ಉಡುಪಿ, ಡಿ. 06 (DaijiworldNews/HR): ವಿಶ್ವ ಹಿಂದೂ ಪರಿಷತ್ ಬಜರಂಗದಳ ಬೈಂದೂರು ಪ್ರಖಂಡ ಇದರ ವತಿಯಿಂದ ಟೋಯಿಂಗ್ ವಾಹನದ ಹಿಂಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಮೇಲೆ ಗೋವನ್ನು ಹಿಂಸಾತ್ಮಕವಾಗಿ ಕಟ್ಟಿಕೊಂಡು ಸಾಗಿದವರ ರಾಷ್ಟ್ರೀಯ ಹೆದ್ದಾರಿ ಗುತ್ತಿಗೆದಾರ ಸಂಸ್ಥೆಯ ವಿರುದ್ದ ಸೋಮವಾರ ಶಿರೂರು ಟೋಲ್ ಪ್ಲಾಜಾದಲ್ಲಿ ಬ್ರಹತ್ ಪ್ರತಿಭಟನೆ ನಡೆಯಿತು.
ವಿಶ್ವ ಹಿಂದೂ ಪರಿಷತ್ ಬೈಂದೂರು ಘಟಕದ ಸಂಚಾಲಕ ಸುಧಾಕರ ಶೆಟ್ಟಿ ನೆಲ್ಯಾಡಿ ಮಾತನಾಡಿ, "ಕಳೆದ ಹಲವು ವರ್ಷಗಳಿಂದ ಈ ಭಾಗದಲ್ಲಿ ಆರಂಭಗೊಂಡಿರುವ ಚತುಷ್ಪಥ ಹೆದ್ದಾರಿಯಲ್ಲಿ ಗುತ್ತಿಗೆ ಪಡೆದ ಕಂಪೆನಿ ಸಮರ್ಪಕವಾಗಿ ಕಾರ್ಯಾ ನಿರ್ವಹಿಸುತ್ತಿಲ್ಲ ಹೀಗಾಗಿ ಸಾರ್ವಜನಿಕರ ಆಕ್ರೋಶವಿದೆ. ಮೃತಪಟ್ಟಿರುವ ಜಾನುವಾರುಗಳನ್ನು ಕೂಡ ಸಮರ್ಪಕವಾಗಿ ವಿಲೇವಾರಿ ಮಾಡಬೇಕು ಬೀದಿ ದೀಪ, ರಸ್ತೆ ಸಮಸ್ಯೆಗಳನ್ನು ಶೀಘ್ರದಲ್ಲಿ ದುರಸ್ಥಿ ಪಡಿಸದಿದ್ದಲ್ಲಿ ಮುಂದಿನ ದಿನದಲ್ಲಿ ಉಗ್ರ ಪ್ರತಿಭಾನಟನೆ ಮಾಡಲಾಗುವುದು" ಎಂದರು.
"ಬಜರಂಗದಳ ಜಿಲ್ಲಾಧ್ಯಕ್ಷ ಶ್ರೀಧರ ಬಿಜೂರು ಮಾತನಾಡಿ, ಶಿರೂರು ಟೋಲ್ ಗೇಟ್ನಲ್ಲಿ ನಿಗದಿಗಿಂತ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದು ಇವುಗಳನ್ನು ಆದಷ್ಟು ಬೇಗ ಸರಿಪಡಿಸಬೇಕು. ಒಂದೊಮ್ಮೆ ಇವುಗಳನ್ನು ಸರಿಪಡಿಸದಿದ್ದಲ್ಲಿ ಹಿಂದೂ ಪರವಾದ ವಿವಿಧ ಸಂಘಟನೆಯ ವತಿಯಿಂದ ಶಿರೂರು ಟೋಲ್ ಪ್ಲಾಜಾದ ಮುಂದೆ ಧರಣಿ ಹಾಗೂ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಮತ್ತು ಸಾರ್ವಜನಿಕರಿಗೆ ಸಮರ್ಪಕವಾಗಿ ಸೇವೆ ನೀಡಬೇಕು" ಎಂದಿದ್ದಾರೆ.
ಇನ್ನು "ಬಜರಂಗದಳ ಬೈಂದೂರು ಘಟಕದ ಅಧ್ಯಕ್ಷ ಜಗದೀಶ ಕೊಲ್ಲೂರು ಮಾತನಾಡಿ, ಗೋಮಾತೆಗೆ ಗೌರವ ನೀಡುವುದು ಹಿಂದೂ ಸಂಸ್ಕ್ರತಿಯ ಪ್ರತೀಕ. ರಸ್ತೆಯಲ್ಲಿ ಅಪಘಾತ ಹೊಂದುವ ಜಾನುವಾರುಗಳನ್ನು ಸಮರ್ಪಕವಾಗಿ ಗೌರವಿಸಬೇಕು" ಎಂದರು.
