ಮಂಗಳೂರು, ಡಿ 03 (DaijiworldNews/MS): ವಿದ್ಯಾರ್ಥಿ ತಂಡಗಳ ನಡುವೆ ಡಿ.2ರಂದು ಹೊಡೆದಾಟ ನಡೆದ ಹಿನ್ನೆಲೆಯಲ್ಲಿ ಗುಜ್ಜರಕೆರೆ ಸ್ಥಳೀಯರು ಡಿ.3 ರ ಶುಕ್ರವಾರ ಪ್ರತಿಭಟನೆ ನಡೆಸಿ ಕಾಲೇಜು ಹಾಸ್ಟೆಲ್ ಖಾಲಿ ಮಾಡುವಂತೆ ಒತ್ತಾಯಿಸಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಭೇಟಿ ನೀಡಿ ಸ್ಥಳೀಯರೊಂದಿಗೆ ಮಾತುಕತೆ ನಡೆಸಿದ್ದಾರೆ.
"ಹಾಸ್ಟೆಲ್ನ ವಿದ್ಯಾರ್ಥಿಗಳು ದಿನನಿತ್ಯ ತೊಂದರೆ ಸೃಷ್ಟಿಸುತ್ತಿದ್ದರೂ ನಿನ್ನೆ ರಾತ್ರಿ ಮಿತಿ ಮೀರಿದೆ. ಹಾಸ್ಟೆಲ್ ಗಳ ವಿದ್ಯಾರ್ಥಿಗಳು ಕಿರುಚಾಟ ನಡೆಸುವುದು, ದಾಂಧಲೆ, ಮೂರ್ನಾಲ್ಕು ಜನರೊಂದಿಗೆ ರಸ್ತೆಗಳಲ್ಲಿ ಅತಿರೇಕವಾಗಿ ವಾಹನ ಚಲಾಯಿಸುವುದು, ತಡರಾತ್ರಿ ವಾಹನ ಚಾಲನೆ ಹೀಗೆ ಹತ್ತ ಹಲವು ತೊಂದರೆಗಳನ್ನು ಸೃಷ್ಟಿಸುತ್ತಾರೆ" ಎಂದು ಸ್ಥಳೀಯರು ಆಯುಕ್ತರಿಗೆ ದೂರು ನೀಡಿದ್ದಾರೆ.
ದೀಪಾವಳಿ ಸಂದರ್ಭದಲ್ಲಿ ಹಾಸ್ಟೆಲ್ ನ ವಿದ್ಯಾರ್ಥಿಗಳು ಬಾಲ್ಕನಿಯಿಂದ ಅಕ್ಕಪಕ್ಕದ ಮನೆಗಳ ಮೇಲೆ ಪಟಾಕಿ ಎಸೆದು ಅನಾಹುತ ಸೃಷ್ಟಿಸಿದ್ದಲ್ಲದೆ, ಬಾಲ್ಕನಿಯಲ್ಲಿ ಅರೆಬೆತ್ತಲೆಯಾಗಿ ಕಾಣಿಸಿಕೊಳ್ಳುತ್ತಾರೆ. ಇದರಿಂದ ಜನವಸತಿ ಪ್ರದೇಶಗಳ ನಿವಾಸಿಗಳಿಗೆ ತೊಂದರೆಯುಂತಾಗಿದೆ ಸ್ಥಳೀಯರು ಆರೋಪಿಸಿದ್ದಾರೆ.
ಡಿಸೆಂಬರ್ 2 ರಂದು ವಿದ್ಯಾರ್ಥಿಗಳು ತಂಡಗಳ ನಡುವೆ ಪರಸ್ಪರ ಘರ್ಷಣೆ ನಡೆದಿದ್ದು, ಪೊಲೀಸರ ಮೇಲೆ ಹಲ್ಲೆ, ಕಲ್ಲು ತೂರಾಟ, ಕಾಲೇಜು ಭದ್ರತಾ ಕೊಠಡಿಯ ಕಿಟಕಿ ಗಾಜುಗಳನ್ನು ಒಡೆದು, ಕಟ್ಟಡಕ್ಕೆ ಹಾನಿಗೊಳಿಸಿದ್ದು ಇಡೀ ಘಟನೆ ಹಿಂಸಾಚಾರದತ್ತ ತಿರುಗಿತ್ತು.ಈ ಹಿನ್ನಲೆಯಲ್ಲಿ ಕಾಲೇಜು ಹಾಸ್ಟೆಲ್ ತೆರವು ಮಾಡುವಂತೆ ಆಗ್ರಹಿಸಿ ಸ್ಥಳೀಯ ನಿವಾಸಿಗಳು ಹಾಸ್ಟೆಲ್ ಹಾಗೂ ಕಾಲೇಜು ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ , "ಘಟನೆಗೆ ಸಂಬಂಧಪಟ್ಟಂತೆ ಆರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ, ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳನ್ನು ದಾಖಲಿಸಲಾಗಿದೆ. ಸ್ಥಳೀಯರೂ ಕೂಡಾ ದೂರು ನೀಡಲು ಸಿದ್ಧರಿದ್ದಾರೆ" ಎಂದು ಹೇಳಿದ್ದಾರೆ.
ಯೇನಪೊಯ ಕಲಾ, ವಿಜ್ಞಾನ, ವಾಣಿಜ್ಯ ಸಂಸ್ಥೆಯ ಪ್ರಾಂಶುಪಾಲ ಡಾ.ಪರ್ವಧವರ್ದಿನಿ ಮಾತನಾಡಿ, "ನಮ್ಮಲ್ಲಿ ರ್ಯಾಗಿಂಗ್ ಸಮಿತಿ ಇದ್ದು, ಆಗಾಗ ಸಂಬಂಧಪಟ್ಟವರಿಗೆ ವರದಿ ಕಳುಹಿಸುತ್ತೇವೆ. ಆದರ್ಶ ಎಂಬ ವಿದ್ಯಾರ್ಥಿಯನ್ನು ಮೂರು ಬಾರಿ ಅಮಾನತುಗೊಳಿಸಲಾಗಿದೆ. ಅದರೂ ವಿದ್ಯಾರ್ಥಿಯ ಭವಿಷ್ಯದ ದೃಷ್ಟಿಯಿಂದ ಅಧ್ಯಯನ ಮಾಡಲು ಅವಕಾಶ ನೀಡಿದ್ದೆವು. ಕೆಲವೇ ದಿನಗಳಲ್ಲಿ ಅವರ ವಿರುದ್ದ ಕ್ರಮ ಕೈಗೊಳ್ಳುತ್ತೇವೆ" ಸಮಸ್ಯೆಗಳ ಇತ್ಯರ್ಥಕ್ಕೆ ಸ್ವಲ್ಪ ಕಾಲಾವಕಾಶ ನೀಡುವಂತೆ ಮನವಿ ಮಾಡಿದ ಅವರು ಘಟನೆಗಾಗಿ ಸ್ಥಳೀಯರಲ್ಲಿ ಕ್ಷಮೆಯಾಚಿಸಿದರು.
ಘಟನಾ ಸ್ಥಳಕ್ಕೆ ವಿಎಚ್ಪಿ ಮುಖಂಡ ಶರಣ್ ಪಂಪ್ವೆಲ್, ಶಾಸಕ ವೇದವ್ಯಾಸ್ ಕಾಮತ್ ಮುಂತಾದವರು ಭೇಟಿ ನೀಡಿದ್ದಾರೆ.