ಮಂಗಳೂರು, ಡಿ.07 (DaijiworldNews/SM): ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಗೋ ಕಳ್ಳತನ ಪ್ರಕರಣಗಳು, ಗೋ ಹತ್ಯೆ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಇದನ್ನು ಮಾಜಿ ಸಚಿವ ಯು.ಟಿ. ಖಾದರ್ ಖಂಡಿಸಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಗೋ ಕಳ್ಳತನ ಪ್ರಕರಣಗಳು ಹೆಚ್ಚಳವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಶಿವಮೊಗ್ಗದಲ್ಲಿ ಗೋ ಕಳ್ಳತನ ಮಾಡಿ ಸಾಗಾಟ ನಡೆಸುವ ಸಂದರ್ಭದಲ್ಲಿ ವಾಹನ ತಡೆಯಲು ಮುಂದಾದವರ ಮೇಲೆ ವಾಹನ ಚಲಾಯಿಸಿ ಕ್ರೌರ್ಯ ಮೆರೆಯಲಾಗಿತ್ತು. ಅಲ್ಲಿ ತಪ್ಪು ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳಬಹುದಿತ್ತು. ಅಥವಾ ಗೃಹ ಸಚಿವರಿಗೆ ಅಧಿಕಾರಿಗಳ ಸಭೆ ಕರೆಯಬಹುದಿತ್ತು. ಆದರೆ, ಅದನ್ನು ಸರಕಾರ ಹಾಗೂ ಗೃಹ ಸಚಿವರು ಮಾಡಿಲ್ಲ. ಬದಲಿಗೆ ಸಾರ್ವಜನಿಕವಾಗಿ ಪೊಲೀಸರ ಮಾನ ಹರಾಜು ಮಾಡುವ ಕಾರ್ಯಕ್ಕೆ ಅವರು ಮುಂದಾಗಿದ್ದರು. ಪೊಲೀಸರ ಗೌರವ ಕಡಿಮೆಗೊಳಿಸುವ ಹೇಳಿಕೆಯ ಮೂಲಕ ಗೃಹ ಸಚಿವ ಅರಗ ಜ್ಞಾನೇಂದ್ರ ಬಿಟ್ಟಿ ಪ್ರಚಾರ ಪಡೆದುಕೊಂಡಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.
ಇನ್ನು ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಗೋಕಳ್ಳತನ ಹೆಚ್ಚಾಗಿದೆ. ಹಾಗಾದರೆ ಗೋಹತ್ಯೆ ನಿಷೇಧ ಕಾನೂನು ತಂದ ಉದ್ದೇಶ ಏನು? ಎಂದು ಖಾದರ್ ಪ್ರಶ್ನಿಸಿದ್ದಾರೆ. ಕೇವಲ ಪ್ರಚಾರ ಹಾಗೂ ಚುನಾವಣೆಗಾಗಿ ಕಾನೂನು ತಂದಂತಿದೆ ಎಂದು ಖಾದರ್ ಆಕ್ರೋಶ ಹೊರಹಾಕಿದ್ದಾರೆ.