ಬಜರಂಗದಳ ಕಾರ್ಯದರ್ಶಿ ಶ್ರೀನಿವಾಸ ಮೂದೂರು, ತಾಪಂ ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ, ಜಿಲ್ಲಾ ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಶರತ್ ಕುಮಾರ್ ಶೆಟ್ಟಿ ಉಪ್ಪುಂದ, ಶಿರೂರು ಗ್ರಾಪಂ ಸದಸ್ಯ ರವೀಂದ್ರ ಶೆಟ್ಟಿ ಆರ್ಮಕ್ಕಿ, ಸಂಸ್ಥೆಯ ಮುಖ್ಯಸ್ಥ ಪ್ರಪ್ಪುಲ್ಲ ಕಾಕಡೆ, ಸುದೇಶ್ ಶೆಟ್ಟಿ, ಕುಂದಾಪುರ ಡಿ.ವೈ.ಎಸ್.ಪಿ ಶ್ರೀಕಾಂತ, ಬೈಂದೂರು ವೃತ್ತ ನಿರೀಕ್ಷಕ ಸಂತೋಷ್ ಆನಂದ್ ಕಾಯ್ಕಿಣಿ, ಠಾಣಾಧಿಕಾರಿ ಪವನ್ ನಾಯಕ್ ಹಾಗೂ ಹಿಂದೂ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.
ಬಳಿಕ ಬೈಂದೂರು ತಹಶೀಲ್ದಾರ ಶೋಭಾಲಕ್ಷ್ಮೀ ಎಸ್.. ಎಚ್. ಹಾಗೂ ರಾಷ್ಟ್ರೀಯ ಹೆದ್ದಾರಿ ಗುತ್ತಿಗೆದಾರ ಸಂಸ್ಥೆಯ ಮುಖ್ಯಸ್ಥರಿಗೆ ಮನವಿ ಸಲ್ಲಿಸಲಾಯಿತು.
ಘಟನೆಯ ವಿವರ:
ಶಿರೂರು ಟೋಲ್ಗೇಟ್ ಬಳಿ ಅಪಘಾತಕ್ಕೀಡಾಗಿ ಮೃತಪಟ್ಟ ಹಸುವನ್ನು ರಾಷ್ಟ್ರೀಯ ಹೆದ್ದಾರಿ ಗುತ್ತಿಗೆದಾರ ಸಂಸ್ಥೆಯ 1033ರ ಸಿಬ್ಬಂದಿಗಳು ತಮ್ಮ ಟೋಯಿಂಗ್ ವಾಹನದ ಹಿಂಬದಿಯಲ್ಲಿ ಹಗ್ಗದಿಂದ ದನದ ಕಳೇಬರವನ್ನು ಕಟ್ಟಿ ಎಳೆದೊಯ್ದ ಅಮಾನವೀಯ ಘಟನೆ ಭಾನುವಾರ ಸಂಜೆ ನಡೆದಿದೆ. ಈ ಬಗ್ಗೆ ವಿಡಿಯೋವೊಂದು ಬಾರೀ ವೈರಲ್ ಆಗಿದ್ದು, ಹಿಂದೂ ಪರ ಸಂಘಟನೆಗಳು ಈ ಕುಕೃತ್ಯವನ್ನು ಖಂಡಿಸಿ ತಪ್ಪಿತಸ್ಥರ ವಿರುದ್ಧ ಶಿಕ್ಷೆಗೆ ಆಗ್ರಹಿಸಿ ಹಿಂದೂ ಜಾಗರಣಾ ವೇದಿಕೆ ಬೈಂದೂರು ತಾಲೂಕು ಅಧ್ಯಕ್ಷ ರಾಜೇಶ್ ಆಚಾರ್ಯ, ಶ್ರೀರಾಮ ಸೇನೆಯ ಸುಬ್ರಹ್ಮಣ್ಯ, ಪ್ರಶಾಂತ್ ಮೊಯ್ಲಿ, ವೇದನಾಥ್ ಬೈಂದೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಹಸುವಿನ ಕಳೇಬರವನ್ನು ಎಳೆದೊಯ್ದ ಇಬ್ಬರು ಸಿಬ್ಬಂದಿಗಳನ್ನು ಬೈಂದೂರು ಪೋಲಿಸ್ ಠಾಣೆಗೆ ಕರೆಯಿಸಿ ವಿಚಾರಿಸಿದ್ದಾರೆ. ಅಲ್ಲದೇ ಸಂಬಂಧಪಟ್ಟ ಕಂಪೆನಿಯ ಅಧಿಕಾರಿಗಳು ಕೂಡಾ ಠಾಣೆಗೆ ಬಂದು ಘಟನೆಯ ಮಾಹಿತಿ ನೀಡಿದ್ದಾರೆ. ಹಸು ಭಾರವಾಗಿದ್ದರಿಂದ ಅದರ ಶವವನ್ನು ಇಬ್ಬರಿಂದ ಎತ್ತಿ ವಾಹನಕ್ಕೆ ಹಾಕಲು ಆಗದಿರುವ ಕಾರಣ ಈ ರೀತಿ ಮಾಡಿದ್ದಾಗಿ ಒಪ್ಪಿಕೊಂಡು ಕ್ಷಮೆ ಕೋರಿದ್ದಾರೆ. ಬೈಂದೂರು ಠಾಣಾಧಿಕಾರಿ ಪವನ್ ನಾಯಕ್ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಸೋಮವಾರ ಹಿಂದೂ ಪರ ಸಂಘಟನೆಗಳು ಶಿರೂರು ಟೋಲ್ಗೇಟ್ ಬಳಿ ಪ್ರತಿಭಟನೆಗೆ ಅಣಿಯಾಗಿರುವ ಮಾಹಿತಿ ಲಭ್ಯವಾಗಿದೆ.