ಉಡುಪಿ, ಡಿ.04 (DaijiworldNews/PY): "ಅಂತರಾಷ್ಟ್ರೀಯ ಪ್ರಯಾಣಿಕರಲ್ಲಿ ಕಳೆದ 5 ದಿನಗಳಲ್ಲಿ ಉಡುಪಿಗೆ 91 ಮಂದಿ ಆಗಮಿಸಿದ್ದು, ಎಲ್ಲಾ ಪ್ರಯಾಣಿಕರನ್ನು ಪತ್ತೆ ಹಚ್ಚಲಾಗಿದೆ. ವಿಮಾನ ನಿಲ್ದಾಣದ ಆರೋಗ್ಯ ಅಧಿಕಾರಿಗಳಿಂದ ಕೊರೊನಾ ಪರೀಕ್ಷೆ ನಡೆಸಲಾಗಿದೆ. ಹೈರಿಸ್ಕ್ ದೇಶದಿಂದ ಬಂದವರ ವರದಿ ನೆಗೆಟಿವ್ ಆಗಿರುವುದರಿಂದ ಅವರನ್ನು ಹೋಂ ಕ್ವಾರಂಟೈನ್ಗೆ ಒಳಪಡಿಸಲಾಗಿದೆ. 8ನೇ ದಿನದಂದು ಮರು ಕೊರೊನಾ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಲಾಗುತ್ತದೆ" ಎಂದು ಜಿಲ್ಲಾಧಿಕಾರಿ ಕೂರ್ಮರಾವ್ ತಿಳಿಸಿದ್ದಾರೆ.
ಶನಿವಾರ ಮಣಿಪಾಲದ ಜಿಲ್ಲಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, "ಕಳೆದ ಒಂದು ವಾರದಿಂದ ಉಡುಪಿಗೆ ಕೇರಳ ಹಾಗೂ ಮಹಾರಾಷ್ಟ್ರದಿಂದ ಆಗಮಿಸಿದರವ ಸಂಖ್ಯೆ ಗಮನಿಸಿದಾಗ, ಮುಂಬೈಯಿಂದ 266, ಈ ಪೈಕಿ 12 ಮಂದಿಯಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಕೇರಳದಿಂ 69 ಮಂದಿ ಆಗಮಿಸಿದ್ದು, ಈ ಪೈಕಿ 9 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ" ಎಂದು ಹೇಳಿದ್ದಾರೆ.
"ಕೇರಳದಿಂದ ಆಗಮಿಸುವವರು ಪ್ರಯಾಣ ಆರಂಭಿಸಿದ 12 ಗಂಟೆಯೊಳಗಿನ ಕೊರೊನಾ ನೆಗೆಟಿವ್ ವರದಿ ಇದ್ದರೆ ಮಾತ್ರ ಜಿಲ್ಲೆಯಲ್ಲಿ ಪ್ರವೇಶಿಸಲು ಅನುಮತಿ ಇದ್ದು, ಒಂದು ವಾರ ನಿಗಾವಹಿಸಲಾಗುತ್ತದೆ. ವರದಿಯಲ್ಲಿ ನೆಗೆಟಿವ್ ವರದಿ ಬಂದಲ್ಲಿ ಮಾತ್ರ ಜಿಲ್ಲೆಯನ್ನು ಪ್ರವೇಶಿಸಲು ಅನುಮತಿ ನೀಡಲಾಗುತ್ತದೆ" ಎಂದು ತಿಳಿಸಿದ್ದಾರೆ.
