ಉಡುಪಿ, ನ.29 (DaijiworldNews/PY): "ವಿಶ್ವದಾದ್ಯಂತ ಕೊರೊನಾ ರೂಪಾಂತರಿ ವೈರಸ್ ಬಗ್ಗೆ ಭಯ ಇದೆ. ಯಾವುದೇ ಕಾರಣಕ್ಕೂ ಲಾಕ್ಡೌನ್ ಆಗುವುದಿಲ್ಲ. ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು" ಎಂದು ಉಡುಪಿ ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೊರೊನಾ ಎರಡು ಅಲೆಗಳಿಂದ ನಾವು ಸಾಕಷ್ಟು ಸಂಕಷ್ಟಗಳನ್ನು ಅನುಭವಿಸಿದ್ದೇವೆ. ಕೊರೊನಾ ನಿಬಂಧನೆಗಳನ್ನು ಪಾಲಿಸುವುದೇ ಇದಕ್ಕಿರುವ ಮದ್ದು. ತಕ್ಷಣ ವ್ಯಾಕ್ಸಿನೇಷನ್ ಪಡೆದುಕೊಳ್ಳಿ. ದೊಡ್ಡ ದೊಡ್ಡ ಕಾರ್ಯಕ್ರಮಗಳನ್ನು ಮಾಡಬೇಡಿ" ಎಂದು ಮನವಿ ಮಾಡಿದ್ದಾರೆ.
"ಕೊರೊನಾ ಅತಿರೇಕಕ್ಕೆ ಹೋಗುವ ಮುನ್ನ ಜಾಗ್ರತೆ ಮಾಡಿಕೊಳ್ಳಿ. ಯಾವುದೇ ಕಾರಣಕ್ಕೂ ಲಾಕ್ಡೌನ್ ಆಗುವುದಿಲ್ಲ. ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಆರೋಗ್ಯ ಸಚಿವರು ಕೂಡಾ ಇದನ್ನೇ ಸ್ಪಷ್ಟಪಡಿಸಿದ್ದಾರೆ" ಎಂದಿದ್ದಾರೆ.
ಲಾಕ್ಡೌನ್ ಬಗ್ಗೆ ಹರಿದಾಡುತ್ತಿರುವ ವದಂತಿಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಕೆಲವೊಂದು ಅಪಪ್ರಚಾರಗಳು ಕೂಡಾ ಆಗುತ್ತಿವೆ. ಈ ಹಂತದಲ್ಲಿ ಅಂತಹ ಯಾವುದೇ ಚರ್ಚೆಗಳು ಇಲ್ಲ. ವ್ಯಾಕ್ಸಿನೇಷನ್ನಲ್ಲಿ ನಾವು ಶೇ.90ರಷ್ಟು ಪ್ರಗತಿ ಸಾಧಿಸಿದ್ಧೇವೆ. ಹಾಗಾಗಿ ಯಾವ ವೈರಸ್ ಬಂದರೂ ಅದನ್ನು ಎದುರಿಸುವ ಶಕ್ತಿ ನಮಗಿದೆ" ಎಂದು ತಿಳಿಸಿದ್ದಾರೆ.