ಉಡುಪಿ, ಡಿ.01 (DaijiworldNews/SM): ತೀರ್ಥಹಳ್ಳಿಯ ಬಿಜ್ಜವಳ್ಳಿ ಸಮೀಪ ಅಕ್ರಮ ಗೋಸಾಗಾಟವನ್ನು ತಡೆಯಲೆತ್ನಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತ ರ ಮೇಲೆ ವಾಹನ ಚಲಾಯಿಸಿ ಮಾರಣಾಂತಿಕ ದುಷ್ಕೃತ್ಯ ನಡೆಸಿರುವ ಘಟನೆಗೆ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಖೇದ ವ್ಯಕ್ತಪಡಿಸಿದ್ದಾರೆ.
ಈ ಘಟನೆ ನಿಜಕ್ಕೂ ಖಂಡನೀಯ. ಗೋರಕ್ಷಣೆಯ ಕಾರ್ಯಕ್ಕೆ ಈ ರೀತಿ ಸವಾಲೆಸೆಯುವ ದುರುಳರ ವಿರುದ್ಧ ಸರ್ಕಾರ ಗಂಭೀರ ಕ್ರಮಕೈಗೊಳ್ಳಬೇಕು. ಗೋಹತ್ಯಾನಿಷೇಧ ಕಾನೂನು ಕೇವಲ ಜಾರಿಗೆ ತಂದು ಪ್ರಯೋಜನವಿಲ್ಲ . ಅದರ ಪರಿಣಾಮಕಾರಿ ಅನುಷ್ಠಾನ ಆಗಬೇಕು. ಸರ್ಕಾರಗಳು ಈ ಬಗ್ಗೆ ಪೂರ್ಣ ಇಚ್ಛಾಶಕ್ತಿ ತೋರಬೇಕು. ಇತ್ತೀಚಿನ ದಿನಗಳಲ್ಲಂತೂ ಗೋಹತ್ಯೆ , ಗೋಸಾಗಾಟಗಳು ಯಾವುದೇ ಮುಲಾಜಿಲ್ಲದೇ ನಡೆಯುತ್ತಿರುವುದು ತೀರಾ ಆತಂಕಕಾರಿಯಾಗಿದೆ.
ಗೋವಿನ ಸಂಕುಲ ಉಳಿಸಲು ಇಡೀ ಸಮಾಜ ಕಂಕಣಬದ್ಧರಾಗಲೇಬೇಕು. ಗೋವುಗಳನ್ನು ರಕ್ಷಿಸಲು ಸರ್ಕಾರ ತುರ್ತಾಗಿ ಮುಂದಾಗಬೇಕು ಎಂದು ಶ್ರೀಗಳು ಒತ್ತಾಯಿಸಿದ್ದಾರೆ. ದುರ್ಘಟನೆಯಲ್ಲಿ ಗಾಯಗೊಂಡವರ ಚಿಕಿತ್ಸಾವೆಚ್ಚವನ್ನು ಸರ್ಕಾರ ನೋಡಿಕೊಳ್ಳಬೇಕು. ಈ ಕಾರ್ಯಕರ್ತರು ಶೀಘ್ರ ಗುಣಮುಖರಾಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದು ತಿಳಿಸಿದ್ದಾರೆ .