ಕಾರ್ಕಳ, ನ 30 (DaijiworldNews/MS): ಜಾರ್ಕಳ ಬಳಿಯಿರುವ ಕರಿಕಲ್ಲಿನ ಕ್ವಾರೇಯಲ್ಲಿ ಸ್ಫೋಟ ಸಂಭವಿಸಿದ ಪರಿಣಾಮವಾಗಿ ಕಾರ್ಮಿಕರಿಬ್ಬರು ಗಾಯಗೊಂಡು ನಗರದ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದಾರೆ.
ತಮಿಳುನಾಡು ಮೂಲದ ಸಹೋದರರಾದ ಮಂಜುನಾಥ (44), ರಾಘವೇಂದ್ರ(40) ಗಾಯಾಳುಗಳು.
ಮಂಗಳವಾರ ಬೆಳಿಗ್ಗೆ 11.10 ರ ವೇಳೆಗೆ ಈ ಘಟನೆ ಸಂಭವಿಸಿದೆ. ಕ್ವಾರೆಯ ಕಾಮಗಾರಿಯಲ್ಲಿ ನಡೆಯುತ್ತಿರುವ ಸ್ಫೋಟದ ಬಳಕೆಗೆ ಸೋಟಕಗಳನ್ನು ಬಳಸಲಾಗುತ್ತಿದ್ದು, ರಾಸಾಯನಿಕ ವಸ್ತುಗಳ ಬಳಕೆಯ ಸಂದರ್ಭದಲ್ಲಿ ಮುನ್ನೆಚ್ಚರಿಕೆ ವಹಿಸದೇ ಹೋಗಿರುವುದರಿಂದ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಅದೇ ವೇಳೆಗೆ ಸೋಟಕ ಸಂಭವಿಸಿದ್ದು ಇಬ್ಬರು ಗಾಯಕರಿಗೆ ಗಾಯವಾಗಿದೆ. ಸ್ಫೋಟದ ಸದ್ದು ಕೇಳಿ ಘಟನಾ ಸ್ಥಳಕ್ಕೆ ದಾರಿಹೋಕರು ದೌಡಾಯಿಸಿದ್ದು, ಗಾಯಾಳುಯಗಳನ್ನು ಆಸ್ಪತ್ರೆಗೆ ದಾಖಲಿಸಲು ನೆರವಾಗಿದ್ದಾರೆ. ಗಾಯಾಳುಗಳಿಬ್ಬರು ನಡೆದಾಡುವ ಪರಿಸ್ಥಿತಿಯಲ್ಲಿಲ್ಲದೇ ಅವರನ್ನು ಹೆಗಲಮೇಲೆ ಹೊತ್ತು ಪ್ರಮುಖ ರಸ್ತೆಯತ್ತ ಸಾಗಿದರು.
ಆಸ್ಪತ್ರೆ ಪರಿಸರದಲ್ಲಿ ಜನಸ್ತೋಮ
ಗಾಯಾಳುಗಳು ನಗರದ ಸ್ಪಂದನಾ ಆಸ್ಪತ್ರತೆಯಲ್ಲಿ ದಾಖಲಾಗಿರುವುದರಿಂದ ಆಸ್ಪತ್ರೆಯ ಪರಿಸರದಲ್ಲಿ ಭಾರೀ ಜನಸ್ತೋಮ ನೆರೆದಿರುವುದು ಕಂಡುಬಂದಿದೆ. ಗಾಯಾಳುಗಳ ಸಂಬಂಧಿಕರಿಗಿಂತ ಕ್ವಾರೆಯನ್ನು ನಡೆಸುತ್ತಿರುವ ವ್ಯಕ್ತಿಗಳ ಪರಿಚಯಸ್ಥರೇ ಅಧಿಕ ಸಂಖ್ಯೆಯಲ್ಲಿ ಇದ್ದರು. ರಾಜಕೀಯ ಮುಖಂಡರು, ಜನಪ್ರತಿನಿಧಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ.
ಗಾಯಾಳುಗಳು ವಿಶೇಷ ಚೇತನರು?!
ಘಟನೆಯಲ್ಲಿ ಗಾಯಗೊಂಡಿರುವ ಮಂಜುನಾಥ ಹಾಗೂ ರಾಘವೇಂದ್ರ ಇವರಿಬ್ಬರು ಸಹೋದರರಾಗಿದ್ದು, ರಾಘವೇಂದ್ರ ಚಿಕ್ಕಮಗಳೂರಿನ ಕಡೂರಿನ ಕ್ವಾರೇಯಲ್ಲಿ ದುಡಿಯುತ್ತಿದ್ದವನು ಕಳೆದ ಕೆಲ ತಿಂಗಳ ಹಿಂದೆಯಷ್ಟೇ ಕಾರ್ಕಳಕ್ಕೆ ಬಂದು ಸಹೋದರನೊಂದಿಗೆ ಜಾರ್ಕಳ ಕ್ವಾರೆಯಲ್ಲಿ ದುಡಿಯುತ್ತಿದ್ದರು.
ಘಟನೆಯ ಕುರಿತು ಗಾಯಾಳುಗಳು ಮಾಹಿತಿ ನೀಡುತ್ತಿದ್ದರೂ, ಅದನ್ನು ಆಲಿಸುವಲ್ಲಿ ವೈದ್ಯರು ಅಥವಾ ಸಂಬಂಧಿತ ಇಲಾಖಾಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ. ಅವರಿಬ್ಬರು ಮೂಕರು, ಕಿವುಡರು ಎಂಬ ಹೇಳಿಕೆಯನ್ನು ಸಂಬಂಧ ಪಟ್ಟವರು ಮಾಧ್ಯಮಕ್ಕೆ ಮಾಹಿತಿ ನೀಡುತ್ತಿದ್ದಾರೆ. ವಿಕಲ ಚೇತನರನ್ನು ಕ್ವಾರೆಯಲ್ಲಿ ಕಾರ್ಮಿಕರಾಗಿ ದುಡಿಸುತ್ತಿದ್ದಾರೆ ಎಂಬುವುಕ್ಕೆ ಈ ಘಟನೆ ತಾಜಾ ನಿದರ್ಶನವಾಗಿದೆ. ನಗರ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಅಗತ್ಯ ಮಾಹಿತಿಗಳನ್ನು ಕಲೆ ಹಾಕಿದ್ದಾರೆ.