ಮಂಗಳೂರು, ನ.28 (DaijiworldNews/PY): ಅತಿ ವೇಗವಾಗಿ ಸ್ಕೂಟರ್ ಚಲಾಯಿಸಿಕೊಂಡು ಹೋಗುತ್ತಿದ್ದ ಸಂದರ್ಭ ಸ್ಕೂಟರ್ ಅನ್ನು ನಿಯಂತ್ರಿಸಲಾಗದೇ ಫುಟ್ಪಾತ್ ಅಂಚಿಗೆ ಢಿಕ್ಕಿ ಹೊಡೆದು ಬಿದ್ದ ಪರಿಣಾಮ ಸವಾರ ಗಂಭೀರ ಗಾಯಗೊಂಡ ಘಟನೆ ಬೆಂದೂರ್ವೆಲ್ನಲ್ಲಿ ನಡೆದಿದೆ.
ಸ್ಕೂಟರ್ ಸವಾರನನ್ನು ಗೌಶಿಕ್ ಎಂದು ಗುರುತಿಸಲಾಗಿದೆ.
ಸಿರಿಲ್ ಮಾರ್ಟಿಸ್ ಎನ್ನುವವರು ಆಟೋರಿಕ್ಷಾದಲ್ಲಿ ಬಲ್ಮಠ ಜಂಕ್ಷನ್ಗೆ ತಲುಪುತ್ತಿದ್ದ ಸಂದರ್ಭ ಆಟೋರಿಕ್ಷಾದ ಮುಂದಿನಿಂದ ಬಂದ ಸ್ಕೂಟರ್ವೊಂದು ಅತೀ ವೇಗವಾಗಿ ಬಲ್ಮಠ ಕಡೆಯಿಂದ ಬೆಂದೂರ್ವೆಲ್ ಕಡೆಗೆ ಹಾದು ಹೋಗುವ ಸಾರ್ವಜನಿಕ ಕಾಂಕ್ರೀಟ್ ರಸ್ತೆಯಲ್ಲಿ ನ್ಯೂ ಸ್ವಾಗತ್ ಹೋಟೆಲ್ನ ಮುಂಭಾಗ ತಿರುವು ಪ್ರದೇಶದತ್ತ ಸಾಗುತ್ತಿತ್ತು. ಈ ಸಂದರ್ಭ ಸವಾರನಿಗೆ ಸ್ಕೂಟರ್ ಅನ್ನು ನಿಯಂತ್ರಿಸಲಾಗದೇ ಹತೋಟಿ ತಪ್ಪಿ ಸಾರ್ವಜನಿಕ ಕಾಂಕ್ರೀಟ್ ರಸ್ತೆಗೆ ಬಿದ್ದಿದ್ಧಾನೆ.
ಬಿದ್ದ ರಭಸಕ್ಕೆ ಸ್ಕೂಟರ್ ಸಮೇತ ಸುಮಾರು 20 ಅಡಿ ದೂರದವರೆಗೆ ಎಳೆದುಕೊಂಡು ಹೋಗಿ ಲಕ್ಷ್ಮೀ ಮೆಮೊರಿಯಲ್ ಕಾಲೇಜ್ ಆಫ್ ಫಿಜಿಯೋಥೆರಪಿ ಮುಂಭಾಗದ ಫುಟ್ ಪಾತ್ ಅಂಚಿಗೆ ಢಿಕ್ಕಿ ಹೊಡೆದು ಫುಟ್ಪಾತ್ನ ಮೇಲೆ ಬಿದ್ದ ಪರಿಣಾಮ ಸ್ಕೂಟರ್ ಸವಾರನ ತಲೆ ಹಾಗೂ ಮುಖಕ್ಕೆ ಗಂಭೀರ ಗಾಯಗಳಾಗಿವೆ.
ಕೂಡಲೇ ಆತನನ್ನು ಸಾರ್ವಜನಿಕರ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ.