Santhosh M
ಮಂಗಳೂರು, ನ. 30 (DaijiworldNews/SM): 2019ರ ಡಿಸೆಂಬರ್ 27ರಿಂದ ವಕ್ಕರಿಸಿಕೊಂಡಿರುವ ಕೊರೋನಾ ವೈರಸ್ ರೂಪಾಂತರಿಯಿಂದಾಗಿ ಜನರಲ್ಲಿ ಆರಂಭದಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಬಳಿಕದ ಕೆಲವು ನಿರ್ಧಾರಗಳು ಜನರಲ್ಲಿ ಹೊಸ ಭರವಸೆಯನ್ನುಂಟು ಮಾಡಿದೆ. ಆದರೆ, ಓಮಿಕ್ರಾನ್ ತಳಿಯ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಲಾಕ್ ಡೌನ್ ಸೇರಿದಂತೆ ಅನಗತ್ಯ ಗೊಂದಲ ಸೃಷ್ಠಿಸಲಾಗುತ್ತಿದೆ.
ಜವಾಬ್ದಾರಿ ಹೆಸರಿನಲ್ಲಿ ಸರಕಾರದ ಹಾದಿ ತಪ್ಪಿಸುತ್ತಿದೆಯಾ ಮಾಧ್ಯಮಗಳು?
ಪ್ರತಿಯೊಂದು ವಿಚಾರಗಳಾದಾಗ ಸುದ್ದಿಗಳು ಮಾಧ್ಯಮಗಳಲ್ಲಿ ವೈಭವೀಕರಣಗೊಳ್ಳುತ್ತಿವೆ. ಅದರಲ್ಲೂ ಕೊರೋನಾ ವಿಚಾರ ಆರಂಭದಿಂದಲೂ ಜನರಲ್ಲಿ ಭೀತಿಯನ್ನುಂಟು ಮಾಡುವ ರೀತಿಯಲ್ಲೇ ಪ್ರಸಾರವಾಗುತ್ತಿದೆ. ಮಾಧ್ಯಮದ ಕಾರಣದಿಂದಲೇ ಸರಕಾರ ಕೆಲವು ಸಂದರ್ಭಗಳಲ್ಲಿ ತಪ್ಪು ನಿರ್ಧಾರ ಕೈಗೊಳ್ಳುತ್ತದೆಯೇ ಎನ್ನುವ ಪ್ರಶ್ನೆ ಕಾಡುತ್ತದೆ. ಎರಡನೇ ಅಲೆ ಸಂದರ್ಭದಲ್ಲಿ ಲಾಕ್ ಡೌನ್ ಮಾಡುವ ನಿರ್ಧಾರ ಕೈಗೊಳ್ಳಲು ಮಾಧ್ಯಮದಲ್ಲಿ ಪ್ರಸಾರವಾಗುತ್ತಿದ್ದ ಸುದ್ದಿಯೂ ಕೂಡ ಪ್ರಮುಖ ಪಾತ್ರವಹಿಸಿತ್ತು.
ಪ್ರಸ್ತುತ ಓಮಿಕ್ರಾನ್ ತಳಿ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಪತ್ತೆಯಾಗಿದೆ. ದೇಶದಲ್ಲಿ ಈ ರೂಪಾಂತರಿ ತಡೆಗೆ ಸರಕಾರ ಕ್ರಮಕೈಗೊಳ್ಳುತ್ತಿದೆ. ಸರಕಾರ ಕೈಗೊಳ್ಳುವ ಎಲ್ಲಾ ನಿರ್ಧಾರಗಳು ಸರಿ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಈ ನಡುವೆ, ಕೆಲವು ಮಾಧ್ಯಮಗಳು ಅನಗತ್ಯ ಸುದ್ದಿ ವೈಭವೀಕರಣಗೊಳಿಸುವ ಮೂಲಕ ಜನರಲ್ಲಿ ಆತಂಕವನ್ನು ಸೃಷ್ಠಿಸುವ ಜೊತೆಗೆ ಸರಕಾರವನ್ನು ಕೂಡ ಅಡಕತ್ತರಿಗೆ ಸಿಲುಕಿಸುತ್ತಿದೆ. ಈ ಬಾರಿಯೂ ಲಾಕ್ ಡೌನ್ ಮಾಡಬೇಕು ಎನ್ನುವ ಮಟ್ಟಕ್ಕೆ ಮಾಧ್ಯಮಗಳು ಸುದ್ದಿ ಬಿತ್ತರಿಸುತ್ತಿವೆ. ಮತ್ತೊಂದೆಡೆ ದಿನವಿಡಿ ಇದೇ ಆತಂಕದ ವಿಚಾರಗಳಿಂದಾಗಿ ಜನರೂ ಕೂಡ ರೋಸಿ ಹೋಗಿದ್ದಾರೆ.
