ಮಂಗಳೂರು, ನ 29 (DaijiworldNews/MS): : ಕೋವಿಡ್ -19 ಹೊಸ ರೂಪಾಂತರ ತಳಿಯನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ಕ್ರಮಗಳ ಬಗ್ಗೆ ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರ ಮುಂದಾಗಬೇಕು ಎಂದು ಶಾಸಕ ಯು ಟಿ ಖಾದರ್ ಒತ್ತಾಯಿಸಿದರು.
ನ.29 ರಂದು ಸೋಮವಾರ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಶಾಸಕ ಖಾದರ್, ವೈರಸ್ ಹರಡುವುದನ್ನು ಯಾರಿಗೂ ನಿಲ್ಲಿಸಲು ಸಾಧ್ಯವಿಲ್ಲ. ಆದರೆ ಹೊಸ ಕೋವಿಡ್-19 ರೂಪಾಂತರ ತಳಿಯ ಬಗ್ಗೆ ಗಾಬರಿಯಾಗದೆ ಅದನ್ನು ನಿಭಾಯಿಸಲು ಮತ್ತು ಪರಿಣಾಮಕಾರಿಯಾಗಿ ನಿರ್ವಹಿಸಲು ಸರ್ಕಾರ ಮತ್ತು ಜಿಲ್ಲಾಡಳಿತ ಸಿದ್ಧರಾಗಿರಬೇಕು. ’ಶಾಲೆಗಳನ್ನು ಮುಚ್ಚುವ ಮತ್ತು ಲಾಕ್ಡೌನ್ ಹೇರುವ ಬಗ್ಗೆ ಗೊಂದಲ ಸೃಷ್ಟಿಸುವ ಬದಲು, ತ್ವರಿತ ಲಸಿಕೆ ಅಭಿಯಾನಕ್ಕೆ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಶೇ.90ರಷ್ಟು ಮೊದಲ ಡೋಸ್ ಹಾಗೂ ಶೇ.60ರಷ್ಟು ಮಂದಿ ಎರಡನೇ ಡೋಸ್ ತೆಗೆದುಕೊಂಡಿದ್ದು, ಜಿಲ್ಲೆಯಲ್ಲಿ ಶೇ.100ರಷ್ಟು ಲಸಿಕೆ ಹಾಕುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕಿದೆ ಎಂದರು. ಮಕ್ಕಳಿಗೂ ಲಸಿಕೆ ಹಾಕಲು ಕ್ರಮ ಕೈಗೊಳ್ಳಬೇಕಿದೆ ಎಂದು ಒತ್ತಾಯಿಸಿದರು.
ಮುಂಚೂಣಿಯಲ್ಲಿರುವ ಕಾರ್ಯಕರ್ತರಿಗೆ ಸರ್ಕಾರ ಮೂರನೇ ಡೋಸ್ ನೀಡಲು ಪ್ರಾರಂಭಿಸಬೇಕು. ನರ್ಸ್ಗಳು, ಲ್ಯಾಬ್ ಟೆಕ್ನಿಷಿಯನ್ಗಳಂತಹ ಮಾನವಶಕ್ತಿಯನ್ನು ಹೆಚ್ಚಿಸುವ ಕೆಲಸ ಮಾಡಬೇಕಾಗಿದ್ದು , ಮುಂಚೂಣಿ ಕೆಲಸಗಾರರನ್ನು ಮುಂದೊದಗಬಹುದಾದ ಸವಾಲುಗಳಿಗೆ ಸಿದ್ಧಗೊಳಿಸಬೇಕು. ಇನ್ನುಕೋವಿಡ್ ಸಂಬಂಧಿತ ಡಾಟಾ ಸಂಗ್ರಹಿಸಲು ತಮ್ಮ ಕೆಲಸವನ್ನು ಇನ್ನಷ್ಟು ಸುಲಭಗೊಳಿಸಲು ಆರೋಗ್ಯ ಕಾರ್ಯಕರ್ತರಿಗೆ ಟ್ಯಾಬ್ ನೀಡಬೇಕು ಎಂದು ಸಲಹೆ ನೀಡಿದರು.
ಕೋವಿಡ್ ಲಸಿಕೆ ಎಲ್ಲರನ್ನು ತಲುಪಲು ಸರಕಾರ ಮತ್ತು ಜಿಲ್ಲಾಡಳಿತ ಗಮನಹರಿಸಬೇಕು. ಹೊಸ ರೂಪಾಂತರವನ್ನು ನಿಭಾಯಿಸಲು ಯೋಜನೆಗಳನ್ನು ರೂಪಿಸಲು ಜಿಲ್ಲಾಡಳಿತದಿಂದ ಸಭೆ ಕರೆಯಬೇಕಾಗಿದೆ ಎಂದು ಖಾದರ್ ಹೇಳಿದರು.