ಬಂಟ್ವಾಳ, ಡಿ.03 (DaijiworldNews/PY): "ಬಿಜೆಪಿ ಪಕ್ಷದ ಕೃಪಾಕಟಾಕ್ಷದಿಂದ ತಾಲೂಕಿನ ಹಲವಡೆಗಳಲ್ಲಿ ಅಕ್ರಮ ಚಟುವಟಿಕೆಗಳು ರಾಜಾರೋಷವಾಗಿ ನಡೆಯುತ್ತಿದೆ" ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಆರೋಪಿಸಿದ್ದಾರೆ.
ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಕಛೇರಿಯಲ್ಲಿ ಶುಕ್ರವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಅಧಿಕಾರಶಾಹಿ ವ್ಯವಸ್ಥೆಯ ಬೆಂಬಲದಿಂದ ಜುಗಾರಿಕಟ್ಟೆಗಳು, ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು ಕಾರ್ಯಾಚರಿಸುತ್ತಿದ್ದು, ಬಡವರ್ಗದವರ ಪಾಲಿಗೆ ಶಾಪವಾಗಿದೆ" ಎಂದರು.
"ಕಡೇಶ್ವಾಲ್ಯದ ಆರಿಕಲ್ ಪರಿಸರದಲ್ಲಿ ಅಧಿಕೃತ ಮರಳುಗಾರಿಕೆ ನಡೆಯುತ್ತಿದ್ದು, ಹತ್ತಿರದ ಜಡ್ತಿಲ ಹಾಗೂ ಶೇರಾದಲ್ಲಿ ಅಕ್ರಮ ಮರಳುದಂಧೆ ನಡೆಯುತ್ತಿದೆ. ಈ ಬಗ್ಗೆ ಮಾಹಿತಿ ಇದ್ದರೂ ನಿಯಂತ್ರಿಸಬೇಕಾದ ಪೊಲೀಸ್ ಇಲಾಖೆ ಹಾಗೂ ಗಣಿ ಇಲಾಖೆಯ ಅಧಿಕಾರಿಗಳು ಮೌನವಾಗಿದ್ದಾರೆ" ಎಂದು ರೈ ಆರೋಪಿಸಿದರು.
"ಕನ್ಯಾನ ಸಹಿತ ಕೆಲವು ಜಮೀನುಗಳ ಮಣ್ಣಿಗೆ ಭಾರೀ ಬೇಡಿಕೆ ಇದ್ದು ಸಿಮೆಂಟ್ ಕಂಪೆನಿಗಳಿಗೆ ಸರಬರಾಜಾಗುತ್ತಿದೆ. ಇಂತಹಾ ಕಡೆಗಳಲ್ಲಿ ಆ ಮಣ್ಣಿನಲ್ಲಿರುವ ವಿಶೇಷತೆಗಳ ಬಗ್ಗೆ ವೈಜ್ಞಾನಿಕ ಪರೀಕ್ಷೆ ನಡೆಸುವ ನಿಟ್ಟಿನಲ್ಲಿ ಗಣಿ ಅಧಿಕಾರಿಗಳು ಗಮನಹರಿಸಬೇಕು" ಎಂದು ಒತ್ತಾಯಿಸಿದರು.
"ಮೆಲ್ಕಾರ್, ಬಿ.ಸಿ.ರೋಡು, ಕೈಕಂಬ, ಬಂಟ್ವಾಳ, ಬೈಪಾಸ್, ಪೂಂಜಾಲಕಟ್ಟೆಯಲ್ಲಿ ಅಕ್ರಮ ಜುಗಾರಿಕಟ್ಟೆಗಳಿದ್ದು, ಅವುಗಳನ್ನು ನಿಯಂತ್ರಿಸಲು ಪೊಲೀಸರು ಕ್ರಮಕೈಗೊಳ್ಳಬೇಕು" ಎಂದು ಒತ್ತಾಯಿಸಿದರು.
"ವಿಧಾನ ಪರಿಷತ್ ಚುನಾವಣೆ ಕುರಿತಾಗಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಅಭ್ಯರ್ಥಿ ಗೆಲುವಿನಲ್ಲಿ ಯಾವುದೇ ಸಂಶಯವಿಲ್ಲ, ಪಕ್ಷೇತರ ಅಭ್ಯರ್ಥಿ ಗೆದ್ದ ಉದಾಹರಣೆಯೂ ಇಲ್ಲ. ಹೀಗಾಗಿ ಅವರಲ್ಲಿ ಒಬ್ಬರು ನಮ್ಮಲ್ಲಿ ಒಬ್ಬರು ಗೆಲುವುದು ಸಾಧಿಸುವುದು ಖಚಿತ" ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪುರಸಭಾ ಅಧ್ಯಕ್ಷ ಮಹಮ್ಮದ್ ಶರೀಫ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ನಿಕಟಪೂರ್ವ ಜಿ.ಪಂ.ಸದಸ್ಯ ಚಂದ್ರಪ್ರಕಾಶ ಶೆಟ್ಟಿ, ಎಪಿಎಂಸಿ ಮಾಜಿ ಅಧ್ಯಕ್ಷ ಪದ್ಮನಾಭ ರೈ, ತಾ.ಪಂ. ನಿಕಟಪೂರ್ವ ಉಪಾಧ್ಯಕ್ಷ ಅಬ್ಬಾಸ್ ಅಲಿ ಮೊದಲಾದವರು ಉಪಸ್ಥಿತರಿದ್ದರು.