ಬೆಳ್ತಂಗಡಿ, ಡಿ 05 (DaijiworldNews/MS): ರಬ್ಬರ್ ತೋಟವೊಂದರಲ್ಲಿ ಸುಮಾರು 8 ರಿಂದ 9 ಅಡಿ ಉದ್ದದ ಮೊಸಳೆಯೊಂದು ಪ್ರತ್ಯಕ್ಷವಾದ ಘಟನೆ ಕಡಿರುದ್ಯಾವರ ಗ್ರಾಮದ ಕಾನರ್ಪ ಸಮೀಪದ ಕುದೂರು ಎಂಬಲ್ಲಿ ನಡೆದಿದೆ.
ಕುದೂರು ನಿವಾಸಿ ಸದಾಶಿವ ಎಂಬುವವರ ರಬ್ಬರ್ ತೋಟ ಸಮೀಪದ ತೋಡಿನಲ್ಲಿ ಮೊಸಳೆ ಕಂಡುಬಂದಿದ್ದು ರಬ್ಬರ್ ತೋಟದ ಸೊಪ್ಪು ಸ್ವಚ್ಛಗೊಳಿಸುವ ವೇಳೆ ಪತ್ತೆಯಾಗಿದೆ. ಇದರಿಂದ ಗಾಬರಿಯಾದ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು ಮೊಸಳೆ ಸೆರೆಗೆ ಕಾರ್ಯಾಚರಣೆ ನಡೆದಿದೆ.
2019 ಜೂನ್ ತಿಂಗಳಲ್ಲಿ ಧರ್ಮಸ್ಥಳ ಗ್ರಾಮದ ದೊಂಡೋಲೆ ಸಮೀಪ ಪಾಳು ಬಾವಿಯಲ್ಲಿ ಮೊಸಳೆ ಪತ್ತೆಯಾಗಿ ಜನರಲ್ಲಿ ಆತಂಕ ಮೂಡಿಸಿತ್ತು. ಬಳಿಕ ಅರಣ್ಯ ಇಲಾಖೆಯ ಕಾರ್ಯಚರಣೆಯಿಂದ ಮೊಸಳೆಯನ್ನು ಸಂರಕ್ಷಿಸಿ ಚಾರ್ಮಾಡಿ ರಕ್ಷಿತಾರಣ್ಯಕ್ಕೆ ಬಿಡಲಾಗಿತ್ತು.
ಇದೀಗ ಎರಡು ವರ್ಷಗಳ ಬಳಿಕ ಬೆಳ್ತಂಗಡಿ ತಾಲೂಕಿನಲ್ಲಿ ಎರಡನೆ ಬಾರಿಗೆ ಮೊಸಳೆಯೊಂದು ಪತ್ತೆಯಾಗಿದೆ.