ಬಂಟ್ವಾಳ, ಡಿ 04 (DaijiworldNews/MS): ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಂಡಲ ಕಾವಳಪಡೂರು ಮಹಾಶಕ್ತಿ ಕೇಂದ್ರದ ಆಶ್ರಯದಲ್ಲಿ ವಿಧಾನ ಪರಿಷತ್ ಚುನಾವಣಾ ಪ್ರಚಾರ ಸಭೆಯು ವಾಮದಪದವು ಗಣೇಶ ಮಂದಿರದಲ್ಲಿ ಜರುಗಿತು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಲಾಯಿತು. ಬಂಟ್ವಾಳ ಮಂಡಲ ಅಧ್ಯಕ್ಷ ದೇವಪ್ಪ ಪೂಜಾರಿ ಅವರು ಅತಿಥಿಗಳನ್ನು ಸ್ವಾಗತಿಸಿದರು.
ಬಳಿಕ ಮಾತಾಡಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು, "ಶ್ರೀನಿವಾಸ್ ಪೂಜಾರಿ ಅವರು ಕಳೆದ 14 ವರ್ಷಗಳಲ್ಲಿ ನಾಲ್ಕನೇ ಬಾರಿ ಚುನಾವಣೆ ಎದುರಿಸುತ್ತಿದ್ದಾರೆ. ಪ್ರತೀ ಬಾರಿ ಭರ್ಜರಿ ಮತಗಳನ್ನು ಪಡೆದು ವಿಧಾನಸಭೆ ಪ್ರವೇಶಿಸಿದ್ದಾರೆ. ಈ ಬಾರಿ ಒಂದೇ ಅಭ್ಯರ್ಥಿಯನ್ನು ಪಕ್ಷ ಕಣಕ್ಕಿಳಿಸಿದ್ದು ನಾವಿಲ್ಲಿ ಶ್ರೀನಿವಾಸ್ ಪೂಜಾರಿಯವರಿಗೆ ಬಹುಮತ ದೊರಕಿಸಿಕೊಡಲು ಸೇರಿದ್ದೇವೆ. ಬಂಟ್ವಾಳ ಮಂಡಲದ 64ರಲ್ಲಿ 64 ಪಂಚಾಯತ್ ಸದಸ್ಯರು ಕೂಡಾ ಇಲ್ಲಿ ಸೇರಿದ್ದೇವೆ. ನಾವು 64 ಮತದಾರರನ್ನು ಹೊಂದಿದ್ದು ಅಷ್ಟೇ ಮತ ಚಲಾಯಿಸಿ ಸುಮ್ಮನಿರುವುದಲ್ಲ. ಬದಲಿಗೆ ಕನಿಷ್ಠ 10 ಮತಗಳನ್ನಾದರೂ ಬೇರೆ ಪಕ್ಷಗಳಿಂದ ಸೆಳೆಯಲು ಪ್ರಯತ್ನ ಪಡಬೇಕು" ಎಂದು ಕರೆ ನೀಡಿದರು.
ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ಅವರು ಮಾತಾಡುತ್ತ, "ಪಂಡಿತ್ ದೀನದಯಾಳ್ ಅವರು ಹೇಳಿದಂತೆ ರಾಜಕೀಯವನ್ನು ವ್ರತವಾಗಿ ತೆಗೆದುಕೊಂಡ ಕೆಲವೇ ಮಂದಿಯಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರು ಒಬ್ಬರು. ರಾವಣ ರಾಜ್ಯವನ್ನು ವಿಭೀಷಣ ರಾಜ್ಯವನ್ನಾಗಿ ಮಾಡಿರುವ ಕೀರ್ತಿಯೂ ಅವರಿಗೇ ಸಲ್ಲಬೇಕು. ಈ ಬಾರಿ ಒಬ್ಬನೇ ಅಭ್ಯರ್ಥಿ ಒಂದೇ ಮತ ಎನ್ನುವ ಮಾತನ್ನು ಯಾಕೆ ಒತ್ತು ಕೊಟ್ಟು ಹೇಳುತ್ತಿದ್ದೇವೆ ಎಂದರೆ ಕಳೆದ ಬಾರಿ 250ರಿಂದ 300ಕ್ಕೂ ಹೆಚ್ಚು ಮತಗಳು ಅಸಿಂಧುವಾಗಿದೆ. ಇಂತಹ ಬೆಳವಣಿಗೆಯಿಂದ ಸೋಲು ಗೆಲುವಿನ ಲೆಕ್ಕಾಚಾರ ತಲೆ ಕೆಳಗಾಗಬಹುದು. ಹೀಗಾಗಿ ಒಂದು ಮತವನ್ನು ಕೂಡ ಹಾಳಾಗಲು ನಾವು ಬಿಡಬಾರದು. ನಾನು ಸದಾ ಗ್ರಾಮ ಪಂಚಾಯತ್ ಸದಸ್ಯರ ಜೊತೆಗಿದ್ದು ಅವರ ನೋವಿಗೆ ಜೊತೆಯಾದವನು. ಹಿಂದೆ ಗ್ರಾಮ ಪಂಚಾಯತ್ ಸದಸ್ಯರಿಗೆ ಸಿಗುತ್ತಿದ್ದ 250 ರೂ. ಗೌರವ ಧನ ಈಗ 1000 ರೂ. ಗೆ ಏರಿಕೆಯಾಗಿದ್ದು ಅದು ಸದ್ಯದಲ್ಲೇ 2000 ರೂ. ಆಗಲಿದೆ. ಕಳೆದ 13 ವರ್ಷಗಳಿಂದ ಪಂಚಾಯತ್ ವ್ಯವಸ್ಥೆ ಮತ್ತು ಸದಸ್ಯರ ಪರವಾಗಿ ಅತ್ಯಂತ ಶ್ರದ್ಧೆಯಿಂದ ಕೆಲಸ ಮಾಡಿರುವ ಸಂತಸ ನನ್ನಲ್ಲಿದೆ. ಹೀಗಾಗಿ ನಾಲ್ಕನೇ ಬಾರಿ ಕಣದಲ್ಲಿದ್ದು ಪ್ರಥಮ ಪ್ರಾಶಸ್ತ್ಯ ಮತವನ್ನು ನನಗೆ ನೀಡುವ ಮೂಲಕ ಅಭಿವೃದ್ಧಿಗೆ ಸಹಕರಿಸಿ" ಎಂದು ಮನವಿ ಮಾಡಿದರು.
