ಕೊಣಾಜೆ, ಡಿ.01 (DaijiworldNews/PY): ಕುರ್ನಾಡಿನ ಮಿತ್ತಕೋಡಿ ಎಂಬಲ್ಲಿನ ಸೈಟ್ನಲ್ಲಿ ನಿಲ್ಲಿಸಲಾಗಿದ್ದ ಲಾರಿ, ಹಿಟಾಚಿ, ಜೆಸಿಬಿಗಳ 7 ಬ್ಯಾಟರಿಗಳನ್ನು ಕಳವುಗೈದ ಆರೋಪಿಗಳನ್ನು ಕೊಣಾಜೆ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಕಡಬ ತಾಲೂಕಿನ ಕುಂತೂರು ನಿವಾಸಿ ರಾಜೀಕ್ ಕೆ (27), ಬಂಟ್ವಾಳದ ಪಟ್ರಕೋಡಿಯ ಸಿನಾನ್ (24) ಎಂದು ಗುರುತಿಸಲಾಗಿದೆ.
ಕುರ್ನಾಡಿನ ಮಿತ್ತಕೋಡಿ ಎಂಬಲ್ಲಿರುವ ಸೈಟ್ನಲ್ಲಿ ನಿಲ್ಲಿಸಿದ್ದ ಲಾರಿ, ಹಿಟಾಚಿ, ಜೆಸಿಬಿಗಳ 7 ಬ್ಯಾಟರಿಗಳನ್ನು ಕಳವು ಗೈದಿದ್ಧಾರೆ ಎಂದು ದೂರು ನೀಡಲಾಗಿತ್ತು. ಅದರಂತೆ ಪೊಲೀಸರು ಅಪರಾಧ ಸಿಬ್ಬಂದಿಗಳ ತಂಡ ರಚಿಸಿ ಆರೋಪಿಗಳ ಪತ್ತೆ ಕಾರ್ಯ ನಡೆಸುತ್ತಿದ್ದರು.
ಡಿ.1ರಂದು ಟಾಟಾ ಎಸ್ ವಾಹನದಲ್ಲಿ ಕದ್ದ ಬ್ಯಾಟರಿಗಳನ್ನು ತೆಗೆದುಕೊಂಡು ಮಾರಾಟ ಮಾಡಲು ಬರುತ್ತಿದ್ದಾರೆ ಎನ್ನುವ ಖಚಿತ ಮಾಹಿರಿಯ ಮೇರೆಗೆ ಕೊಣಾಜೆ ಪೊಲೀಸ್ ಠಾಣೆಯ ತನಿಖಾಧಿಕಾರಿ ಮಲ್ಲಿಕಾರ್ಜುನ ಬಿರಾದಾರ ಅವರು ಸಿಬ್ಬಂದಿಗಳ ಜೊತೆಗೆ ಬಾಣೆಪುಣಿ ಗ್ರಾಮದ ಸುಟ್ಟಾಡಿ ಕ್ರಾಸ್ ಎಂಬಲ್ಲಿ ಕಾಯುತ್ತಿದ್ದ ಸಂದರ್ಭ ಮೂಳೂರು ಕಡೆಯಿಂದ ಟಾಟಾ ಎಸ್ ವಾಹನ ಬರುತ್ತಿರುವುದು ಕಂಡುಬಂದಿದ್ದು, ಈ ವೇಳೆ ವಾಹನವನ್ನು ತಡೆದು ನಿಲ್ಲಿಸಿ ತಪಾಸಣೆ ಮಾಡಿದ ಸಂದರ್ಭ ಅದರಲ್ಲಿ 10 ಬ್ಯಾಟರಿಗಳು ಇರುವುದು ಪತ್ತೆಯಾಗಿದೆ.
ಈ ಬಗ್ಗೆ ವಾಹನದಲ್ಲಿದ್ದವರನ್ನು ವಿಚಾರಸಿದ ವೇಳೆ ಕಳವು ಮಾಡಿದ ಬ್ಯಾಟರಿಗಳನ್ನು ಮಾರಾಟ ಮಾಡಲು ಕೊಂಡೊಯ್ಯುತ್ತಿರುವುದಾಗಿ ತಿಳಿಸಿದ್ದಾರೆ.
ಆರೋಪಿಗಳು ಸೇರಿದಂತೆ ವಾಹನ, ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಟಾಟಾ ಎಸ್ ವಾಹನ ಹಾಗೂ ಬ್ಯಾಟರಿಗಳ ಮೌಲ್ಯ ಒಟ್ಟು 2 ಲಕ್ಷದ 70 ಸಾವಿರ ಎಂದು ಅಂದಾಜಿಸಲಾಗಿದೆ.