಯಿಂದ ಬಿಡುಗಡೆ ಹೊಂದಬೇಕು. ಈಗಿನ ಶಿಕ್ಷಣ ತಜ್ಞರಿಗೆ ಭಾರತೀಯ ಸಂಸ್ಕೃತಿ ಬಗ್ಗೆ ಗೊತ್ತಿಲ್ಲ. ಗುರುಕುಲ ಪದ್ಧತಿಯಲ್ಲಿ ಸಾಮರ್ಥ್ಯವನ್ನು ಪ್ರದರ್ಶಿಸುವ ಅವಕಾಶ ಇತ್ತು. ಕಲಿಕೆಯನ್ನು ಹೇರುತ್ತಿರಲಿಲ್ಲ. ಈಗ ಪ್ರಮಾಣಪತ್ರ ವನ್ನು ಸಂಪಾದನೆ ಮಾಡಿದರೆ ಸಾಕು. ಆದರೆ ನಾವು ಕಲಿಯುವ ಶಿಕ್ಷಣ ಮತ್ತು ವೃತ್ತಿಗೆ ಯಾವುದೇ ಸಂಬಂಧವಿಲ್ಲ. ಗಳಿಸಿಕೊಂಡ ಪದವಿ ಪ್ರಮಾಣ ಪತ್ರದ ಮೇಲೆ ಅರ್ಹತೆಯನ್ನು ಲೆಕ್ಕಾಚಾರ ಮಾಡಲಾಗುತ್ತಿದೆ, ನಿಜವಾದ ಸಾಮರ್ಥ್ಯವನ್ನಲ್ಲ. ಆದರೆ ಗುರುಕುಲ ಪದ್ಧತಿಯಲ್ಲಿ ಹಾಗಿಲ್ಲ. ಇಲ್ಲಿ ಜಾತಿವ್ಯವಸ್ಥೆಯೂ ಇರಲಿಲ್ಲ. ಯಾರು ಯಾವುದರ ಮೇಲೆ ಅರ್ಹನಾಗಿರುತ್ತಾನೋ ಅದರ ಮೇಲೆ ಶಿಕ್ಷಣ ನೀಡಲಾಗುತ್ತಿತ್ತು" ಎಂದಿದ್ದಾರೆ.
"ಇವತ್ತಿನ ವಿಜ್ಞಾನ, ಪ್ರಸ್ತುತ ವನ್ನು ಸಮರ್ಥಿಸಬೇಕು ಎನ್ನುವಂತದ್ದು ಸರಿಯಲ್ಲ. ಹಿಂದಿನ ಪರಂಪರೆಯ ಬಗ್ಗೆ ಅಭಿಮಾನ ಇರಬೇಕು. ಇಂದಿನ ವಿದ್ಯಾರ್ಥಿಗಳು ತಮ್ಮ ಶಿಕ್ಷಣದಲ್ಲಿ ಶೃದ್ದೆ, ಪರಿಶ್ರಮ ಪ್ರಾಮಾಣಿಕತೆ ಇರಬೇಕು. ಮಾರ್ಕಿನ ಹಿಂದೆ ಓಟ ಅಲ್ಲ" ಎಂದು ರೋಹಿತ್ ಅವರು ವಿವರಿಸಿದರು.
ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಶ್ರೀಕೃಷ್ಣ ಮಠ, ಪರ್ಯಾಯ ಶ್ರೀ ಅದಮಾರು ಮಠ ಅಧ್ಯಕ್ಷ್ಯತೆ ವಹಿಸಿದ್ದು, ಅನುಗ್ರಹ ಸಂದೇಶ ನೀಡಿದರು
ಬೆಂಗಳೂರಿನ ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನದ ಶ್ರೀ ವಿಖ್ಯಾತಾನಂದ ಸ್ವಾಮೀಜಿ ತಮ್ಮ ಅನುಗ್ರಹ ಸಂದೇಶದಲ್ಲಿ, "ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿಶ್ವ ಚಿಕ್ಕದಾಗುತ್ತಿದೆ. ವಿಶ್ವವನ್ನು ಆಳುವ ಶಕ್ತಿಯನ್ನು ಭಾರತ ಪಡೆಯುತ್ತಿತ್ತು. ಆ ಹಿನ್ನೆಲೆಯಲ್ಲಿ ಕೆಲಸಮಾಡಿದ್ದರೆ ಬಹುಶಃ ಭಾರತ ಅಮೇರಿಕಾದ ಸ್ಥಾನ ಪಡೆಯುತ್ತಿತ್ತು. ಆದರೆ, ನಮ್ಮ ಸಂಕುಚಿತ ಮನೋಭಾವನೆ, ಕುಪಿತ ಚಿಂತನೆ, ರಾಜಕೀಯ ಕುಬುದ್ದಿಯಿಂದ ನಾಶದ ಪಥಹತ್ತಿದೆವು. ಭಾಷೆ ಯಾವುದೇ ಇರಲಿ, ಭಾರತೀಯ ಸಂಸ್ಕೃತಿಯನ್ನು ಬಿಡಬಾರದು. ಜಗತ್ತಿನಲ್ಲಿ ಅದೆಷ್ಟು ಭಯೋತ್ಪಾದಕರು ವಿದ್ಯಾವಂತರೇ ಆಗಿದ್ದಾರೆ" ಎಂದು ಹೇಳಿದ್ದಾರೆ.
