ಕುಂದಾಪುರ, ನ.28 (DaijiworldNews/PY): ಕ್ಲೀನ್ ಕುಂದಾಪುರ ಪ್ರಾಜೆಕ್ಟ್, ಜಿಲ್ಲಾ ಪಂಚಾಯತ್ ಉಡುಪಿ, ಕರಾವಳಿ ಕಾವಲು ಪೊಲೀಸ್ ಠಾಣೆ ಗಂಗೊಳ್ಳಿ, ಗ್ರಾಮ ಪಂಚಾಯತ್ ಕೋಟೇಶ್ವರ, ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರಾ, ರಾಷ್ಟ್ರ ಸೇವಿಕಾ ಸಮಿತಿ ಉಡುಪಿ ಜಿಲ್ಲೆ ಇವರ ವತಿಯಿಂದ 'ಕಡಲತೀರ ಸ್ವಚ್ಚತಾ ಅಭಿಯಾನ'ವು ಕೋಟೇಶ್ವರ ಹಳೆಅಳಿವೆ ಬೀಚ್ ಸಮೀಪದ ಕೊಕರಿಸ್ ರೆಸಾರ್ಟ್ ಬಳಿಯಲ್ಲಿ ಭಾನುವಾರ ಬೆಳಿಗ್ಗೆ ನಡೆಯಿತು.
ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ಆಯೋಜನೆಯ 111ನೇ ವಾರದ ಬೀಚ್ ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ನವೀನ್ ಭಟ್ ಮಾತನಾಡಿ, "ಕೋಟೇಶ್ವರ ಗ್ರಾ.ಪಂ ಹಾಗೂ ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ಹಾಗೂ ವಿವಿಧ ಸಂಘಟನೆ ಒಗ್ಗೂಡುವಿಕೆಯಲ್ಲಿ 'ನಮ್ಮ ಕಸ ನಮ್ಮ ಜವಬ್ದಾರಿ' ಎನ್ನುವ ಧ್ಯೇಯದೊಂದಿಗೆ ಸಮುದ್ರ ತೀರ ಸ್ವಚ್ಚತಾ ಕಾರ್ಯಕ್ರಮ ಮಾಡುತ್ತಿದ್ದು ಪ್ರತಿಯೊಬ್ಬರು ಕಸವನ್ನು ಅವರೇ ನಿರ್ವಹಿಸಬೇಕು. ನದಿ ಮೂಲ ಅಥವಾ ಕಡಲನ್ನು ಕಸ ಸೇರಬಾರದು. ಬದಲಾಗಿ ಸಂಬಂದಪಟ್ಟ ಎಸ್.ಎಲ್.ಆರ್.ಎಂ ಘಟಕಕ್ಕೆ ನೀಡುವ ಜವಾಬ್ದಾರಿ ಬೆಳೆಸಿಕೊಳ್ಳಬೇಕು" ಎಂದರು.
"ಮುಂದಿನ ದಿನಗಳಲ್ಲಿ ಗ್ರಾ.ಪಂ ವತಿಯಿಂದ ಪ್ರತಿವಾರವೂ ಇಂತಹ ಸ್ಚಚ್ಚತಾ ಅಭಿಯಾನ ಹಮ್ಮಿಕೊಳ್ಳುವ ಚಿಂತನೆಯಿದೆ. ಡಿ.2ರಂದು ರಾಷ್ತ್ರೀಯ ಮಾಲಿನ್ಯ ನಿಯಂತ್ರಣ ದಿನಾಚರಣೆಯಿದ್ದು ಅದಕ್ಕಾಗಿ ಸ್ವಚ್ಚತಾ ಸಪ್ತಾಹ ಕಾರ್ಯಕ್ರಮ ನಡೆಯಲಿದ್ದು ಅದರ ಹಿನ್ನೆಲೆ ಇಲ್ಲಿ ಚಾಲನೆ ನೀಡಲಾಗಿದೆ" ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೋಟೇಶ್ವರ ಗ್ರಾಮಪಂಚಾಯತ್ ಸದಸ್ಯರಾದ ಲೋಕೇಶ್ ಅಂಕದಕಟ್ಟೆ, ನಾಗರಾಜ ಎಂ ಕಾಂಚನ್, ಜಾನಕಿ ಬಿಲ್ಲವ, ಲೋಲಾಕ್ಷಿ, ರೇವತಿ, ರಾಜು ಪೂಜಾರಿ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ತೇಜಪ್ಪ ಕುಲಾಲ್, ಎಸ್.ಎಲ್.ಆರ್.ಎಮ್ ಘಟಕದ ಅನ್ನಪೂರ್ಣ ಕೊಡ್ಲಾಯ, ಶಶಿಕಲಾ, ಸಿಬ್ಬಂದಿಗಳಾದ ಪ್ರಸನ್ನ, ಅನುಷಾ, ಗೋಪಾಲ, ಕ್ಲೀನ್ ಕುಂದಾಪುರ ಪ್ರಾಜೆಕ್ಟ್ನ ಸಂಚಾಲಕ ಭರತ್ ಬಂಗೇರ, ಡಾ. ರಶ್ಮೀ, ಆಶಾ ಶೆಟ್ಟಿ, ಅನುದೀಪ್ ಹೆಗ್ಡೆ, ಚಂದ್ರಕಾಂತ ಶೆಣೈ, ಶಿವರಾಮ ಶೆಟ್ಟಿ, ಅರುಣ್, ಪುಂಡಲೀಕ ಬಂಗೇರ, ಶಶಿಧರ, ಸಮಾಜ ಸೇವಕ ಗಣೇಶ ಪುತ್ರನ್, ರಾಷ್ಟ್ರ ಸೇವಿಕಾ ಸಮಿತಿ ಉಡುಪಿ ಜಿಲ್ಲಾ ಕಾರ್ಯವಾಹಿಕ ಪ್ರೇಮಾ ಪಡಿಯಾರ್, ಜಿಲ್ಲಾ ಸಂಪರ್ಕ ಪ್ರಮುಖ್ ಕಲ್ಪನಾ ಭಾಸ್ಕರ್, ಸದಸ್ಯರು, ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರಾದ ಅಧ್ಯಕ್ಷೆ ಸರಸ್ವತಿ ಜಿ. ಪುತ್ರನ್ ಹಾಗೂ ಸದಸ್ಯರು, ಕರಾವಳಿ ಕಾವಲು ಪಡೆ ಸಿಬ್ಬಂದಿಗಳು ಮೊದಲಾದವರಿದ್ದರು.