"ಉಡುಪಿಯಲ್ಲಿ ಸದ್ಯ 88 ಸಕ್ರಿಯ ಪ್ರಕರಣಗಳು ಇದ್ದು, ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ನಿಧಾನವಾಗಿ ಇಳಿಮುಖವಾಗುತ್ತಿದೆ. ಕಳೆದ 14 ದಿನಗಳಲ್ಲಿ ಸರಾಸರಿ ಪಾಸಿಟಿವಿಟಿ ದರ ಶೇ.0.4ರಷ್ಟು ಇದ್ದು, ಕಳೆದ 7 ದಿನಗಳಲ್ಲಿ ಸರಾಸರಿ ಶೇ.0.4ರಷ್ಟು ಇದೆ. ಜಿಲ್ಲೆಯಲ್ಲಿ ಕೊರೊನಾ ಸೋಂಕು ನಿಯಂತ್ರಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದ್ದು, ಕಳೆದ ಒಂದು ವಾರದಲ್ಲಿ ಜಿಲ್ಲೆಯಲ್ಲಿ ದಿನ ಒಂದಕ್ಕೆ ಸರಾಸರಿ 2,312 ನಂತೆ 1,187 ಕೊರೊನಾ ಶಂಕಿತರ ಪರೀಕ್ಷೆ ನಡೆಸಲಾಗಿದೆ. ಮಹಾರಾಷ್ಟ್ರದಿಂದ ಬರುವವರಿಗೆ ಪ್ರಯಾಣ ಪ್ರಾರಂಭಿಸಿದ 72 ಗಂಟೆಯೊಳಗಿನ ಕೊರೊನಾ ನೆಗೆಟಿವ್ ವರದಿ ಇದ್ದರೆ ಮಾತ್ರ ಜಿಲ್ಲೆಯನ್ನು ಪ್ರವೇಶಿಸಲು ಅನುಮತಿ ನೀಡಲಾಗಿದೆ. ಹೊಸದಾಗಿ ಪತ್ತೆಯಾದ ಎಲ್ಲಾ ಕೊರೊನಾ ಪಾಸಿಟಿವ್ ಪ್ರಕರಣಗಳನ್ನು ಹೋಂ ಕ್ವಾರಂಟೈನ್ಗೆ ನಿರ್ಧರಿಸಲಾಗಿದೆ" ಎಂದಿದ್ದಾರೆ.
"ಕೊರೊನಾ ಸಂಭಾವ್ಯ ಮೂರನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚು ಪರಿಣಾಮ ಉಂಟಾಗುವ ಸಾಧ್ಯತೆ ಇರುವುದರಿಂದ ನಿಗದಿಪಡಿಸಿದ ಒಟ್ಟು, ಗುರಿಯಲ್ಲಿ ಶೇ. 50 ಅನ್ನು ಜಿಲ್ಲಾ ಕೇಂದ್ರ ಸ್ಥಾನದಲ್ಲಿ ಮತ್ತು ಉಳಿದ ಶೇ.50 ಅನ್ನು ಗ್ರಾಮೀಣ ಪ್ರದೇಶದಲ್ಲಿ ಪರೀಕ್ಷೆ ಮಾಡಲಾಗುವುದು, ಒಟ್ಟು ಪರೀಕ್ಷಾ ಗುರಿಯಲ್ಲಿ ಶೇ.10ದಷ್ಟು ಮಕ್ಕಳನ್ನು ಪರೀಕ್ಷೆಗೊಳಪಡಿಸುವುದು" ಎಂದಿದ್ದಾರೆ.
"ಜಿಲ್ಲಾಡಳಿತವು ಮುಂದಿನ 15 ದಿನಗಳಲ್ಲಿ ಲಸಿಕಾಕರಣವನ್ನು ಇನ್ನೂ ತೀವ್ರಗೊಳಿಸಿ ಜಿಲ್ಲೆಯ ಎಲ್ಲಾ ಫಲಾನುಭವಿಗಳಿಗೆ ಮೊದಲನೇ ಡೋಸ್ ಲಸಿಕೆಯನ್ನು ನೀಡಲು ಕ್ರಮವಹಿಸುತ್ತಿದೆ" ಎಂದು ತಿಳಿಸಿದ್ದಾರೆ.
ಕೊರೊನಾ ನಿಯಂತ್ರಣಕ್ಕೆ ಕೈಗೊಂಡಿರುವ ಇತರ ಕ್ರಮಗಳು:
ಸರ್ಕಾರದ ಹೊಸ ಮಾರ್ಗಸೂಚಿಯಂತೆ ಉಡುಪಿ ಜಿಲ್ಲೆಯಲ್ಲಿ ದೈನಂದಿನ ಕೊರೊನಾ ಪರೀಕ್ಷಾ ಗುರಿ ಈ ಹಿಂದೆ 4000 ಇದ್ದು, ಈಗ 5000 ಕ್ಕೆ ಹೆಚ್ಚಿಸಲಾಗಿದೆ. ರೋಗ ಲಕ್ಷಣ ಹೊಂದಿರುವವರು, ಐಎಲ್ಐ/ಎಸ್ಎಆರ್ಐ ಪ್ರಕರಣಗಳು, ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಂಪರ್ಕಿಗಳು ಮತ್ತು ಹೈರಿಸ್ ಗುಂಪಿನ ವ್ಯಕ್ತಿಗಳಿಗೆ ಕೊರೊನಾ ಪರೀಕ್ಷೆ ಮಾಡುವ ಪ್ರಕ್ರಿಯೆಯನ್ನು ಮುಂದುವರೆಸುವುದು ಮತ್ತು ಪರೀಕ್ಷಾ ಪ್ರಮಾಣವನ್ನು ಹೆಚ್ಚಿಸುವುದು.
