ಕಾರ್ಕಳ, ನ. 28 (DaijiworldNews/HR): ವಿಧಾನ ಮಂಡಲ ಪ್ರಜಾಪ್ರಭುತ್ವದ ಶಕ್ತಿಕೇಂದ್ರ. ಈ ವಿಧಾನ ಮಂಡಲದ ಸಾಂವಿಧಾನಿಕ ಗೌರವವನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ವಿಧಾನ ಪರಿಷತ್ ಸದಸ್ಯರ ಪಾತ್ರ ಮಹತ್ತರವಾಗಿದೆ. ಆ ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಮಂಜುನಾಥ ಭಂಡಾರಿಯತಹ ಒಬ್ಬ ಜನಪರ ಚಿಂತನೆಯ ಸಮರ್ಥ ಅಭ್ಯರ್ಥಿಯನ್ನು ವಿಧಾನ ಪರಿಷತ್ತಿಗೆ ಅಬ್ಯಾರ್ಥಿಯಾಗಿ ಕಣಕ್ಕಿಳಿಸಿದೆ. ಧಮನಿತರ ಧ್ವನಿಯಾಗಿರುವ ಕಾಂಗ್ರೆಸ್ ಅಭ್ಯರ್ಥಿಯ ಗೆಲುವು ಇಂದಿನ ಅನಿವಾರ್ಯತೆಯಾಗಿದ್ದು, ಪಂಚಾಯತ್ ರಾಜ್ ವ್ಯವಸ್ಥೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಇದು ಪ್ರತೀ ಪಂಚಾಯತ್ ಸದಸ್ಯನ ಬದ್ಧತೆಯೂ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಹೇಳಿದ್ದಾರೆ.
ಪೆರ್ವಾಜೆಯ ಬ್ರಹ್ಮಶ್ರೀ ನಾರಾಯಣಗುರು ಸಭಾ ಭವನದಲ್ಲಿ ವಿಧಾನಪರಿಷತ್ ಚುನಾವಣೆಯ ಪ್ರಯುಕ್ತ ಕಾರ್ಕಳ ಹಾಗೂ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಆಯೋಜಿಸಿದ್ದ ಕಾರ್ಯಕರ್ತರು ಮತ್ತು ಪಂಚಾಯತ್ ಸದಸ್ಯರ ಸಭೆಯಲ್ಲಿ ಮಾತಾಡುತ್ತಿದ್ದರು.
ವಿಧಾನ ಪರಿಷತ್ ಅಭ್ಯರ್ಥಿ ಮಂಜುನಾಥ ಭಂಡಾರಿ ಮಾತಾಡಿ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲಪುವುದೇ ನನ್ನ ಗುರಿಯಾಗಿದ್ದು ತಮ್ಮೆಲ್ಲರ ಪ್ರಥಮ ಪ್ರಾಶಸ್ತ್ಯದ ಮತವನ್ನು ನನಗೆ ಹಾಕಿ ಎಂದು ವಿನಂತಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕುಮಾರ್ ಕೊಡವೂರು ಅಧ್ಯಕ್ಷತೆ ವಹಿಸಿದ್ದರು. ಕಾರ್ಕಳ ಉಸ್ತುವಾರಿ ಕೆಪಿಸಿಸಿ ಕಾರ್ಯದರ್ಶಿ ಭರತ್ ಮುಂಡೋಡಿ, ಬ್ಲಾಕ್ ಅಧ್ಯಕ್ಷರಾದ ಮಂಜುನಾಥ ಪುಯಜಾರಿ, ಸದಾಶಿವ ದೇವಾಡಿಗ, ಡಿಸಿಸಿ ಉಪಾಧ್ಯಕ್ಷ ಸುದಾಕರ ಕೋಟ್ಯಾನ್, ಹೆಬ್ರಿ ಉಸ್ತುವಾರಿ ಫಾರೂಕ್ ಉಳ್ಳಾಲ, ಮಂಗಳೂರು ಮಾಜಿ ಮೇಯರ್ ಭಾಸ್ಕರ ಮೊಯಿಲಿ, ಡಿಸಿಸಿ ಪ್ರಚಾರ ಸಮಿತಿ ಅದ್ಯಕ್ಷ ದಿನೇಶ ಪುತ್ರನಾ, ಕೆಪಿಸಿಸಿ ಸಂಯೋಜಕ ಬಿ.ಕೃಷ್ಣ ಮೂರ್ತಿ, ನಗರಾಧ್ಯಕ್ಷ ಮಧುರಾಜ್ ಶೆಟ್ಟಿ, ಕೆಪಿಸಿಸಿ ನವೀನಚಂದ್ರ ಶೆಟ್ಟಿ, ಕೃಷಿ ಘಟಕದ ಅಧ್ಯಕ್ಷ ಉದಯ ಶೆಟ್ಟಿ, ಮಹಿಳಾಧ್ಯಕ್ಷೆ ಅನಿತಾ ಡಿ'ಸೋಜ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರಪಾಲ್ ನಕ್ರೆ ಸ್ವಾಗತಿಸಿದರು. ಬ್ಲಾಕ್ ಉಪಾಧ್ಯಕ್ಷ ರವಿಶಂಕರ್ ವಂದನಾರ್ಪಣೆ ಗೈದರು. ಬ್ಲಾಕ್ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಬಂಗೇರ ಕಾರ್ಯಕ್ರಮ ನಿರೂಪಿಸಿದರು.