ಪುತ್ತೂರು, ನ. 30 (DaijiworldNews/HR): ಉಪ್ಪಿನಂಗಡಿ ಸಮೀಪದ ರಾಷ್ಟ್ರೀಯ ಹೆದ್ದಾರಿ 75ರ ಮಠ ಎಂಬಲ್ಲಿ ಆಟೋ ರಿಕ್ಷಾಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಆಟೋ ರಿಕ್ಷಾದಲ್ಲಿದ್ದ ಬಾಲಕನೋರ್ವ ಸಾವನ್ನಪ್ಪಿ, ರಿಕ್ಷಾ ಚಾಲಕ ಸಹಿತ ಮೂವರು ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.
ಮೃತಪಟ್ಟ ಬಾಲಕನನ್ನು ಹಿರ್ತಡ್ಕ ಸರಕಾರಿ ಪ್ರಾಥಮಿಕ ಶಾಲೆಯ ಆರನೇ ತರಗತಿ ವಿದ್ಯಾರ್ಥಿ ಟಿ ಮೊಹಮ್ಮದ್ ಅಲ್ತಾಫ್ (12) ಎಂದು ಗುರುತಿಸಲಾಗಿದೆ.
ಇನ್ನು ರಿಕ್ಷಾದಲ್ಲಿದ್ದ ಬಾಲಕನ ತಾಯಿ ಖತೀಜಮ್ಮ (46) ಅಣ್ಣ ಆಶಿಕ್ ಅಲಿಯಾಸ್ ಟಿ. ಮೊಹಮ್ಮದ್ ಅಸ್ರಾರ್ (23) ಮತ್ತು ಆಟೋ ರಿಕ್ಷಾ ಚಾಲಕ ಹಿರ್ತಡ್ಕ ನಿವಾಸಿ ಸಿದ್ದಿಕ್ (34) ಗಂಭೀರವಾಗಿ ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖ ಲಿಸಲಾಗಿದ್ದು, ಖತಿಜಮ್ಮ ಹಾಗೂ ಆಶಿಕ್ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.
ಮೃತ ಬಾಲಕ ಅಲ್ತಾಫ್ ಅವರ ತಾಯಿ ಖತೀಜಮ್ಮ ಮಂಗಳೂರಿನ ಬೆಂಗರೆ ನಿವಾಸಿಯಾಗಿದ್ದು, ತನ್ನ ಮಕ್ಕಳೊಂದಿಗೆ ತವರು ಮನೆಗೆ ಹೋಗಿದ್ದವರು ಬಸ್ಸಿನಲ್ಲಿ ಬಂದು ಉಪ್ಪಿನಂಗಡಿಯಲ್ಲಿ ಬಸ್ನಿಂದ ಇಳಿದು ಆಟೋರಿಕ್ಷಾದಲ್ಲಿ ಮನೆಗೆ ಹೋಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಇನ್ನು ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಬರುತ್ತಿದ್ದ ಲಾರಿ ಇನ್ನೊಂದು ವಾಹನವನ್ನು ಹಿಂದಿಕ್ಕುವ ಯತ್ನದಲ್ಲಿ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದ್ದು, ಆಟೋ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದೆ.
ಘಟನ ಸ್ಥಳಕ್ಕೆ ಪುತ್ತೂರು ಡಿವೈಎಸ್ಪಿ ಗಾನಾ ಪಿ. ಕುಮಾರ್, ಸಂಚಾರಿ ಸಬ್ ಇನ್ಸ್ಪೆಕ್ಟರ್ ರಾಮ ನಾಯ್ಕ ಮತ್ತು ಸಿಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.