ಉಡುಪಿ, ಡಿ. 06 (DaijiworldNews/HR): ಬೈಂದೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸತ್ತ ಹಸುಗಳನ್ನು ಟೋಯಿಂಗ್ ವಾಹನಕ್ಕೆ ಕಟ್ಟಿ ಎಳೆದೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸತ್ತು ಬಿದ್ದಿದ್ದ ಎರಡು ಹಸುಗಳನ್ನು ವಾಹನಕ್ಕೆ ಹಾಕಿ ಸಾಗಿಸುವ ಬದಲು ಟೋಯಿಂಗ್ ಗಾಡಿಗೆ ಕಟ್ಟಿ ಎಳೆದೊಯ್ದಿದ್ದಾರೆ. ಸತ್ತ ಹಸುಗಳನ್ನು ಟೋಯಿಂಗ್ ವಾಹನದ ಮೂಲಕ ಎಳೆದೊಯ್ಯುವ ವಿಡಿಯೋ ವೈರಲ್ ಆಗಿದ್ದು, ಈ ಬಗ್ಗೆ ಬೈಂದೂರು ಹಿಂದೂ ಜಾಗರಣ ವೇದಿಕೆ ಐಆರ್ಬಿ ಕ್ರಮದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, "ಹಸುಗಳನ್ನು ಈ ರೀತಿಯಾಗಿ ಬಿದಿಬೀದಿಗಳಲ್ಲಿ ಎಳೆದುಕೊಂಡು ಹೋಗುವ ಹೇಯ ಕೃತ್ಯಕ್ಕೆ ನಾಚಿಕೆಯಾಗಬೇಕು. ನಿಮಗೆ ಗೋವಿನ ಶಾಪ ತಟ್ಟದೆ ಇರುವುದಿಲ್ಲ,ನಿಮ್ಮ ಬೇಜಾವಾಬ್ದಾರಿತನದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಇದರ ವಿರುದ್ದ ಹಿಂದೂ ಸಂಘಟನೆ ಪ್ರತಿಭಟನೆ ನಡೆಸಲಿದೆ" ಎಂದು ಹೇಳಿತ್ತು.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 195/2021 ಕಲಂ: 429 ಐಪಿಸಿ ಮತ್ತು 11(1) (ಡಿ) ಪ್ರಾಣಿಹಿಂಸೆ ನಿಷೇಧ ಕಾಯಿದೆಯಂತೆ ಪ್ರಕರಣ ದಾಖಲಾಗಿದೆ.