ಬಂಟ್ವಾಳ, ಡಿ. 06 (DaijiworldNews/HR): ಕಂಬಳದಲ್ಲಿ ಕೋಣಗಳನ್ನು ಓಡಿಸುವ ವೇಳೆ ಕಂಬಳದ ಕರೆಯ ಕೆಸರಿನಲ್ಲಿ ಬಿದ್ದರೂ, ಛಲ ದಿಂದ ಹಗ್ಗ ಬಿಡದೆ ಕೋಣಗಳೊಂದಿಗೆ ಎಳೆದೊಯ್ದು ಗುರಿ ಮುಟ್ಟಿದ ರೋಮಾಂಚನಕಾರಿ ಘಟನೆ ಹೊಕ್ಕಾಡಿಗೋಳಿ ಕಂಬಳದಲ್ಲಿ ನಡೆದಿದೆ.
ಬಂಟ್ವಾಳ ತಾಲೂಕು ಎಲಿಯನಡುಗೋಡು ಮತ್ತು ಬೆಳ್ತಂಗಡಿ ತಾಲೂಕಿನ ಆರಂಬೋಡಿ ಗ್ರಾಮದ ಗಡಿ ಭಾಗದಲ್ಲಿರುವ ಹೊಕ್ಕಾಡಿಗೋಳಿ ಮಹಿಷಮರ್ಧಿನಿ ಕಂಬಳ ಸಮಿತಿ ವತಿಯಿಂದ ಹೊಕ್ಕಾಡಿಗೋಳಿಯಲ್ಲಿ ನಡೆದ ಇತಿಹಾಸ ಪ್ರಸಿದ್ಧ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳದಲ್ಲಿ ಈ ಸಿನಿಮೀಯ ಶೈಲಿಯ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಹಗ್ಗದ ಕಿರಿಯ ವಿಭಾಗದಲ್ಲಿ, ಪ್ರಿ ಕ್ವಾರ್ಟರ್ ಫೈನಲ್ ಸಂದರ್ಭದಲ್ಲಿ ಬಿಳಿಯೂರು, ಪೆರ್ನೆ ವಿಷ್ಣುಮೂರ್ತಿ ದೇವತಾ ಗಣಪ ಭಂಡಾರಿ ಅವರ ಕೋಣಗಳನ್ನು ಉಡುಪಿ ಹಿರೇಬೆಟ್ಟು ಆಕಾಶ್ ಭಂಡಾರಿ ಅವರು ಓಡಿಸುತ್ತಿದ್ದು, ಕರೆಯನ್ನು ಮುಕ್ಕಾಲು ಭಾಗ ಕ್ರಮಿಸುವಾಗ ಬಿದ್ದರು. ಆದರೆ ಹಗ್ಗವನ್ನು ಬಿಡದೇ ಕೋಣಗಳು ಎಳೆದೊಯ್ಯುತ್ತಿದ್ದರೂ ಛಲದಿಂದ ಗುರಿ ಮುಟ್ಟಿದರು. ಸುಮಾರು 20 ಮೀ.ನಷ್ಟು ದೂರ ಕವುಚಿ ಬಿದ್ದರೂ ಹಗ್ಗ ಹಿಡಿದು ಗುರಿ ಮುಟ್ಟಿದ ಅವರ ಎದೆಗಾರಿಕೆ ಅವರನ್ನು ವಿಜಯಿಯನ್ನಾಗಿಸಿತು. ಉದ್ಘೋಷಕರೂ ಕೂಡ ಆಕಾಶ್ ಅವರ ಸಾಹಸವನ್ನು ಕೊಂಡಾಡಿದರೆ, ನೆರೆದಿದ್ದ ಕಂಬಳಾಭಿಮಾನಿಗಳು ಚಪ್ಪಾಳೆಯ ಅಭಿನಂದನೆ ಸಲ್ಲಿಸಿದ್ದಾರೆ.