ಲಾಕ್ ಡೌನ್ ಇಲ್ಲ-ಸಿಎಂ ಘೋಷಣೆ:
ಈ ನಡುವೆ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಲಾಕ್ ಡೌನ್ ಜಾರಿಗೊಳಿಸುವ ಚಿಂತನೆ ಸರಕಾರದ ಮುಂದೆ ಇಲ್ಲ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಈಗಾಗಲೇ ಘೋಷಣೆ ಮಾಡಿದ್ದಾರೆ. ಇದರಿಂದಾಗಿ ಸರಕಾರ ತನ್ನ ನಿರ್ಧಾರದಲ್ಲಿ ಪಕ್ವವಾಗಿದೆ ಎನ್ನುವುದನ್ನು ಸಿಎಂ ಸ್ಪಷ್ಟಪಡಿಸಿದ್ದಾರೆ. ಸರಕಾರ ಈ ನಿರ್ಧಾರದಲ್ಲೇ ಮುಂದುವರೆಯಬೇಕಾಗಿದೆ. ಯಾವುದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಒತ್ತಡಕ್ಕೆ ಮಣಿಯದೆ ತನ್ನ ಗಟ್ಟಿ ನಿರ್ಧಾರವನ್ನೇ ಮುಂದುವರಿಸಬೇಕು.
ಲಾಕ್ ಡೌನ್ ಯಾರಿಗೆ ಸಂಕಷ್ಟ?
ಒಂದೊಮ್ಮೆ ರೂಪಾಂತರಿ ತಳಿಯ ನಿಯಂತ್ರಣಕ್ಕಾಗಿ ಸರಕಾರ ಒತ್ತಡದಲ್ಲಿ ಲಾಕ್ ಡೌನ್ ಏನಾದರೂ ಘೋಷಣೆ ಮಾಡಿದ್ದಲ್ಲಿ, ಜನಸಾಮಾನ್ಯರೇ ಹೆಚ್ಚು ಸಂಕಷ್ಟಕ್ಕೀಡಗಲಿದ್ದಾರೆ. ದುಡಿಯುವ ವರ್ಗಕ್ಕೆ ಹೆಚ್ಚಿನ ಹೊರೆಯಾಗಲಿದೆ. ಕಾರ್ಮಿಕ ಉದ್ಯೋಗ ನಷ್ಟ ಅನುಭವಿಸುತ್ತಾನೆ. ಹಾಗೂ ಸಂಪಾದನೆ ಇಲ್ಲದೆ ಹೊಟ್ಟೆ ತುಂಬಿಸಿಕೊಳ್ಳಲು ಪರದಾಡುವ ಸನ್ನಿವೇಶ ಎದುರಾಗಬಹುದು. ಈ ನಡುವೆ ಉದ್ಯಮಿಗಳು, ಸಣ್ಣ ವ್ಯಾಪಾರಿಗಳು, ವ್ಯವಹಾರ ನಡೆಸುವವರಿಗೂ ಗಾಯದ ಮೇಲೆ ಬರೆ ಎಳೆದ ಅನುಭವ ಖಂಡಿತ. ಇನ್ನು ಈಗಾಗಲೇ 2ನೇ ಅಲೆಯ ಲಾಕ್ ಡೌನ್ ನಿಂದ ಜನತೆ ಚೇತರಿಸಿಕೊಂಡು ಸಹಜ ಸ್ಥಿತಿಯತ್ತ ಜನರು ಮುನ್ನುಗ್ಗುತ್ತಿದ್ದಾರೆ. ಅಲ್ಪಸ್ವಲ್ಪ ಸಂಪಾದನೆ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮತ್ತೆ ಲಾಕ್ ಡೌನ್ ಎಂಬ ತಪ್ಪು ನಿರ್ಧಾರವನ್ನು ಕೈಗೊಂಡಲ್ಲಿ ಪರದಾಡುವವರು ಮಾತ್ರ ಜನಸಾಮಾನ್ಯರು.
ಕೊರೋನಾ ಸೋಂಕು ನಮ್ಮಿಂದ ನಿಯಂತ್ರಿಸಲು ಸಾಧ್ಯವೇ ಅನ್ನೋದು ಭವಿಷ್ಯದ ಪ್ರಶ್ನೆಯಾಗಿದ್ದು, ಸೋಂಕು ನಿಭಾಯಿಸಿ ಅದರ ವಿರುದ್ಧದ ಎಚ್ಚರಿಕೆಯ ಹೋರಾಟದೊಂದಿಗೆ ಮುನ್ನಡೆಯುವುದು ಸದ್ಯ ಇರುವ ದಾರಿಯಾಗಿದೆ. ಈ ಬಾರಿ ವಕ್ಕರಿಸಿಕೊಂಡಿರುವ ತಳಿಗೆ ಲಸಿಕೆ ಅಗತ್ಯವಿಲ್ಲ ಎನ್ನುವ ಮಾತುಗಳಿವೆ. ಆದರೆ, ಇದು ಎಷ್ಟರ ಮಟ್ಟಿಗೆ ಪರಿಣಾಮಕಾರಿ ಹಾಗೂ ಅಪಾಯಕಾರಿ ಎಂಬುವುದು ದೃಢಪಡಿಸುವುದು ಕ್ಲೀಷ್ಟಕರ ಸಂಗತಿ.
