ಮಂಗಳೂರು, (DaijiworldNews/MS): 2014ರ ಮೇ 4ರಂದು ಗುರುಪುರ ಮೂಳೂರು ಗ್ರಾಮದ ಆಣಿ ಎಂಬಲ್ಲಿ ನಡೆದಿದ್ದ ಅಪಘಾತ ಪ್ರಕರಣದಲ್ಲಿ ಆರೋಪಿ ಚಾಲಕ ತೆಂಕ ಎಡಪದವಿನ ತಿಮ್ಮಪ್ಪ ದೇವಾಡಿಗನಿಗೆ ಮಂಗಳೂರಿನ ೨ನೇ ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶೆ ಅಂಜಲಿ ಶರ್ಮಾ ಅವರು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಅಪಘಾತವಾದ ದಿನ 1:15ರ ವೇಳೆಗೆ ಬೆಳ್ತಂಗಡಿ ಸಮೀಪದ ಬಡಕೋಡಿಯ ರೊನಾಲ್ಡ್ ಡಿಕೋಸ್ತಾ ತನ್ನ ತಂಗಿ ಹಾಗೂ ಮತ್ತೋರ್ವ ತಂಗಿಯ ಮಗನಾದ ಅವಿನೆಲ್ ಪಾಸ್ ಅವರೊಂದಿಗೆ ದ್ವಿಚಕ್ರ ವಾಹನದಲ್ಲಿ ಮೂಡುಬಿದಿರೆ-ಮಂಗಳೂರು ರಸ್ತೆಯಲ್ಲಿ ಕೈಕಂಬ ಕಡೆಯಿಂದ ಮಂಗಳೂರಿಗೆ ಬರುತ್ತಿದ್ದರು.
ಈ ವೇಳೆ ಮಂಗಳೂರಿನಿಂದ ಕೈಕಂಬ ಕಡೆಗೆ ಟೆಂಪೋ ಟ್ರಾಕ್ಸ್ನ್ನು ಅದರ ಚಾಲಕ ತಿಮ್ಮಪ್ಪ ದೇವಾಡಿಗ ನಿರ್ಲಕ್ಷತನದಿಂದ ಚಲಾಯಿಸಿಕೊಂಡ ಪರಿಣಾಮ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದಿತ್ತು. ಇದರಿಂದ ಅವಿನೆಲ್ ಗಂಭೀರವಾಗಿ ಗಾಯಗೊಂಡಿದ್ದರೆ, ರೊನಾಲ್ಡ್ ಡಿಕೋಸ್ತರಿಗೂ ಗಾಯವಾಗಿತ್ತು. ಆದರೆ ಬಾಲಕ ಅವಿನೇಲ್ (4) ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದ.
ಆರೋಪಿ ಚಾಲಕ ತಿಮ್ಮಪ್ಪ ದೇವಾಡಿಗ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದೆ, ಪೊಲೀಸರಿಗೆ ಮಾಹಿತಿಯನ್ನೂ ನೀಡದೆ ಪರಾರಿಯಾಗಿದ್ದ. ಈ ಬಗ್ಗೆ ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇನ್ಸ್ಪೆಕ್ಟರ್ ನರಸಿಂಹ ಮೂರ್ತಿ ಪಿ. ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ನ್ಯಾಯಾಲಯದಲ್ಲಿ 10 ಸಾಕ್ಷಿದಾರರು ಮತ್ತು 13 ದಾಖಲೆಗಳನ್ನು ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ಮಂಗಳೂರಿನ 2ನೇ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶ ಅಂಜಲಿ ಶರ್ಮಾ ಆರೋಪಿಯ ಅಪರಾಧ ಸಾಬೀತಾಗಿದೆ ಎಂದು ತೀರ್ಮಾನಿಸಿ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ.
304 ಎ ಸೆಕ್ಷನ್ನಡಿ 6 ತಿಂಗಳು ಸಾದಾ ಸಜೆ ಮತ್ತು 5,000 ರೂ. ದಂಡ, ದಂಡ ಪಾವತಿಸಲು ತಪ್ಪಿದಲ್ಲಿ ಹೆಚ್ಚುವರಿ 3 ತಿಂಗಳು ಸಾದಾ ಸಜೆ, ಸೆಕ್ಷನ್ 338ರಡಿ 1,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ 10 ದಿನ ಸಾದಾ ಸಜೆ, ಸೆಕ್ಷನ್ 279ರಡಿ 1,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ 10 ದಿನ ಸಾದಾ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ.
ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ಗೀತಾ ರೈ ವಾದಿಸಿದ್ದಾರೆ.