ಮಂಗಳೂರು, ಡಿ.07 (DaijiworldNews/PY): "ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣ ಸಂಬಂಧಿಸಿದಂತೆ, ಪ್ರಕರಣದ ಸಂತ್ರಸ್ತೆಗೆ ತನಿಖಾಧಿಕಾರಿಯಿಂದ ಕಿರುಕುಳ ಕೊಟ್ಟು ತೇಜೋವಧೆ ಮಾಡುತ್ತಿದ್ದಾದ್ದಾರೆ" ಎಂದು ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿ ಅವರು ಗಂಭೀರ ಆರೋಪ ಮಾಡಿದ್ದಾರೆ.
ಈ ಬಗ್ಗೆ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತನಿಖೆಯ ತನಿಖಾಧಿಕಾರಿಯನ್ನು ಬದಲಿಸಬೇಕಿದ್ದು, ಡಿಸಿಪಿ ಹರಿರಾಂ ಶಂಕರ್ ಅವರಿಗೆ ತನಿಖೆ ವರ್ಗಾಯಿಸುವಂತೆ ಮನವಿ ಮಾಡಿದ್ದಾರೆ.
"ಪೊಲೀಸ್ ಆಯುಕ್ತರು ನಾಲ್ಕು ತಂಡ ಮಾಡಿ ತನಿಖೆ ನಡೆಸುತ್ತೇವೆ ಎನ್ನುತ್ತಾರೆ. ಆದರೆ, ತನಿಖಾಧಿಕಾರಿ ಸಂತ್ರಸ್ತೆಯನ್ನು ಕರೆದು ಹೋರಾಟ ಏಕೆ ಮಾಡುತ್ತೀಯಾ. ಆರೋಪಿ ಹೆಂಡತಿ ಚಿಂತೆಯಲ್ಲಿದ್ದಾರೆ ಎನ್ನುತ್ತಾರೆ. ಆರೋಪಿ ಪತ್ತೆಗೆ ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದೇವೆ ಎನ್ನುತ್ತಾರೆ. ಆದರೆ, ರೈಲು ನಿಲ್ದಾಣದಲ್ಲಿ ಕೇಳಿದರೆ ಈ ಬಗ್ಗೆ ಸೂಕ್ತ ದಾಖಲೆ ನಮಗಿಲ್ಲ ಎನ್ನುತ್ತಾರೆ" ಎಂದಿದ್ದಾರೆ.
"ಮಂಗಳೂರು ಆಯುಕ್ತರ ಮೇಲೆ ಯಾವುದೇ ವೈಯುಕ್ತಿಕ ದ್ವೇಷ ಇಲ್ಲ. ಗೌರವ ಇದೆ. ಆದರೆ, ಈ ರೀತಿ ಮಾಡಿರುವುದರಿಂದ ಬೇಸರ ಆಗಿದೆ. ಆರೋಪಿ ಬಗ್ಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನ ಇಲ್ಲ" ಎಂದು ತಿಳಿಸಿದ್ದಾರೆ.
"ಹಾಡು ಹಾಡುವುದು, ಕಾರ್ಯಕ್ರಮಕ್ಕೆ ಭೇಟಿ ನೀಡುವುದು ಅದು ಅವರ ವೈಯುಕ್ತಿಕ. ಆದರೆ, ಆರೋಪಿ ಪತ್ತೆಯ ಕಾರ್ಯವನ್ನು ಮಾಡಲಿ. ರೈಲ್ವೆ ನಿಲ್ದಾಣ, ಕೋರ್ಟ್ನಲ್ಲಿ ಬೇಲ್ ಸಿಗದಂತೆ ಮಾಡಿದ್ದು, ಇದು ನಾವು ಮಾಡಿದ ಕಾರ್ಯ ಆದರೆ ಇದನ್ನು ತಾನು ಮಾಡಿದ್ದು ಎಂದು ಪ್ರಚಾರ ಪಡೆದಿದ್ದಾರೆ" ಎಂದು ಪೊಲೀಸ್ ಆಯುಕ್ತರ ವಿರುದ್ದ ಹರಿಹಾಯ್ದಿದ್ದಾರೆ.
"ನಾವು ಪ್ರತಿಭಟನೆ ನಡೆಸಲು ಅನುಮತಿ ಕೇಳಿದರೆ ನೀತಿ ಸಂಹಿತೆ ಎಂದು ಹೇಳುತ್ತಾರೆ. ಆದರೆ, ಉಳಿದವರು ಎಷ್ಟು ಬೇಕಾದರೂ ಪ್ರತಿಭಟನೆ ಮಾಡುತ್ತಾರೆ. ಹೋರಾಟ ಮಾಡುವ ವಿದ್ಯಾರ್ಥಿಗಳನ್ನು ಯೂಸ್ ಲೆಸ್ ಎಂದಿದ್ದಾರೆ" ಎಂದು ಆರೋಪಿಸಿದ್ದಾರೆ.