ಮಂಗಳೂರು, ಡಿ.04 (DaijiworldNews/PY): ವಿದ್ಯಾರ್ಥಿ ತಂಡದ ನಡುವೆ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಪಾಂಡೇಶ್ವರ ಠಾಣೆ ಪೊಲೀಸರು 8 ವಿದ್ಯಾರ್ಥಿಗಳನ್ನು ಬಂಧಿಸಿದ್ಧಾರೆ.
ಬಂಧಿತ ವಿದ್ಯಾರ್ಥಿಗಳನ್ನು ಮೊಹಮ್ಮದ್, ವಿಮಲ್, ಫಹಾದ್ ಮುನಾಫ್, ಶಾಹೀದ್, ಕಾನೆ ಜಾನ್ಸನ್, ಆದರ್ಶ್, ಮೊಹಮ್ಮದ್ ನಾಸೀಫ್, ತಾಹೀರ್ ಸೇರಿದಂತೆ ಎಂಟು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. 8 ಮಂದಿಯ ಪೈಕಿ ನಾಲ್ವರು ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದೆ.
ನಗರದ ಗುಜ್ಜರಕೆರೆ ಪ್ರದೇಶದಲ್ಲಿ ಪದವಿ ಕಾಲೇಜಿನ ಹಾಸ್ಟೆಲ್ನಲ್ಲಿ ವಾಸವಿದ್ದ ವಿದ್ಯಾರ್ಥಿಗಳ ಎರಡು ತಂಡಗಳ ನಡುವೆ ಡಿ.2ರಂದು ಘರ್ಷಣೆ ನಡೆದಿದೆ. ಯೇನಪೋಯ ಕಾಲೇಜಿನ ಹಾಸ್ಟೆಲ್ ಬಳಿಯಲ್ಲಿ ಆದರ್ಶ್ ಪ್ರೇಮ್ ಕುಮಾರ್ ತನ್ನ ಸ್ನೇಹಿತನೊಂದಿಗೆ ಮಾತನಾಡುತ್ತಿದ್ದಾಗ ಸಿನಾನ್ ಮತ್ತು ಅದೇ ಕಾಲೇಜಿನ ಇತರ ಎಂಟು ವಿದ್ಯಾರ್ಥಿಗಳು ಇಂಟರ್ಲಾಕ್ ಮತ್ತು ಕಲ್ಲುಗಳಿಂದ ಹಲ್ಲೆ ನಡೆಸಿದ್ದಾರೆ. ಇದರಿಂದ ಆದರ್ಶ್ ಹಾಗೂ ಮೊಹಮ್ಮದ್ ನಾಸಿಫ್ ಗಾಯಗೊಂಡಿದ್ದಾರೆ.
ಪ್ರಕರಣದ ಸಂಬಂಧ ಯೇನಪೋಯ ಹಾಸ್ಟೆಲ್ಗೆ ಮಂಗಳೂರು ಎಸ್ಪಿ ಶಶಿಕುಮಾರ್ ಭೇಟಿ ನೀಡಿದ್ದು, ಈ ಸಂದರ್ಭ ಘಟನೆಯ ಬಗ್ಗೆ ಅವರಿಗೆ ತಿಳಿಸಿದ್ದು, ಕೂಡಲೇ ಹಾಸ್ಟೆಲ್ ಅನ್ನು ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದ್ದಾರೆ. ಇತ್ತ 2 ವಿದ್ಯಾರ್ಥಿ ಗುಂಪಿನವರೂ ದೂರು, ಪ್ರತಿದೂರು ನೀಡಿದ್ದು, ಪ್ರಕರಣದ ಸಂಬಂಧ 9 ವಿದ್ಯಾರ್ಥಿಗಳನ್ನು ಪಾಂಡೇಶ್ವರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಡಿ.2ರಂದು 10.45 ಗಂಟೆಯ ಸುಮಾರಿಗೆ ವಿಖ್ಯಾತ್ ಶೆಟ್ಟಿ ಅವರು ವೈಯುಕ್ತಿಕ ಕೆಲಸ ಮುಗಿಸಿಕೊಂಡು ಗುಜ್ಜರಕೆರೆ ಕಡೆಗೆ ಬರುತ್ತಿರುವ ಸಂದರ್ಭ ಯೇನಪೋಯ ಹಾಸ್ಟೆಲ್ನ ಸುಮಾರು 100-150 ವಿದ್ಯಾರ್ಥಿಗಳು ಗುಂಪು ಸೇರಿಕೊಂಡು ಬೊಬ್ಬೆ ಹಾಕುತ್ತಿದ್ದರು. ಪಿಎಸ್ಐ ಹಾಗೂ ಪೊಲೀಸರು ಬೊಬ್ಬೆ ಹಾಕುತ್ತಿದ್ದವರಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ತಿಳಿಯಪಡಿಸುತ್ತಿದ್ದರೂ ಕೂಡಾ ಅವರು ಪೊಲೀಸರ ಮಾತನ್ನು ಕೇಳದೇ ಸ್ಥಳೀಯರ ಮೇಲೆ ಹಾಗೂ ಸ್ಥಳೀಯ ಮನೆಗಳ ಮೇಲೆ ಕಲ್ಲು, ಗಾಜಿನ ಚೂರುಗಳನ್ನು ಬಿಸಾಡಿ ವಿಖ್ಯಾತ್ ಶೆಟ್ಟಿ ಹಾಗೂ ಇತರರ ಮೇಲೆ ಗಾಯಗೊಳಿಸಿದ್ದಾರೆ. ಇದರಿಂದ 10,000 ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ವಶಕ್ಕೆ ಪಡೆದುಕೊಂಡ 8 ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಈ ಪೈಕಿ 4 ಮಂದಿ ಗಾಂಜಾ ಸೇವನೆ ಮಾಡಿದ್ದಾರೆ ಎನ್ನುವುದು ದೃಢಪಟ್ಟಿದೆ.