"ಕೊರೊನಾ ಸಂದರ್ಭದಲ್ಲಿ ಅದೆಷ್ಟೊ ಮಂದಿ ಮೂಲಸೌಕರ್ಯ ದ ಕೊರತೆಯಿಂದ ಮತಾಂತರ ಹೊಂದಿದ್ದಾರೆ. ನಮ್ಮಲೂ ಆ ಸಂಕಷ್ಟದ ಸಮಯದಲ್ಲಿ ಅಕ್ಕಿಯನ್ನು ಕೊಟ್ಟಿದ್ದಾರೆ . ಆದರೆ ಅದನ್ನು ಕೊಡುವ ಶೈಲಿ, ಅದರ ಹಿಂದಿನ ಮಾತುಗಳು ಅವರ ಅಭಿಮಾನಕ್ಕೆ ದಕ್ಕೆ ತಂದಿತು. ನಮ್ಮಲ್ಲಿ ವಿಶಾಲ ಮನೋಭಾವದ ಕೊರತೆ ಇದೆ. ಮತಾಂತರಕ್ಕೆ ಒಳಗಾದವರನ್ನು ವಾಪಸು ಬನ್ನಿ ಸಂತೋಷದಿಂದ ಸ್ವೀಕರಿಸುತ್ತೇನೆ ಎನ್ನುತ್ತೇನೆ. ನಮ್ಮಲ್ಲಿ ಒಂದೆ ಜಾತಿ ವ್ಯವಸ್ಥೆ ಇದೆ. ಎಲ್ಲಾ ಜಾತಿಯವರರೂ ಸಮಾನತೆಯಿಂದ ಶಿಕ್ಷಣ ಪಡೆಯುತ್ತಿದ್ದಾರೆ. ಸಮಾನತೆ , ಪ್ರೀತಿ ವಾತ್ಸಲ್ಯದಿಂದ ಬಾಳಬೇಕು ಎನ್ನುವ ಚಿಂತನೆ ಹೊಂದಿರಬೇಕು. ಉಡುಪಿ ಮದ್ವರ ಶಕ್ತಿ ಕೇಂದ್ರ. ಅವರು ಸಮಾಜಕ್ಕೆ ನೀಡಿದ ಕೊಡುಗೆ ಪವಿತ್ರವಾದುದು. ಅವರ ಚಿಂತನೆಗಳು ಸಮಾಜದ ಏಳಿಗೆಯ ಪ್ರೇರಕ ಶಕ್ತಿಯಾಗಲಿ" ಎಂದು ಹಾರೈಸಿದರು.
ಈ ಸಂದರ್ಭ ಕಟೀಲು ದೇವಸ್ಥಾನದ ಅನುವಂಶಿಕ ಅರ್ಚಕರು, ಕಮಲಾದೇವೀಪ್ರಸಾದ ಆಸ್ರಣ್ಣ ಉಪಸ್ಥಿತರಿದ್ದರು.
ಸಾಂಸ್ಥಿಕ ಸೇವೆ ಮಾಡಿದ ಎಎಂಇಸಿಐಎಎಂಎಎಫ್, ಪಿಪಿಐಎಸ್ಆರ್, ಬೆಂಗಳೂರು ಇದರ ಹಣಕಾಸು ಸಲಹೆಗಾರ ಪಿ. ಶ್ರೀನಿವಾಸ ರಾವ್, ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಮಾಡಿದ ಡಾ. ಕೆ. ಆರ್. ನಂಬಿಯಾರ್, ಬಿಜೂರು, ಶ್ರೀಮಠದಲ್ಲಿ ಸೇವೆ ಸಲ್ಲಿಸುತ್ತಿರುವ ಕೆ. ಆರ್. ಪ್ರಸಾದ್ ಕಲ್ಕೂರ ಕೋಟೇಶ್ವರ, ಶ್ರೀಕೃಷ್ಣ ಮಠ, ಉಡುಪಿ, ಅಂಚೆ ಕ್ಷೇತ್ರದಲ್ಲಿ ಸೇವೆ ಮಾಡುತ್ತಿರುವ ಅಂಚೆ ಪೇದೆ ನರಸಿಂಹ ನಾಯಕ್ ಉಡುಪಿ ಅವರನ್ನು ಸನ್ಮಾನಿಸಲಾಯಿತು.