ಉಡುಪಿ, ಡಿ. 06 (DaijiworldNews/HR): ಪ್ರಸಿದ್ಧ ವಯೊಲಿನ್ ಕಲಾವಿದೆ ವಸಂತಿ ರಾಮ್ ಭಟ್ (82 ವರ್ಷ) ತಮ್ಮ ಅಂಬಲಪಾಡಿ ನಿವಾಸದಲ್ಲಿ ನಿಧನರಾಗಿದ್ದಾರೆ.
ತಮ್ಮ ಅಂಬಲಪಾಡಿ ನಿವಾಸದಲ್ಲಿ ತಮ್ಮ ಶಿಷ್ಯನಿಗೆ ಕಾಂಭೋಜೀ ರಾಗದಲ್ಲಿ ವಯೊಲಿನ್ ನುಡಿಸಾರಿಕೆಯನ್ನು ಹೇಳಿ ಕೊಡುತ್ತಿದ್ದ ಸಂದರ್ಭ ವಿದುಷಿ ವಸಂತಿ ರಾಮ ಭಟ್ ಕುಸಿದು ಬಿದ್ದಿದ್ದು, ಕೂಡಲೇ ಸಮೀಪದ ಆಸ್ಪತ್ರೆಗೆ ಕೊಂಡೊಯ್ಯಲಾದರೂ ಮಾರ್ಗಮಧ್ಯೆ ಕೊನೆಯುಸಿರೆಳೆದರು.
ಇಳಿವಯಸ್ಸಿನಲ್ಲೂ ಸದಾ ಸಂಗೀತ ಕಾರ್ಯಕ್ರಮದಲ್ಲಿ ಸಕ್ರಿಯರಾಗಿರುತ್ತಿದ್ದ ವಿದುಷಿ ವಸಂತಿಯವರು ಇತ್ತೀಚೆಗಷ್ಟೇ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಜರುಗಿದ 43ನೆಯ ವಾದಿರಾಜ ಕನಕದಾಸ ಸಂಗೀತೋತ್ಸವ - 2021ರ ಶುಕ್ರವಾರ ಸಂಜೆ ಕುಮಾರಿ ಭಾಮಿನಿ ಭಟ್ ಪುತ್ತೂರು ಇವರಿಗೆ ವಯೋಲಿನ್ ಸಹವಾದನ ನೀಡಿದ್ದರು.
ವಿದುಷಿ ವಸಂತಿಯವರು 1938ರಲ್ಲಿ ಹುಟ್ಟಿದ್ದು ಎಂ.ಜಿ.ಎಂ.ಕಾಲೇಜಿನ ಪ್ರಾಂಶುಪಾಲರಾಗಿದ್ದ ಪ್ರೊ. ರಾಮ ಭಟ್ ರ ಧರ್ಮಪತ್ನಿ. ರಾಗಧನ ಸಂಸ್ಥೆಯ ಸಕ್ರಿಯ ಕಾರ್ಯಕಾರಿ ಸಮಿತಿ ಸದಸ್ಯೆ. ಹಲವಾರು ಸಂಗೀತಗಾರರಿಗೆ ಸಾಥ್ ನೀಡಿದ ಉಡುಪಿಯ ಹೆಮ್ಮೆಯ ಕಲಾವಿದೆ. ನೂರಾರು ಶಿಷ್ಯರಿಗೆ ವಯಲಿನ್ ತರಬೇತಿ ನೀಡಿರುತ್ತಾರೆ.
ಮಗ ಡಾ.ಸತೀಶ್, ನೇತ್ರ ತಜ್ಞ, ಮಗಳು ವಿನಯ ಕಂಪ್ಯೂಟರ್ ಇಂಜಿನಿಯರ್. ಪುತ್ರ ದೇವೇಶ್ ಭಟ್ ಮೃದಂಗ ವಿದ್ವಾನ್ ಅವರನ್ನು ಬಿಟ್ಟು ಅಗಲಿದ್ದಾರೆ.
ತಾಯಿಯ ತಂದೆ ಪಿಡ್ಲು ಕೃಷ್ಣರಾಯರು, ಉಡುಪಿ ಲಕ್ಷ್ಮೀ ಬಾಯಿ ಇವರ ಸಂಗೀತ ಗುರುಗಳು, ಗುರುಗಳ ಹೆಸರಲ್ಲಿ ನಿರಂತರ ಕಾರ್ಯಕ್ರಮ ಆಯೋಜನೆ ಮಾಡುತ್ತಿದ್ದರು. ಉತ್ತಮ ಟೆನಿಸ್ ಚಾಂಪಿಯನ್ ಆಗಿದ್ದವರು.
ಪ್ರಪಂಚಂ ಸೀತಾರಾಂ, ಆರ್.ಕೆ.ಪದ್ಮನಾಭ, ಲುಡ್ವಿಗ್ ಪೆಶ್ಚ್, ಕದ್ರಿ ಗೋಪಾಲನಾಥ್ ಸೇರಿದಂತೆ ಬಾಲಪಾಠದಲ್ಲಿರುವ ಮಕ್ಕಳಿಗೂ ವಯೊಲಿನ್ ಸಾಥ್ ನೀಡುತ್ತಿದ್ದರು.