ನಿಯಂತ್ರಣ ಕ್ರಮಗಳು ಅಗತ್ಯ:
ಇನ್ನು ದೇಶದೆಲ್ಲೆಡೆ ಸರಕಾರ ಅಗತ್ಯ ಮುನ್ನೆಚ್ಚರಿಕಾ ಕ್ರಮಕೈಗೊಳ್ಳುವ ಅಗತ್ಯವಿದೆ. ಆದರೆ, ಯಾವುದೇ ಕಾರಣಕ್ಕೂ ಜನರ ನಿತ್ಯ ಜೀವನ ಹಾಗೂ ಉದ್ಯೋಗಕ್ಕೆ ಯಾವುದೇ ತೊಂದರೆಯನ್ನು ನೀಡುವ ಕಾರ್ಯವನ್ನು ಕೈಗೊಳ್ಳದೆ, ಸೂಕ್ತ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ಸೋಂಕು ಅದೇ ಆಗಿದ್ದರೂ, ಬೇರೆ ಬೇರೆ ರೂಪಾಂತರವನ್ನು ಪಡೆದುಕೊಳ್ಳುತ್ತದೆ ಎನ್ನುವುದು ಸಂಶೋಧನೆಯಿಂದ ದೃಢಪಟ್ಟಿದೆ. ಈ ಕಾರಣದಿಂದಾಗಿ ಹೆಚ್ಚಿನ ಆತಂಕದ ಅಗತ್ಯವಿಲ್ಲ. ಸದ್ಯ ಬೇಕಾಗಿರುವುದು ಎಚ್ಚರಿಕಾ ಕ್ರಮ ಮಾತ್ರ. ಹೆಚ್ಚು ಜನ ಸೇರುವ ಕಾರ್ಯಗಳ ಮೇಲೆ ಸರಕಾರ ನಿಯಂತ್ರಣ ಹೆರಬಹುದು. ಆದರೆ, ಸಂಪೂರ್ಣವಾಗಿ ನಿಷೇಧ ಹೇರವುದು ಸೂಕ್ತ ನಿರ್ಧಾರವಲ್ಲ. ಗಡಿ ಭಾಗಗಳಲ್ಲೂ ಅನಗತ್ಯ ಗೊಂದಲವನ್ನುಂಟು ಮಾಡುವುದನ್ನು ಸರಕಾರ ನಿಲ್ಲಿಸಬೇಕು.
ವಿದೇಶದಿಂದ ಬರುವವರಿಗೆ ಈಗಾಗಲೇ ಹೋಂ ಕ್ವಾರಂಟೈನ್ ಹಾಗೂ ಆರ್ ಟಿಪಿಸಿಆರ್ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ. ಇದನ್ನು ಸದ್ಯದ ಸಂದರ್ಭದಲ್ಲಿ ಮುಂದುವರೆಸುವುದು ಆಶಾದಾಯಕ ಬೆಳವಣಿಗೆ. ಇದು ದೇಶದೆಲ್ಲೆಡೆ ಜಾರಿಯಾಗಬೇಕಿದ್ದು, ಇದರಿಂದ ನಮ್ಮಲ್ಲಿ ಪತ್ತೆಯಾಗುವ ಪ್ರಕರಣಗಳನ್ನು ನಿಯಂತ್ರಿಸಬಹುದು.
ಪ್ರತಿಯೊಂದು ಸಂದರ್ಭಗಳಲ್ಲೂ ಸರಕಾರ ಕೈಗೊಳ್ಳುವ ನಿರ್ಧಾರಗಳು ಮುಖ್ಯವಾಗಿವೆ. ಸರಕಾರ ಕೈಗೊಳ್ಳುವ ನಿರ್ಧಾರದಲ್ಲಿ ಎಡವಿದ್ದಲ್ಲಿ ಮುಗ್ದ ಪರಿಶ್ರಮಿ ಜನರ ಮೇಲೆ ನೇರ ಪರಿಣಾಮ ಬೀರಲಿದೆ. ಮತ್ತೊಂದೆಡೆ ಅನವಶ್ಯಕ ಸುದ್ದಿಗಳನ್ನು ಪ್ರಸಾರ ಮಾಡಿ ಜನರಲ್ಲಿ ಆತಂಕವನ್ನುಂಟು ಮಾಡುವ ಕೆಲವು ಕಾರ್ಯಕ್ರಮಗಳ ಮೇಲೆ ಕೂಡ ನಿಯಂತ್ರಣ ಅಗತ್ಯವಿದೆ.