ಮಂಗಳೂರು, ಡಿ.03 (DaijiworldNews/PY): ಆಟೋ ರಿಕ್ಷಾವೊಂದರ ಚಾಲಕ ಚಾಲನೆಯ ಸಂದರ್ಭ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಶುಕ್ರವಾರ ಬೆಳಗ್ಗೆ ನೇತ್ರಾವತಿ ಸೇತುವೆಯಲ್ಲಿ ನಡೆದಿದೆ.
ಮೃತ ಆಟೋ ರಿಕ್ಷಾ ಚಾಲಕನನ್ನು ಚೊಕ್ಕಬೆಟ್ಟು ನಿವಾಸಿ ಮುಹಮ್ಮದ್ ಹನೀಫ್ (46) ಎಂದು ಗುರುತಿಸಲಾಗಿದೆ.
ಕಲ್ಲಾಪುವಿನಲ್ಲಿರುವ ಗ್ಲೋಬಲ್ ಮಾಡುಕಟ್ಟೆಗೆ ತರಕಾರಿ ಖರೀದಿಸಲು ವ್ಯಾಪಾರಿಯೋರ್ವರನ್ನು ಆಟೋ ರಿಕ್ಷಾದಲ್ಲಿ ಕರೆದೊಯ್ಯುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಜಪ್ಪಿನಮೊಗರು ತಲುಪಿದಾಗ ಆಟೋ ರಿಕ್ಷಾ ಚಾಲಕ ಹನೀಫ್ ಅವರಿಗೆ ಕಣ್ಣು ಮಂಜಾದಂತೆ ಆಗಿದ್ದು, ಈ ಸಂದರ್ಭ ರಿಕ್ಷಾ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಈ ಸಂದರ್ಭ ಸಾರ್ವಜನಿಕರು ಹನೀಫ್ ಅವರನ್ನು ಆರೈಕೆ ಮಾಡಿದ್ದಾರೆ. ಬಳಿಕ ಅವರು ರಿಕ್ಷಾ ಚಲಾಯಿಸಿಕೊಂಡು ಅಲ್ಲಿಂದ ಸ್ವಲ್ಪ ಮುಂದಕ್ಕೆ ಹೋಗಿದ್ದಾರೆ. ನೇತ್ರಾವತಿ ಸೇತುವೆ ತಲುಪಿದಾ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಈ ಕುರಿತು ಕಂಕನಾಡಿ ನಗರ ಠಾಣೆಗೆ ದೂರು ನೀಡಲಾಗಿದೆ ಎಂದು ತಿಳಿದುಬಂದಿದೆ.