ಮಂಗಳೂರು, ನ. 28 (DaijiworldNews/SM): ಕೋವಿಡ್ ನ ಹೊಸ ರೂಪಾಂತರಿ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯ ಗಡಿಗಳಲ್ಲಿ ಕಟ್ಟುನಿಟ್ಟಿನ ನಿಯಂತ್ರಣ ವಿಧಿಸಲಾಗಿದೆ. ಆರ್ ಟಿಪಿಸಿಆರ್ ವರದಿ ಹೊಂದಿರುವುದು ಕಡ್ಡಾಯಗೊಳಿಸಲಾಗಿದೆ. ಈ ನಡುವೆ ಇತ್ತೀಚಿಗಷ್ಟೇ ಆರಂಭಗೊಂಡಿರುವ ಕಾಸರಗೊಡು-ಮಂಗಳೂರು ಬಸ್ ಸಂಚಾರ ಮುಂದುವರೆಸಲಾಗುವುದೆಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಕೇರಳ-ಕರ್ನಾಟಕ ಬಸ್ ಸಂಚಾರದಲ್ಲಿ ಸದ್ಯ ಯಾವುದೇ ಬದಲಾವಣೆ ಇಲ್ಲ. ಕೇರಳ-ಕರ್ನಾಟಕ ನಡುವೆ ಬಸ್ ಸಂಚಾರ ಮುಂದುವರೆಯಲಿದೆ. ಆದರೆ, ಪ್ರಯಾಣದ ಸಂದರ್ಭದಲ್ಲಿ ಆರ್ ಟಿಪಿಸಿಆರ್ ಕಡ್ಡಾಯಗೊಳಿಸಲಾಗಿದೆ. ಬಸ್ ಹತ್ತುವ ಸಂದರ್ಭದಲ್ಲೇ ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ. ಈ ಬಗ್ಗೆ ಇಲಾಖೆಯಿಂದಲೂ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.