ಉಳ್ಳಾಲ: ಉರೂಸ್ನ ಕೊನೆಯ ಎರಡು ದಿನಗಳ ಮುನ್ನ ದರ್ಗಾಕ್ಕೆ ಬಂದು ಸೇರುತ್ತವೆ ಹರಕೆಯ ಆಡುಗಳು
Fri, Dec 03 2021 04:38:39 PM
ಉಳ್ಳಾಲ, ಡಿ.03 (DaijiworldNews/PY): ದಕ್ಷಿಣ ಭಾರತದ ಅಜ್ಮೀರ್ ಎಂದೇ ಖ್ಯಾತವಾಗಿರುವ ಉಳ್ಳಾಲ ಸೈಯದ್ ಮದನಿ ದರ್ಗಾಕ್ಕೆ ಇಷ್ಟಾರ್ಥ ಸಿದ್ದಿಗಾಗಿ ಕುರಿ, ಆಡು ನೀಡುವುದು ವಾಡಿಕೆಯಾಗಿದೆದ್ದು, ಉಳ್ಳಾಲ ದರ್ಗಾಕ್ಕೆಂದೇ ಬಿಲ್ಲೆ ಕಟ್ಟಿ ಬಿಟ್ಟಿರುವ ಆಡು ಅಥವಾ ಕುರಿಗಳು ಊರೂರು ಸುತ್ತಿ ಕೊನೆಗೆ ಉಳ್ಳಾಲ ದರ್ಗಾಕ್ಕೆ ಬಂದು ಸೇರುತ್ತವೆ
ಈ ದರ್ಗಾ ತುಳುನಾಡಿನಲ್ಲಿ ಪ್ರಸಿದ್ದಿ ಪಡೆದ ಕ್ಷೇತ್ರವಾಗಿದ್ದು, ಭಕ್ತಾಧಿಗಳು ಜಾತಿ-ಧರ್ಮದ ಭೇದವಿಲ್ಲದೇ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ಆಶೀರ್ವಾದವನ್ನು ಪಡೆಯುತ್ತಾರೆ.
ಕೊರೊನಾ ಕಾರಣದಿಂದ ವಿಳಂಬಗೊಂಡಿದ್ದ ಕುತುಬಝಾಮನ್ ಹಜ್ರತ್ ಸೈಯ್ಯದ್ ಮಹಮ್ಮದ್ ಫರೀಫುನ್ ಮದನಿ ತಂಙಳ್ ಅವರ 424ನೇ ವಾರ್ಷಿಕ ಮತ್ತು 21ನೇ ಪಂಚ ವಾರ್ಷಿಕ ಉರೂಸ್ ನೇರ್ಚೆ ಡಿ.23ರಿಂದ ಜ.16ರವರೆಗೆ ನಡೆಯಲಿದೆ.
ಈ ಪವಿತ್ರ ಕ್ಷೇತ್ರಕ್ಕೆ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಆಡು, ಕುರಿಗಳನ್ನು ಹರಕೆಯ ಮೂಲಕ ಭಕ್ತರು ನೀಡುವುದು ಕ್ಷೇತ್ರದ ವಾಡಿಕೆಯಾಗಿದೆ.
"ಈ ಕ್ಷೇತ್ರದ ವಿಶೇಷತೆ ಏನೆಂದರೆ, ಇಲ್ಲಿಗೆ ನೀಡುವ ಆಡು, ಕುರಿಗಳನ್ನು ಕೆಲವು ಭಕ್ತಾಧಿಗಳು ದರ್ಗಾಕ್ಕೆ ತಂದು ನೀಡಿದರೆ, ಇನ್ನೂ ಕೆಲವರು ಭಯ-ಭಕ್ತಿಯಿಂದ ಆಡು ಅಥವಾ ಕುರಿಯ ಕುತ್ತಿಗೆಗೆ ಒಂದು ಬಿಲ್ಲೆಯನ್ನು ಕಟ್ಟಿ ಬಿಟ್ಟುಬಿಡುತ್ತಾರೆ. ಉಳ್ಳಾಲ ದರ್ಗಾಕ್ಕೆಂದೇ ಬಿಲ್ಲೆ ಕಟ್ಟಿ ಬಿಟ್ಟಿರುವ ಆಡು ಅಥವಾ ಕುರಿಗಳು ಊರೂರು ಸುತ್ತಿ ಕೊನೆಗೆ ಉಳ್ಳಾಲ ದರ್ಗಾಕ್ಕೆ ಬಂದು ಸೇರುತ್ತವೆ. ಈ ನಂಬಿಕೆಯ ಬಗ್ಗೆ ಐತಿಹಾಸಿಕ ಪುಟಗಳಲ್ಲಿಯೂ ಉಲ್ಲೇಖವಿದ್ದು, ಇಂದಿಗೂ ಕೂಡಾ ಭಕ್ತಾಧಿಗಳು ಆಡು ಅಥವಾ ಕುರಿಗಳಿಗೆ ಬಿಲ್ಲೆ ಕಟ್ಟಿ ಬಿಟ್ಟರೂ ಉರೂಸ್ನ ಕೊನೆಯ ಎರಡು ದಿವಸಗಳ ಮೊದಲು ಉಳ್ಳಾಲ ದರ್ಗಾಕ್ಕೆ ಸೇರುತ್ತವೆ" ಎಂದು ಹೇಳುತ್ತಾರೆ ದರ್ಗಾದ ಆಡಳಿತ ಮಂಡಳಿಯ ಅಧ್ಯಕ್ಷ ಅಬ್ದುಲ್ ರಶೀದ್.
ದ.ಕ., ಉಡುಪಿ, ಉತ್ತರ ಕರ್ನಾಟಕ, ಕರ್ನಾಟಕದ ವಿವಿಧ ಜಿಲ್ಲೆಗಳು ಸೇರಿದಂತೆ ಕೇರಳ, ರಾಜಸ್ತಾನ ಹಾಗೂ ವಿವಿಧ ರಾಜ್ಯಗಳಿಂದಲೂ ಉಳ್ಳಾಲ ದರ್ಗಾಕ್ಕೆ ಆಡು, ಕುರಿಗಳು ಹರಕೆಯ ರೂಪದಲ್ಲಿ ಬರುತ್ತವೆ.