ಬಳಿಕ ಮಾತಾಡಿದ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಅವರು, "ಬಂಟ್ವಾಳದ ಕಾವಳಪಡೂರಿನಲ್ಲಿ 64ರಲ್ಲಿ 64 ಪಂಚಾಯತ್ ಸದಸ್ಯರು ಸೇರಿದ್ದಾರೆ. ಇದಕ್ಕಾಗಿ ಕ್ಷೇತ್ರದ ಮಾಜಿ ಶಾಸಕ ರಮಾನಾಥ್ ರೈ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ರಾಜೇಶ್ ನಾಯ್ಕ್ ಅವರು ಕ್ಷೇತ್ರ ಕಂಡ ಅಪರೂಪದ ಶಾಸಕರಾಗಿದ್ದಾರೆ. ಅವರ ಶ್ರಮದಿಂದ ಕ್ಷೇತ್ರ ಇಂದು ಅಭಿವೃದ್ಧಿಯ ಪಥದಲ್ಲಿದೆ. ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಪಕ್ಷ ನಾಲ್ಕನೇ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದೆ. ಅವರ ಗೆಲುವು ಕಷ್ಟವೇನಲ್ಲ ಆದರೆ ಅದು ಭಾರತೀಯ ಜನತಾ ಪಾರ್ಟಿಯ ಗೆಲುವು ಆಗಬೇಕು. ಈ ನಿಟ್ಟಿನಲ್ಲಿ ಚುನಾವಣೆಯಲ್ಲಿ ಮತದಾರರ ಜಾಗೃತಿಗಾಗಿ ಅಲ್ಲಲ್ಲಿ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿದೆ. ಕಳೆದ ಬಾರಿ ಸುಮಾರು 300 ಮತಗಳು ಹಾಳಾಗಿದ್ದು ಈ ಬಾರಿ ಒಂದೊಂದು ಮತಗಳು ಕೂಡಾ ಅಸಿಂಧುವಾಗಬಾರದು. ವಿರೋಧ ಪಕ್ಷದವರು ನಮ್ಮ ಮತಗಳನ್ನು ಬೇರೆ ಬೇರೆ ವಿಧಾನ, ಆಮಿಷಗಳನ್ನು ಒಡ್ದುವ ಮೂಲಕ ಸೆಳೆಯಲು ಪ್ರಯತ್ನಿಸಬಹುದು. ಆಗ ನಾವು ನಮ್ಮ ಮತಗಳು ಮಾರಾಟಕ್ಕಿಲ್ಲ ಎಂಬ ಒಂದೇ ಧ್ಯೇಯದೊಂದಿಗೆ ಮತ ಚಲಾಯಿಸಬೇಕು. ಒಂದೇ ಅಭ್ಯರ್ಥಿಯ ಮುಂದೆ 1 ಎಂದು ಬರೆಯುವ ಮೂಲಕ ನಮ್ಮ ಹಕ್ಕನ್ನು ಚಲಾಯಿಸಬೇಕು" ಎಂದರು.
ಸಚಿವ ವಿಧಾನ ಪರಿಷತ್ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಕೊರಗಪ್ಪ ನಾಯ್ಕ್, ಹರಿಕೃಷ್ಣ ಬಂಟ್ವಾಳ, ಸಂತೋಷ್ ರೈ ಬೋಳಿಯಾರ್, ಮಾಧ್ಯಮ ಪ್ರಮುಖ್ ರಣ್ ದೀಪ್ ಕಾಂಚನ್, ಸತೀಶ್ ಕುಂಪಲ, ರಾಜೇಶ್ ಕಾವೇರಿ, ದೇವದಾಸ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ, ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕುಮಾರ್, ನಿತಿನ್ ಕುಮಾರ್, ಕಸ್ತೂರಿ ಪಂಜ, ಮಂಜುಳಾ ಆಚಾರ್ಯ, ತುಂಗಪ್ಪ ಬಂಗೇರ, ಈಶ್ವರ್ ಕಟೀಲು ಮತ್ತಿತರರು ಉಪಸ್ಥಿತರಿದ್ದರು.