ಕಾಸರಗೋಡು, ಡಿ.04 (DaijiworldNews/PY): ಮಂಗಲ್ಪಾಡಿ ಗ್ರಾಮ ಪಂಚಾಯತ್ ಕೇರ ಗ್ರಾಮ ಯೋಜನೆಗೆ ಕೇರಳ ಕೃಷಿ ಸಚಿವ ಪಿ. ಪ್ರಸಾದ್ ಚಾಲನೆ ನೀಡಿದರು.
"ತೆಂಗು ಕೃಷಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಯೋಜನೆ ಹಮ್ಮಿಕೊಳ್ಳಲಾಗಿದ್ದು, ಕೇರ ಕೃಷಿ ಮೂರು ವರ್ಷದ ಯೋಜನೆಯಾಗಿದೆ. ಈ ಅವಧಿಯಲ್ಲಿ 250 ಹೆಕ್ಟೇರ್ ಸ್ಥಳದಲ್ಲಿ ತೆಂಗು ಕೃಷಿ ಬೆಳೆಸಿ ಪರಿಪಾಲನೆ ಮಾಡುವುದರ ಜೊತೆಗೆ ಕೃಷಿಕರ ಆದಾಯ ಹೆಚ್ಚಳಕ್ಕೆ ಸಹಾಯವಾಗಲಿದೆ" ಎಂದು ಹೇಳಿದರು.
"ತೆಂಗು ಉತ್ಪಾದನೆಯಲ್ಲಿಯಲ್ಲಿ ಕೇರಳ ನೆರೆಯ ತಮಿಳುನಾಡು ಮತ್ತು ಆಂಧ್ರಪದೇಶಕ್ಕಿಂತ ಹಿಂದೆ ಉಳಿದಿದೆ. ತೆಂಗು ಬೆಳೆಗೆ ಉತ್ತಮ ಹವಾಮಾನ, ಮಣ್ಣು ಇದ್ದರೂ ಇತರ ಬೆಳೆಗಳತ್ತ ಕೃಷಿಕರು ವಾಲುತ್ತಿದ್ದಾರೆ" ಎಂದು ಹೇಳಿದರು.
"ಈ ವರ್ಷ ಹದಿನೈದು ಲಕ್ಷ ತೆಂಗಿನ ಸಸಿಗಳನ್ನು ಗುರಿ ಹೊಂದಲಾಗಿತ್ತು. ಆದರೆ, 12 ಲಕ್ಷ ಸಸಿಗಳನ್ನು ಮಾತ್ರ ನೆಡಲು ಸಾಧ್ಯವಾಗಿದೆ. ಮುಂದಿನ ವರ್ಷ 15 ಲಕ್ಷ ಸಸಿಗಳನ್ನು ನೆಡಲಾಗುವುದು" ಎಂದು ಸಚಿವರು ಹೇಳಿದರು.
ಶನಿವಾರ ಬಂದ್ಯೋಡು ಸಮೀಪದ ಪಚ್ಚ೦ಬಳದಲ್ಲಿ ನಡೆದ ಸಮಾರಂಭದಲ್ಲಿ ಮಂಜೇಶ್ವರ ಶಾಸಕ ಎ. ಕೆ. ಎಂ ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು.
ಕೃಷಿ ಅಭಿವೃದ್ಧಿ ಇಲಾಖೆ ನಿರ್ದೇಶಕ ಟಿ. ವಿ ಸುಭಾಷ್ ಯೋಜನೆ ಬಗ್ಗೆ ವಿವರಿಸಿದರು.
ಹಿರಿಯ ಕೃಷಿಕ ಅಬೂಬಕ್ಕರ್ ಹಾಜಿ ಅವರನ್ನು ಸಚಿವರು ಗೌರವಿಸಿದರು.
ಕೃಷಿ ಕಾರ್ಯದರ್ಶಿ ಸಾಬಿರ್ ಹುಸೈನ್, ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಶಮೀನಾ, ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾ ಕೃಷ್ಣನ್, ಮಂಗಲ್ಪಾಡಿ ಪಂಚಾಯತ್ ಉಪಾಧ್ಯಕ್ಷ ಯೂಸಫ್ ಹೆರೂರ್ ಹೇರೂರ್, ಜಿಲ್ಲಾ ಪಂಚಾಯತ್ ಸದಸ್ಯ ಗೋಲ್ಡನ್ ರಹಮಾನ್, ಬ್ಲಾಕ್ ಪಂಚಾಯತ್ ಸದಸ್ಯೆ ಝುಹಾರ, ಮಂಗಲಪಾಡಿ ಪಂಚಾಯತ್ ಸದಸ್ಯರಾದ ಖೈರುನ್ನೀಸಾ, ಝುಹಾರ ಮುಹಮ್ಮದ್, ಕೃಷಿ ಅಧಿಕಾರಿಗಳಾದ ಜೋರ್ಜ್ ಅಲೆಕ್ಸಾಂಡರ್, ಎಸ್. ಸುಷ್ಮಾ, ಆದಂ ಸಾಹೇಬ್, ರಾಜಕೀಯ ಪಕ್ಷಗಳ ಮುಖಂಡರುಗಳಾದ ಮೊಯ್ದು, ಮಹಮ್ಮೂದ್ , ಅಶೋಕ್ ಕುಮಾರ್, ಹಮೀದ್, ಸಿದ್ದಿಕ್ ಕೈಕಂಬ, ಜಯರಾಮ ಬಲ್ಲಂಗೂಡೇಲ್, ಮುಹಮ್ಮದಾಲಿ, ತಾಜುದ್ದೀನ್ ಮೊದಲಾದವರು ಉಪಸ್ಥಿತರಿದ್ದರು.
ಮಂಗಲ್ಪಾಡಿ ಪಂಚಾಯತ್ ಸದಸ್ಯೆ ಖದೀಜತ್ ರಿಸಾನ ಸ್ವಾಗತಿಸಿ, ಕೃಷಿ ಅಧಿಕಾರಿ ಆರ್. ವೀಣಾ ರಾಣಿ ವಂದಿಸಿದರು.