ಯಾದೃಚ್ಛಿಕ ಪರೀಕ್ಷೆ:
* ಪ್ರೌಢಶಾಲೆಗಳು ಮತ್ತು ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಭೋಧಕ ಸಿಬ್ಬಂದಿ.
* ಹೋಟೆಲ್ಗಳು ಮತ್ತು ರೆಸ್ಟೋರೆಂಟ್ ಗಳ ಸಿಬ್ಬಂದಿ.
* ಮಾಲ್ ಗಳಲ್ಲಿರುವ ಅಂಗಡಿ ಮುಂಗಟ್ಟುಗಳ ವರ್ತಕರು
* ಮಾರುಕಟ್ಟೆಯಲ್ಲಿರುವ ಅಂಗಡಿ ಮುಂಗಟ್ಟುಗಳ ವರ್ತಕರು,
* ಕ್ಯಾಟರಿಂಗ್ ಸಿಬ್ಬಂದಿ ಮತ್ತು ಮನೆ ಮನೆಗಳಿಗೆ ವಿತರಣೆ ಮಧುವ ಸಿಬ್ಬಂದಿ.
* ಕಾರ್ಖಾನೆಗಳ ಸಿಬ್ಬಂದಿ, ಎಲ್ಲಾ ಕಛೇರಿಗಳ ಸಿಬ್ಬಂದಿ
* ಪಬ್ ಮತ್ತು ಬಾರ್ ಗಳಲ್ಲಿ ಕೆಲಸಮಾಡುವ ಸಿಬ್ಬಂದಿ.
* ಸಿನಿಮಾ ಹಾಲ್ಗಳು ಮತ್ತು ಮಲ್ಟಿಪ್ಲೆಕ್ಸ್ಗಳ ಸಿಬ್ಬಂದಿ.
* ಕೆಲವೊಂದು ಸಂದರ್ಭಗಳಲ್ಲಿ ಸಾರ್ವಜನಿಕರು ಗುಂಪು ಸೇರಿದಾಗ
"ಸರಕಾರದ ಹೊರಡಿಸಿದ ಸುತ್ತೋಲೆಯ ಪ್ರಕಾರ, ದಕ್ಷಿಣ ಆಫ್ರಿಕಾ ಬೋಟ್ವಾನಾ ಮತ್ತು ಹಾಂಕಾಂಗ್ಗಳಿಂದ ಬರುವ ಪ್ರಯಾಣಿಕರಿಗೆ ಕಡ್ಡಾಯವಾಗಿ ಆರ್ಟಿಪಿಸಿಆರ್ ಪರೀಕ್ಷೆ ಮಾಡಬೇಕು ಮತ್ತು ನೆಗೆಟಿವ್ ವರದಿ ಬಂದ ನಂತರವೇ ವಿಮಾನ ನಿಲ್ದಾಣದಿಂದ ನಿರ್ಗಮಿಸಲು ಅನುಮತಿಸಬೇಕು. ಈ ಮೂರು ದೇಶಗಳಿಂದ ಕಳೆದ 15 ದಿನಗಳಿಂದ (ನವೆಂಬರ್ 12 ರಿಂದ ನವೆಂಬರ್ 27 ರವರೆಗೆ) ಈಚೆಗೆ ಬಂದಿರುವ ಪ್ರಯಾಣಿಕರನ್ನು ಪತ್ತೆ ಹಚ್ಚಿ ಆರ್ಟಿಪಿಸಿಆರ್ ಪರೀಕ್ಷೆಗೊಳಪಡಿಸಬೇಕು. ಪ್ರಯಾಣಿಕರು ಕೊರೊನಾ ಸೋಂಕಿತರಾದಲ್ಲಿ ಅವರನ್ನು 10 ದಿನಗಳ ಕಾಲ ಕಡ್ಡಾಯವಾಗಿ ಸಾಂಸ್ಮಿಕ ಪ್ರತ್ಯೇಕತೆಗೆ ಒಳಪಡಿಸಬೇಕು. ಪಾಸಿಟಿವ್ ಬಂದಿರುವ ಪರೀಕ್ಷಾ ಮಾದರಿಗಳನ್ನು ಕಡ್ಡಾಯವಾಗಿ ತಕ್ಷಣ ಜನೋಮಿಕ್ ಸೀಕ್ವೆಂನ್ನಿಂಗ್ ಪರೀಕ್ಷೆಗೊಳಪಡಿಸಬೇಕು" ಎಂದು ತಿಳಿಸಿದ್ದಾರೆ.