ಮಂಗಳೂರು, ಡಿ.03 (DaijiworldNews/PY): ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕರ ಮತ್ತು ಶಿಕ್ಷಕೇತರ ಸಂಘ, ಇದರ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಆಶ್ರಯದಲ್ಲಿ ವಿಶ್ವ ವಿಕಲಚೇತನರ ದಿನವನ್ನು ಆಚರಿಸಲಾಯಿತು.
ಮಂಗಳೂರಿನ ಕದ್ರಿಯಲ್ಲಿರುವ ಲಯನ್ಸ್ ಸೇವಾ ಮಂದಿರದ ಮುಂಭಾಗದಲ್ಲಿ ಹೋಟೆಲ್ ಫುಡ್ ಲ್ಯಾಂಡಿನ ಮಾಲಕ ಸನ್ಮಾನ್ಯ ಗಣೇಶ್ ಶೆಟ್ಟಿ ಅವರು ಬಲೂನುಗಳನ್ನು ಹಾರಿಸಿ ಶುಭ ಹಾರೈಸಿ ಪಥಸಂಚಲನವನ್ನು ಉದ್ಘಾಟಿಸಿದರು.
ಶ್ರೀ ದುರ್ಗಾಪರಮೇಶ್ವರಿ ನಾಗಕನ್ನಿಕೆ ದೇವಸ್ಥಾನ, ಕೊಂಚಾಡಿ ಇದರ ಮೊಕ್ತೇಸರ ರಮಾನಂದ ಬಂಡಾರಿ, ಕದ್ರಿ ಮಾರುಕಟ್ಟೆಯ ಉದ್ಯಮಿ ಸುಧೀರ್ ಕದ್ರಿ, ಮಂಗಳೂರು ಮಹಾನಗರಪಾಲಿಕೆಯ ಸದಸ್ಯ ಜಗದೀಶ್ ಶೆಟ್ಟಿ, ಸಾನಿಧ್ಯ ಸಂಸ್ಥೆಯ ಗೌರವ ಸಲಹೆಗಾರ ಶಾಲಿನಿ ಪಂಡಿತ್ ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಇಂದು ನಡೆದ ಪಥಸಂಚಲನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಏಳು ಶಾಲೆಗಳ ಸುಮಾರು 300 ವಿಶೇಷ ವಿದ್ಯಾರ್ಥಿಗಳು ಹಾಗೂ ಸಂಸ್ಥೆಯ ಮುಖ್ಯಸ್ಥರು ವಿಶೇಷ ಶಿಕ್ಷಕರು ಶಿಕ್ಷಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.
ವಿಶೇಷ ಮಕ್ಕಳಿಗೆ ಬ್ಯಾಂಡ್ ತರಬೇತಿ ನೀಡುತ್ತಿದ್ದ ಹಾಗೂ 2021ರ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದ ಹ್ಯಾರಿ ಡಿಸೋಜಾ ಅವರನ್ನು ಸನ್ಮಾನಿಸಲಾಯಿತು.
ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ವಿಶೇಷ ಮಕ್ಕಳನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.