ಕಾರ್ಕಳ, ಡಿ.05 (DaijiworldNews/PY): ಕಳೆದ ಕೆಲದಿನಗಳ ಹಿಂದೆ ಮಿಯ್ಯಾರಿನ ಕಲ್ಲಿನ ಪಾದೆಯಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕನೊಬ್ಬ ವಾಸ್ತವ್ಯವಿಲ್ಲದ ಶೆಡ್ನಲ್ಲಿ ಮೃತಪಟ್ಟಿದ್ದರು. ಇವರ ಗುರುತು ಪತ್ತೆಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಮಾಹಿತಿ ಹರಿದಾಡಿದವು. ಇದನ್ನು ಗಮನಿಸಿದ ಅನನಾಸು ತೋಟದ ಮಾಲೀಕರು ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಗೆ ಅಗಮಿಸಿದರು. ಮೃತ ವ್ಯಕ್ತಿಯು ತಮ್ಮ ತೋಟದಲ್ಲಿ ಕೆಲಸ ನಿರ್ವಹಿಸಿದಾಗ ತಮ್ಮಲಿ ಇಟ್ಟುಕೊಳ್ಳುವಂತೆ ಹೇಳಿದ ಮೊತ್ತವನ್ನು, ಮೃತ ವ್ಯಕ್ತಿಯ ಮನೆ ಮಂದಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.
ಡಿಸೆಂಬರ್ 3ರಂದು ಈ ಘಟನೆ ನಡೆದಿತ್ತು. ಮೃತ ವ್ಯಕ್ತಿಯು ಕೇರಳ ಮೂಲದವರಾಗಿದ್ದು, ಅವರ ಗುರುತು ಪತ್ತೆ ಹಚ್ಚುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಕೊಳ್ಳಲಾಗಿತ್ತು.
ಕೇರಳ ರಾಜ್ಯದ ಎರ್ನಾಕುಲಂ ಜಿಲ್ಲೆಯ ಕಾಲಡಿ ಎಂಬಲ್ಲಿ ವಾಸವಾಗಿರುವ ವರ್ಗೀಸ್ ಸಾಮಾಜಿಕ ಜಾಲತಾಣ ಗಮನಿಸಿ ಕಾರ್ಕಳಕ್ಕೆ ಆಗಮಿಸಿದ್ದರು. ತಾಲೂಕು ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಿದ್ದ ಮೃತ ವ್ಯಕ್ತಿಯು ತನ್ನ ಅಣ್ಣ ಜಾನ್ಸನ್ ಯಾನೆ ಜೋನಿ ಎಂದು ಗುರುತು ಪತ್ತೆ ಹಚ್ಚಿದ್ದರು. ಸುಮಾರು 30 ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ಜಾನ್ಸನ್ ಯಾನೆ ಜೋನಿಯ ಮಾಹಿತಿಯನ್ನು ಮನೆಯ ಮಂದಿ ತಿಳಿದಿರಲಿಲ್ಲ. ಮೃತ ದೇಹದ ಮರಣೋತ್ತರ ಶವ ಪರೀಕ್ಷೆಯ ಬಳಿಕ ಮೃತ ದೇಹವನ್ನು ಕೇರಳ ರಾಜ್ಯದ ಎರ್ನಾಕುಲಂಗೆ ಕೊಂಡೊಯ್ಯಲು ಸಿದ್ಧತೆ ಮಾಡುತ್ತಿದ್ದಾಗ ಇವರಿಗೆ ಆಶ್ಚರಿ ಘಟನೆಯೊಂದು ನಡೆದು ಹೊಗಿತ್ತು.
ಸಾಮಾಜಿಕ ಜಾಲತಾಣಗಳಲ್ಲಿ ಮೃತ ದೇಹವನ್ನು ಗುರುತಿಸಿದ ಬೆಳ್ತಂಗಡಿ ತಾಲೂಕಿನ ಅನನಾಸು ಕೃಷಿ ಮಾಡುತ್ತಿದ್ದ ಅಭಿಲಾಷ್ ಅವರು ಮಾಹಿತಿ ತಿಳಿದು ಕಾರ್ಕಳ ಸರಕಾರಿ ಆಸ್ಪತ್ರೆಯ ಶವಗಾರಕ್ಕೆ ಬಂದಿದ್ದರು. ಮೃತ ವ್ಯಕ್ತಿಯು ಬೆಳ್ತಂಗಡಿಯ ಅಭಿಲಾಷ್ ಅವರ ತೋಟದಲ್ಲಿ ಸುಮಾರು 5 ವರ್ಷಗಳ ಹಿಂದೆ ಕೂಲಿ ಕೆಲಸ ಮಾಡಿದ್ದರು. ಆ ಸಂದರ್ಭದಲ್ಲಿ ಮೃತ ವ್ಯಕ್ತಿ ಜಾನ್ಸನ್ ಯಾನೆ ಜೋನಿ ಕೆಲಸ ಮಾಡಿ ಉಳಿತಾಯ ಮಾಡಿದ 1 ಲಕ್ಷ. ರೂ ಹಣವನ್ನು ತನ್ನಲ್ಲಿ ಕೊಟ್ಟಿದ್ದರು ಎಂದು ಹೇಳಿ ಮೃತರ ಮನೆ ಮಂದಿಗೆ ಹಸ್ತಾಂತರಿ ಮಾನವೀಯತೆ ಮೆರೆದಿದ್ದಾರೆ.
ಇದೇ ಸಂದರ್ಭದಲ್ಲಿ ಹೆಬ್ರಿ ಮುದ್ರಾಡಿಯ ಅನನಾಸ್ ಕೃಷಿಕ ಶಿಜು ಎಂಬವರೂ ಕೂಡ ಸಮಾಜಿಕ ಜಾಲತಾಣಗಳಲ್ಲಿ ಗಮನಿಸಿ ತಾಲೂಕು ಸರಕಾರಿ ಆಸ್ಪತ್ರೆಯ ಶವಗಾರಕ್ಕೆ ಬಂದಿದ್ದರು. ಮೃತ ವ್ಯಕ್ತಿ ಜಾನ್ಸನ್ ಯಾನೆ ಜೋನಿ ತನ್ನಲ್ಲಿ ಸುಮಾರು 10 ವರ್ಷಗಳ ಹಿಂದೆ ಅನನಾಸ್ ಕೃಷಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಆ ಸಮಯ ಉಳಿತಾಯ ಮಾಡಿದ 30 ಸಾವಿರ ರೂ. ಹಣ ತನ್ನಲ್ಲಿದ್ದು ಅದನ್ನು ಮೃತರ ಮನೆ ಮಂದಿಗೆ ಹಸ್ತಾಂತರಿಸಿ ಮಾನವೀಯತೆ ಮೆರೆದಿದ್ದಾರೆ.
ಮೃತ ವ್ಯಕ್ತಿಯ ಮನೆಯವರು ತೀರಾ ಬಡವರಾಗಿದ್ದು, ಅಭಿಲಾಷ್ ಮತ್ತು ಶಿಜು ಅವರು ನೀಡಿದ ಮೊತ್ತವನ್ನು ಸ್ವೀಕರಿಸಿ ಕೃತಜ್ಞತೆ ಸಲ್ಲಿಸಿ ಮೃತ ದೇಹದೊಂದಿಗೆ ಕೇರಳಕ್ಕೆ ಹೊರಟು ಹೋದರು.