ಕಾರ್ಕಳ, ನ.28 (DaijiworldNews/PY): ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ಮತ್ತು ಪತ್ರಕರ್ತರ ವೇದಿಕೆ ಉಡುಪಿ ಜಿಲ್ಲೆ ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ಸಮಿತಿಯ ಉಪಾಧ್ಯಕ್ಷ ದಿನೇಶ ಹೊಸಂಗಡಿ ಮಾರ್ಗದರ್ಶನದಲ್ಲಿ ಆಯೋಜಿಸಿದ್ದ ಕನ್ನಡ ಶಾಲೆಯಿಂದ ಶಾಲೆಗೆ ಕನ್ನಡದ ಅಭಿಮಾನ-ಅಭಿಯಾನ ಕಾರ್ಯಕ್ರಮದ ಸಮಾರೋಪ ಕಾಡುಹೊಳೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಅತಿಥಿಗಳಿಗೆ, ಶಿಕ್ಷಕಿಯರಿಗೆ ಮತ್ತು ಎಲ್ಲಾ ಮಕ್ಕಳಿಗೆ ಕನ್ನಡದ ಶಾಲುಗಳನ್ನು ಸಮಿತಿಯ ಮಕ್ಕಳ ವಿಭಾಗದ ಸಂಚಾಲಕ ಸುನಿಧಿ ಎಸ್ ಅಜೆಕಾರು ಅವರು ಅರ್ಪಿಸಿ ಗೌರವಿಸಿದರು.
ಶಾಲಾ ವಿದ್ಯಾರ್ಥಿ ನಾಯಕ ವಿಕ್ರಮ್ ಪೈ, ಶಿಕ್ಷಕಿಯರಾದ ಮಮತಾ, ಶರೀಕಾ, ಅಡುಗೆಯ ಪ್ರೇಮಾ, ಪಂಚಾಯತ್ ಸದಸ್ಯರಾದ ಕೃಷ್ಣಮೂರ್ತಿ, ರಜನಿ, ವಿಜಯ ಸಹಿತ ಗಣ್ಯರು ಶುಭ ಹಾರೈಸಿದರು. ಸಮಿತಿಯ ರಾಜ್ಯಾಧ್ಯಕ್ಷ ಡಾ. ಶೇಖರ ಅಜೆಕಾರು ಕನ್ನಡ ಅಭಿಮಾನ ಮೂಡಿಸುವ ಮತು ಭಾಷಾ ಬಾಂಧವ್ಯದ ಕುರಿತು ಜಾಗೃತಿ ಮೂಡಿಸಿದರು.
ಅಜೆಕಾರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಪ್ರತಿಯೊಬ್ಬ ಮಕ್ಕಳಿಗೂ, ಶಿಕ್ಷಕರಿಗೂ, ಭಾಗವಹಿಸಿದವರಿಗೆ ಕನ್ನಡದ ಶಾಲು ಹೊದಿಸಿ ಗೌರವಿಸಲಾಯಿತು.
ಕಿರೆಂಚಿಬೈಲು ಕಿರಿಯ ಪ್ರಾಥಮಿಕ ಶಾಲೆ, ಅಜೆಕಾರು ಪೇಟೆ ಅಂಗನವಾಡಿ ಕೇಂದ್ರ, ದಾಸಗದ್ದೆ ಕಿರಿಯ ಪ್ರಾಥಮಿಕ ಶಾಲೆ, ಬೊಂಡುಕುಮೇರಿ, ಹಿರಿಯ ಪ್ರಾಥಮಿಕ ಶಾಲೆ, ಗುಡ್ಡೆ ಅಂಗಡಿ ಅಂಗನವಾಡಿ ಕೇಂದ್ರ, ಕಿರಿಯ ಪ್ರಾಥಮಿಕ ಶಾಲೆ ಗುಡ್ಡೆಅಂಗಡಿ, ಕಾಡುಹೊಳೆ ಅಂಗನವಾಡಿ ಕೇಂದ್ರಗಳಲ್ಲಿ ಕನ್ನಡ ಅಭಿಮಾನ ಅಭಿಯಾನ ನಡೆಯಿತು.
ನವೆಂಬರ್ ತಿಂಗಳಲ್ಲಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮತ್ತು ಗ್ರಾಮಾಂತರ ಅಂಗನವಾಡಿ ಕೇಂದ್ರಗಳಲ್ಲಿ ಕನ್ನಡದ ಅಭಿಮಾನ ಮೂಡಿಸುವ ಸಲುವಾಗಿ ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
"ಕನ್ನಡ ಶಾಲೆಗಳ ಶಿಕ್ಷಕರು ಮನಸ್ಸು ಮಾಡಿದರೆ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ ಬೆಳೆಸಬಹುದು" ಎಂದು ಸಂಘಟಕ ಡಾ.ಶೇಖರ ಅಜೆಕಾರು ಹೇಳಿದರು.
"ಕನ್ನಡದ ಶಾಲು ಹಾಕಿಕೊಂಡು ಪುಟಾಣಿಗಳು ಸಂಭ್ರಮಿಸಿದ ರೀತಿ ಮುಂದಿನ ದಿನಗಳಲ್ಲೂ ಇಂತಹ ಆದರೆ ಇದಕ್ಕಿಂತ ವಿಭಿನ್ನ ಭಾಷಾ ಸಾಮರಸ್ಯದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಪ್ರೇರಣೆ ನೀಡಿದೆ" ಎಂದು ಅಭಿಪ್ರಾಯಪಟ್ಟರು