ಉಡುಪಿ, ನ 07 (DaijiworldNews/MS): ಹಿಂದೂ ಧರ್ಮವನ್ನು ಗುರುತಿಸಲು ಇರುವ ಪ್ರತೀಕವಾಗಿರುವ ಹಿಂದೂ ಧರ್ಮದ ಅಸ್ಮಿತೆಯಾಗಿರುವ ಮಠ, ಮಂದಿರ, ಖಾವಿ, ಸಾಧುಸಂತರು, ಗೋ ಮಾತೆ ಹಾಗೂ ಬ್ರಾಹ್ಮಣ್ಯರನ್ನು ಅಗೌರವ ಹಾಗೂ ಧ್ವಂಸ ಮಾಡುವ ಸುದೀರ್ಘ ಪ್ರಯತ್ನ ನಡೆಯುತ್ತಿದೆ. ಈ ಮೂಲಕ ಅನ್ಯ ಧರ್ಮೀಯರು ಯುವ ಪೀಳಿಗೆಯನ್ನು ತನ್ನತ್ತ ಸೆಳೆದು ಭಾರತವನ್ನೇ ಪರಿವರ್ತನೆ ಮಾಡುವ ಹುನ್ನಾರ ಅಡಗಿದೆ ಎಂದು ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ತಿಳಿಸಿದರು.
ಅವರು ಸೋಮವಾರದಂದು ಉಡುಪಿ ಶ್ರೀಕೃಷ್ಣ, ಪರ್ಯಾಯ ಶ್ರೀಅದಮಾರು ಮಠದ ವತಿಯಿಂದ ಪರ್ಯಾಯ ಮಂಗಲೋತ್ಸವದ ವಿಶ್ವಾರ್ಪಣಮ್ ಕಾರ್ಯಕ್ರಮದ ಅಂಗವಾಗಿ ರಾಜಾಂಗಣದ ಶ್ರೀನರಹರಿ ತೀರ್ಥ ವೇದಿಕೆಯಲ್ಲಿ ನಡೆದ 2 ನೇ ದಿನದ ವಿಶ್ವಾರ್ಪಣಮ್ ಕಾರ್ಯಕ್ರಮದಲ್ಲಿ ಭಾಗವಹಿಸಿ 'ಹಿಂದೂ ಅಸ್ಮಿತೆ' ಕುರಿತು ವಿಶೇಷ ಉಪನ್ಯಾಸ ನೀಡಿದರು.
ಹಿಂದೂ ಧರ್ಮ ಎನ್ನುವುದು ಶುದ್ಧ ವಿಜ್ಞಾನ. ಉಳಿದೆಲ್ಲವೂ ಧರ್ಮದ ಲಕ್ಷಣವಾಗಿ ಕಂಡು ಬರುತ್ತದೆ. ಭಾರತದ ಸಾಹಿತ್ಯದ ಮೇಲೆ ಆಕ್ರಮಣ ನಡೆಸಿ ಸಾಹಿತ್ಯವನ್ನೇ ತಿರುಚುವ ಪಿತೂರಿ ನಡೆದಿತ್ತು. ಹಿಂದೂ ಧರ್ಮದ ಅಸ್ಮಿತೆಯಾಗಿರುವ ದೇವಸ್ಥಾನಗಳ ಮೇಲೆ ಆಕ್ರಮಣ, ಕಾಶಿ ಮೇಲೆ ದಾಳಿ ನಡೆಸಲಾಗಿತ್ತಿದೆ. ಈ ಎಲ್ಲಾ ದಾಳಿಯ ಹಿಂದಿನ ಉದ್ದೇಶ ಹಿಂದೂಗಳ ಅಸ್ಮಿತೆಯನ್ನೇ ನಾಶ ಮಾಡಿ ಮುಂದಿನ ಪೀಳಿಗೆಯನ್ನು ತನ್ನತ್ತ ಸೆಳೆಯುವುದಾಗಿದೆ. ನಾವು ಒಂದು ಕ್ಷಣ ಮೈ ಮರೆತರೂ ರಾಷ್ಟ್ರವನ್ನೇ ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಹಿಂದೂ ಧರ್ಮ ಮತ್ತು ಆಂಗ್ಲ ಭಾಷೆಯ ರಿಲಿಜನ್ ಎರಡೂ ಬೇರೆ. ಹಿಂದೂ ಧರ್ಮದಲ್ಲಿ ಮೂಲಪುರುಷರೇ ಇಲ್ಲ. ರಿಲಿಜನ್ ಇಲ್ಲದೆ ಬದುಕಬಹುದು. ಆದರೆ ಧರ್ಮ ಬಿಟ್ಟು ಇರಲು ಸಾದ್ಯವಿಲ್ಲ. ಅದಕ್ಕೆ ವ್ಯಾಪಕವಾದ ಅರ್ಥ ಇದೆ. ಸಂಸ್ಕೃತ ಭಾಷೆ ಮೃತ ಭಾಷೆಯಾಗಿದೆ. ಅದನ್ನು ಅಧ್ಯಯನ ಮಾಡುವವರು ಕೆಲಸ ಇಲ್ಲದಿರುವವರು ಎಂಬ ಕೀಳರಿಮೆ ಇದೆ. ಭಾರತ ಜಾತ್ಯತೀತ ರಾಷ್ಟ್ರ ವಾಗಿ ಉಳಿಯಬೇಕಾದರೆ, ಹಿಂದು ಅಸ್ಮಿತೆ ಭದ್ರವಾಗಿರಬೇಕು. ಕೇಸರಿ ಹಿಂದು ಧರ್ಮದ ಅಸ್ಮಿತೆ. ತ್ಯಾಗ, ಬಲಿದಾನ ಬುದ್ದನ ನಂತರ ಬಂದಿದ್ದಲ್ಲ. ಕಾವಿ ಎಲ್ಲಕ್ಕಿಂತ ಶ್ರೇಷ್ಠ ವಾದುದು.ಆದರೂ ಇದನ್ನು ಅಗೌರವದಿಂದ ಕಾಣುವುದು ಕಳೆದ ಸಾವಿರ ವರ್ಷಗಳಿಂದಲೂ ಪ್ರಯತ್ನ ನಡೆಯುತ್ತಲೇ ಬಂದಿದೆ. ಹಿಂದೂ ಧರ್ಮವನ್ನೇ ಆಧಾರವಾಗಿಟ್ಟುಕೊಂಡು ಹೊಸ ನಾಡನ್ನು ಕಟ್ಟಬೇಕಿದೆ. ಜಗತ್ತಿನ ಅನೇಕ ಬಡರಾಷ್ಟ್ರಗಳಲ್ಲಿ ಕೋವಿಡ್-19 ಲಸಿಕೆ ಇರಲಿಲ್ಲ. ಆಗ ಹೃದಯ ವೈಶಾಲ್ಯತೆ ಮೆರದ ಭಾರತ ತನ್ನೊಂದಿಗೆ ಜಗತ್ತಿನ ಇತರೆ ದೇಶಗಳಿಗೂ ಲಸಿಕೆ ಪೂರೈಕೆ ಮಾಡಿದೆ ಎಂದರು.
ಮುಸ್ಲಿಂ/ಕ್ರೈಸ್ತರಲ್ಲಿ ಅನ್ಯ ಮತೀಯ ವಿವಾಹ ಆಗುವುದಕ್ಕೆ ಮೊದಲು ಅವರು ಆ ಧರ್ಮಕ್ಕೆ ಮತಾಂತರ ಆಗಲೇಬೇಕು. ಆದರೆ ನಮ್ಮಲ್ಲಿ ಮದುವೆ ಸಂಪ್ರದಾಯದ ಪ್ರಕಾರವಾದರೆ ಸಾಕು ಎನ್ನುತ್ತೇವೆ. ಮುಂದೆ ಹುಟ್ಟುವ ಮಗು ಹಿಂದೂ ಧರ್ಮ ತ್ಯಜಿಸಿರುತ್ತದೆ. ಈಗ ಹಿಂದೂಗಳನ್ನು ಅಷ್ಟು ಸುಲಭವಾಗಿ ಮೋಸ ಮಾಡಲು ಸಾಧ್ಯವಿಲ್ಲ. ಎಲ್ಲರೂ ಈ ಬಗ್ಗೆ ಎಚ್ಚತ್ತು ಕೊಂಡಿದ್ದಾರೆ.
ಈ ನಿಟ್ಟಿನಲ್ಲಿ ನಮ್ಮಲ್ಲಿ ದೊಡ್ಡ ಮಟ್ಟಿನ ತಿದ್ದುಪಡಿ ಆಗಬೇಕಿದೆ. ಮುಂದಿನ ಪೀಳಿಗೆಯನ್ನು ಗಟ್ಟಿ ಮಾಡದೇ ಹೋದರೆ ಮತ, ಧರ್ಮ ಎಲ್ಲವನ್ನು ಕಳೆದುಕೊಳ್ಳಬೇಕಾಗುತ್ತದೆ. ಈ ಕಾರಣಕ್ಕಾಗಿ ಹಿಂದೂಗಳ ಅಸ್ಮಿತೆಯ ಬಗ್ಗೆ ಬಲವಾದ ಸಮರ್ಥನೆಯ ಜತೆಗೆ ಹೊಸ ರಾಷ್ಟ್ರ ನಿರ್ಮಾಣವಾಗಲಿ ಎಂದು ಸೂಲಿಬೆಲೆ ತಿಳಿಸಿದರು.
