ಮಂಗಳೂರು, ಡಿ.07 (DaijiworldNews/PY): "ಸಮಾಜದ ಸಾಮರಸ್ಯ ಹಾಳುಗೆಡವುವವರ ವಿರುದ್ದ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ವಕ್ತಾರ ಜಗದೀಶ ಶೇಣವ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಕಾವೂರು ಗೋ ಕಳ್ಳತನ, ಗುಜ್ಜರಕೆರೆಯಲ್ಲಿ ವಿದ್ಯಾರ್ಥಿಗಳ ಘರ್ಷಣೆ, ನಾಗಬನ ಅಪವಿತ್ರ ಸೇರಿದಂತೆ ದ.ಕ. ಜಿಲ್ಲೆ ಹಲವು ಅಹಿತಕರ ಘಟನೆ ನಡೆಯುತ್ತಿದೆ. ಪೊಲೀಸರು ಎಲ್ಲಾ ಪ್ರಕರಣಗಳ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರೂ, ಪ್ರಕರಣದಲ್ಲಿ ಯಾರು ಭಾಗಿದ್ದಾರೆ ಎನ್ನುವ ಬಗ್ಗೆ ತನಿಖೆ ನಡೆಸಬೇಕು. ಉಪ್ಪಿನಂಗಡಿಯಲ್ಲಿ ಹಿಂದೂ ಕಾರ್ಯಕರ್ತನ ಮೇಲೆ ನಡೆದ ಹಲ್ಲೆಯನ್ನು ನಾವು ಖಂಡಿಸುತ್ತೇವೆ. ಮುಂದೆ ಈ ರೀತಿಯ ಘಟನೆ ಮರುಕಳಿಸದಂತೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂಬುದು ನಮ್ಮ ನಿರೀಕ್ಷೆ" ಎಂದಿದ್ದಾರೆ.
"ಎಂಎಲ್ಸಿ ಚುನಾವಣೆಗೆ ಬಿಜೆಪಿ ಸಕಲ ಸಿದ್ದತೆಗಳನ್ನು ನಡೆಸಿದದೆ. ನಮ್ಮಲ್ಲಿ 500 ಮತದಾರರಿದ್ದಾರೆ. ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಮಂಗಳೂರು ಉತ್ತರ ಮತ್ತು ದಕ್ಷಿಣ ಕ್ಷೇತ್ರ ಹೊರತುಪಡಿಸಿ ಮತದಾರರಿಗಾಗಿ ಸಮಾವೇಶ ಹಮ್ಮಿಕೊಂಡಿದ್ದು, ಇದು ಶೀಘ್ರದಲ್ಲಿ ಪೂರ್ಣಗೊಳ್ಳಲಿದೆ" ಎಂದು ತಿಳಿಸಿದ್ದಾರೆ.
"ಈ ಹಿಂದೆ 300ಕ್ಕೂ ಹೆಚ್ಚು ಮತಗಳು ವ್ಯರ್ಥವಾಗುತ್ತಿದ್ದವು. ಈ ಬಾರಿ ಆ ರೀತಿಯಾಗದಂತೆ ನೋಡಿಕೊಳ್ಳುತ್ತೇವೆ. ನಾವು ಬಿಜೆಪಿ ಮತಗಳನ್ನು ಹೊರತುಪಡಿಸಿ ಶೇ.17ರಷ್ಟು ಹೆಚ್ಚುವರಿ ಮತಗಳನ್ನು ಪಡೆಯುತ್ತೇವೆ" ಎಂದಿದ್ದಾರೆ.
"ಅಹಿತಕರ ಘಟನೆಗಳಲ್ಲಿ ರಾಜಕೀಯ ಪಿತೂರಿ ನಡೆಸಿರುವ ಶಂಕೆ ಇದ್ದು, ಇದು ಕಾಂಗ್ರೆಸ್ ಹಾಗೂ ಎಸ್ಡಿಪಿಐಯ ಪಿತೂರಿ ಎನ್ನುವ ಬಗ್ಗೆ ಅನುಮಾನವಿದೆ" ಎಂದು ಹೇಳಿದ್ದಾರೆ.