ಮಂಗಳೂರು, ಡಿ.05 (DaijiworldNews/PY): ಓಮ್ರಿಕಾನ್ ಆತಂಕದಿಂದ ವಿಮಾನ ಪ್ರಯಾಣಿಕರ ಮೇಲೆ ಪರಿಣಾಮ ಬೀರಿದ್ದು, ಅಂತರಾಷ್ಟ್ರೀಯ ವಿಮಾನಯಾನಿಗಳ ಸಂಖ್ಯೆಯನ್ನು ಕಡಿತ ಮಾಡಿದೆ.
ಗಲ್ಫ್ ರಾಷ್ಟ್ರಗಳಿಂದ ನಗರಕ್ಕೆ ಅಂತರಾಷ್ಟ್ರೀಯ ವಿಮಾನ ಸೇವೆಗಳಿದ್ದು, ಈಗ ಕೇಂದ್ರ ಸರ್ಕಾರದ ವಂದೇ ಮಾತರಂ ಭಾರತ್ ಯೋಜನೆಯಡಿ ಮಾತ್ರ ದಿನಂಪ್ರತಿ 2 ಅಥವಾ 3 ವಿಮಾನಗಳು ಆಗಮಿಸುತ್ತಿವೆ.
ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸಲು ಮುಂಗಡ ಟಿಕೆಟ್ ಕಾಯ್ದಿರಿಸಿದವರಲ್ಲಿ ಕೆಲವರು ತಮ್ಮ ಪ್ರಯಾಣವನ್ನು ರದ್ದುಗೊಳಿಸಿದ್ದರೆ, ಇನ್ನು ಕೆಲವರು ಮುಂದೂಡಿದ್ದಾರೆ. ಪ್ರಯಾಣಿಕರು ತಮ್ಮ ಪ್ರಯಾಣವನ್ನು ಮುಂದೂಡಲು ಉಡುಪಿ ಜಿಲ್ಲಾಡಳಿತ ಘೋಷಿಸಿರುವ ಹೋಂ ಕ್ವಾರಂಟೈನ್ ನಿಯಮವೂ ಒಂದು ಕಾರಣವಾಗಿದೆ.
ಪ್ರಸ್ತುತ ವಿದೇಶಗಳಿಂದ ಬಂದ ಪ್ರಯಾಣಿಕರಿಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ರ್ಯಾಂಡಮ್ ಆಗಿ ವೈದ್ಯಕೀಯ ತಪಾಸಣೆ ನಡೆಸಲಾಗುತ್ತದೆ.ಆದರೆ, ಅವರು ವಿದೇಶದಿಂದ ವಿಮಾನ ಏರುವಾಗ ಆರ್ಟಿಪಿಸಿಆರ್ ನೆಗೆಟಿವ್ ಪ್ರಮಾಣ ಪತ್ರವನ್ನು ಹೊಂದಿರುವುದು ಕಡ್ಡಾಯ.
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 100 ಪ್ರಯಾಣಿಕರಲ್ಲಿ ಇಬ್ಬರು ಅಥವಾ ನಾಲ್ವರಿಗೆ ತಪಾಸಣೆ ನಡೆಸಲಾಗುತ್ತಿದ್ದು, ಈ ಪರೀಕ್ಷೆಯ ವೆಚ್ಚವನ್ನು ಅವರೇ ಭರಿಸಬೇಕಾಗುತ್ತದೆ.
ಮಂಗಳೂರಿನಿಂದ ಯುಎಇಗೆ ಪ್ರಯಾಣಿಸುವವರು 48 ಗಂಟೆಗಳ ಆರ್ಟಿಪಿಸಿಆರ್ ಟೆಸ್ಟ್ ನೆಗೆಟಿವ್ ಪ್ರಮಾಣ ಪತ್ರ ಅಲ್ಲದೇ ರ್ಯಾಟ್ ಟೆಸ್ಟ್ಗೆ ಒಳಗಾಗಬೇಕಾಗುತ್ತದೆ. ನೆಗೆಟಿವ್ ಪ್ರಮಾಣ ಪತ್ರ ಹೊಂದಿರುವುದು ಕಡ್ಡಾಯ. ಆದರೆ, ಕತಾರ್, ದೋಹಾ ಮತ್ತು ಕುವೈತ್ಗೆ ಪ್ರಯಾಣಿಸುವ ಪ್ರಯಾಣಿಕರುರ್ಯಾಟ್ ಪರೀಕ್ಷೆಗೆ ಒಳಗಾಗಬೇಕಾಗಿಲ್ಲ. ಆರ್ಟಿಪಿಸಿಆರ್ ಟೆಸ್ಟ್ ನೆಗೆಟಿವ್ ಪ್ರಮಾಣಪತ್ರ ಮಾತ್ರ ಸಾಕು.
ಆಫ್ರಿಕಾ, ಲಂಡನ್ ಹಾಗೂ ಅಮೇರಿಕಾದಿಂದ ಮಂಗಳೂರಿಗೆ ನೇರ ವಿಮಾನಗಳಿಲ್ಲ. ಅವರು ದುಬೈ, ಮುಂಬೈ ಅಥವಾ ಬೆಂಗಳೂರಿನ ಮೂಲಕ ಪ್ರಯಾಣಿಸಬೇಕಾಗಿದೆ.