ಅನುಗ್ರಹ ಸಂದೇಶ ನೀಡಿದ ಗುರುಪುರ ಶ್ರೀವಜ್ರದೇಹಿ ಮಠದ ಶ್ರೀರಾಜಶೇಖರಾನಂದ ಶ್ರೀಪಾದರು, ಹಿಂದೂ ಧರ್ಮ ಪದೇ ಪದೇ ನಾನಾ ವ್ಯಾಖ್ಯಾನಗಳು, ಚರ್ಚೆಗೆ ಒಳಪಡುತ್ತಿದೆ. ಇದಕ್ಕೆ ಕಾರಣ ಹಿಂದೂ ಧರ್ಮದ ರಕ್ಷಣೆ, ಪ್ರಾಮುಖ್ಯತೆಯ ಬಗ್ಗೆ ಸ್ಪಷ್ಟ ಅರಿವು ಮೂಡದೇ ಇರುವುದಾಗಿದೆ. ಈ ನಿಟ್ಟಿನಲ್ಲಿ ಹಿಂದೂ ಧರ್ಮದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ. ಪರ್ಯಾಯ ಶ್ರೀಗಳ ಈ ಕಾರ್ಯಕ್ರಮ ಮಾದರಿಯಾಗಿದೆ ಎಂದರು.
ಇತಿಹಾಸದಲ್ಲಿ ಭಾರತವನ್ನು ಆಳಿದ ಅಕ್ಬರ್, ಮೊಹಮದ್ ಪೈಗಂಬರ್, ಔರಂಗಜೇಬನ ವಿಷಯಗಳು ಇವೆ. ಆದರೆ ಹಿಂದು ಧರ್ಮದ ಉಳಿವಿಗೆ ಹೋರಾಡಿದವರ ವಿಷಯಗಳು ಇಲ್ಲ ಎನ್ನುವುದು ವಿಪರ್ಯಾಸ . ಪಠ್ಯ ಪುಸ್ತಕವೇ ಹಾಗಿದೆ. ಇತಿಹಾಸದ ಕಡೆಗೆ ನಮಗೆ ತುಡಿತ ಇರಬೇಕು. ಇತಿಹಾಸವನ್ನು ನಾವು ಬರೆಯಬೇಕು. ನಾವೇ ನಿರ್ಮಾಣ ಮಾಡಬೇಕು ಎಂದು ಅವರು ತಿಳಿಸಿದರು.ಇಂತಹ ಅವ್ಯವಸ್ಥೆಯ ನ್ನು ಮೊದಲು ಹೋಗಲಾಡಿಸಬೇಕು. ಪ್ರತಿಯೊಂದು ಮನೆಯಲ್ಲಿಯೂ ಒಬ್ಬ ಹಿಂದೂ ಸೈನಿಕ ಹುಟ್ಟಿ ಬೆಳೆದು ನಮ್ಮ ನಾಡು ರಾಮ ರಾಜ್ಯವಾಗುವಲ್ಲಿ ನೆರವಾಗಬೇಕು ಎಂದು ಹರಸಿದರು.
ಸಂಗೀತ ನಿರ್ದೇಶಕ ಹಂಸಲೇಖ ಅವರು ಕೀರ್ತಿಶೇಷ ಪೇಜಾವರ ಶ್ರೀಗಳ ಬಗ್ಗೆ ನೀಡಿರುವ ಹೇಳಿಕೆಯನ್ನು ವಜ್ರದೇಹಿ ಮಠದ ಶ್ರೀಗಳು ಖಂಡಿಸಿದರು. ಜ್ಞಾನಿಗಳು, ಉನ್ನತ ಸ್ಥಾನದಲ್ಲಿರುವ ಹಂಸಲೇಖರಿಗೆ ಇಂತಹ ಮಾತುಗಳು ಶೋಭೆ ತರುವುದಲ್ಲ ಎಂದರು.
ಅಧ್ಯಕ್ಷತೆ ವಹಿಸಿದ್ದ ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು. ಶ್ರೀಕಟೀಲು ಕ್ಷೇತ್ರದ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಅನುವಂಶಿಕ ಅರ್ಚಕ ವಿ. ವೆಂಕಟರಮಣ ಆಸ್ರಣ್ಣ ಉಪಸ್ಥಿತರಿದ್ದರು.
ಶ್ರೀಮಠದ ಸೇವೆಯಲ್ಲಿರುವ ಎ. ವೆಂಕಟೇಶ ಹಾಗೂ ಗ್ರಾಮೀಣ ಅಂಚೆ ಪೇದೆ ಪ್ರದೀಪ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಪರ್ಯಾಯ ಮಠದ ವ್ಯವಸ್ಥಾಪಕ ಗೋವಿಂದ್ರಾಜ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ವಾಂಸ ಕುತ್ಪಾಡಿ ಕೃಷ್ಣರಾಜ ಭಟ್ ಕಾರ್ಯಕ್ರಮ ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪಂ. ಪೂರ್ಬಯನ್ ಚಟರ್ಜಿ ಮುಂಬೈ ಮತ್ತು ವಿ. ಅಂಬಿ ಸುಬ್ರಹ್ಮಣ್ಯನ್ ಬೆಂಗಳೂರು ಅವರಿಂದ ಸಿತಾರ್ ಮತ್ತು ಪಿಟೀಲು ಜುಗಲ್ ಬಂದಿ ನಡೆಯಿತು.