ಕೋಟ, ನ. 27 (DaijiworldNews/HR): ಕಳೆದ ಹಲವು ದಿನಗಳಿಂದ ಕೋಟ ಪರಿಸರದ ಗಾಣಿಗ ಸಮಾಜಕ್ಕೆ ಸೇರಿದ್ದ ಕಮಲ ಗಾಣಿಗ ಎನ್ನುವ ಅನಾಥ ವೃದ್ಧೆ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಅನಾಥ ಸ್ಥಿತಿ ಇರುವುದಾಗಿ ಹಾಗೂ ಆಕೆಗೆ ನೆರವಾಗುವಂತೆ ಸಾಮಾಜಿಕ ಕಾರ್ಯಕರ್ತರು ಮನವಿ ಮಾಡಿದ ಪೋಸ್ಟರ್ವೊಂದು ವೈರಲ್ಆಗಿತ್ತು.
ಈ ಕುರಿತು ಮಾಹಿತಿ ತಿಳಿದ ತಕ್ಷಣ ಗಾಣಿಗ ಯುವ ಸಂಘಟನೆ ಕೋಟ ಘಟಕದ ಸದಸ್ಯರು ಸಂಘದ ಅಧ್ಯಕ್ಷ ವಿಶ್ವನಾಥ ಗಾಣಿಗ ಬೆಟ್ಲಕ್ಕಿಯವರ ನೇತೃತ್ವದಲ್ಲಿಆಸ್ಪತ್ರೆಗೆ ಭೇಟಿ ನೀಡಿ ಅಜ್ಜಿಯನ್ನು ಮಾತಾಡಿಸಿ ಮಾಹಿತಿ ಪಡೆದಾಗ, ತನಗೆ ಮಕ್ಕಳು ಯಾರೂ ಇಲ್ಲ. ತಾನು ಅನಾಥೆಯಾಗಿ ಭಿಕ್ಷೆ ಬೆಡುತ್ತ ಜೀವನ ಸಾಗಿಸುತ್ತಿರುವುದಾಗಿ ಹಾಗೂ ಅನಾರೋಗ್ಯದ ಕಾರಣ ಆರೇಳು ತಿಂಗಳ ಹಿಂದೆ ಯಾರೋ ಅಪರಿಚಿತರು ಆಸ್ಪತ್ರೆಗೆ ದಾಖಲಿಸಿದ್ದು, ಆಸ್ಪತ್ರೆಯಿಂದ ಎಲ್ಲಿಗೆ ಹೋಗುವುದು ಎಂದು ತಿಳಿಯದಿರುವುದಾಗಿ ತಿಳಿಸಿದ್ದಾರೆ.
ಇನ್ನು ಕಮಲಜ್ಜಿಗೆ ಮನೆ, ಮಕ್ಕಳು, ಸಂಸಾರ ಯಾವುದೂ ಇಲ್ಲ. ಹೀಗಾಗಿ ಎಲ್ಲಿಗೆ ಹೋಗಬೇಕು, ಯಾರ ಬಳಿ ನೆರವು ಯಾಚಿಸಬೇಕು ಎನ್ನುವುದು ತಿಳಿಯದಾಗಿದೆ. ಹೀಗಾಗಿ ಅಜ್ಜಿಯನ್ನು ಯಾವುದಾದರು ಅನಾಥಶ್ರಮಕ್ಕೆ ಸೇರಿಸುವ ಸಂಕಲ್ಪವನ್ನು ಗಾಣಿಗ ಯುವ ಸಂಘಟನೆ ಕೋಟ ಘಟಕ ಮಾಡಿ ಐದಾರು ಆಶ್ರಮಗಳನ್ನು ಸಂಪರ್ಕಿಸಿತು. ಆದರೆ ಅಜ್ಜಿಗೆ ನಡೆಯಲು ಆಗದ ಸ್ಥಿತಿ ಇರುವುದು ಹಾಗೂ್ ಹಾಸಿಗೆಯಲ್ಲೇ ಎಲ್ಲಾ ಚಾಕರಿಗಳನ್ನು ಮಾಡಿಸಬೇಕಾದ ಕಾರಣಕ್ಕೆ ಅನಾಥಶ್ರಮದವರು ಸೇರಿಸಲು ಅಸಾಧ್ಯವಾಗಿದ್ದು, ಕೊನೆಗೆ ಕೋಟೇಶ್ವರದಲ್ಲಿರುವ ಸರ್ಜನ್ ಆಸ್ಪತ್ರೆಯ ಹಿರಿಯರ ಶುಶ್ರೂಷೆ ಕೇಂದ್ರದಲ್ಲಿ 20ಸಾವಿರ ಮುಂಗಡ ಹಣ ಹಾಗೂ ತಿಂಗಳಿಗೆ 9ಸಾವಿರ ರೂ ಚಾರ್ಜ್ ನೀಡುವ ಮಾತುಕತೆ ನಡೆಸಿ ಕೋಟ ಭಾಗದ ಸಂಘದ ಸದಸ್ಯರಿಂದ
21ಸಾವಿರ ಒಟ್ಟುಗೂಡಿಸಿ ಕೋಟೇಶ್ವರದಲ್ಲಿರುವ ಸರ್ಜನ್ ಆಸ್ಪತ್ರೆಯ ಹಿರಿಯರ ಶುಶ್ರೂಷೆ ಕೇಂದ್ರಕ್ಕೆ ಸೇರ್ಪಡೆಗೊಳಿಸಲಾಗಿದೆ.
ಅಜ್ಜಿ ನಡೆದಾಡಿ ತನ್ನ ಕೆಲಸ ಕಾರ್ಯಗಳನ್ನು ತಾನೇ ಮಾಡಿಕೊಳ್ಳುವ ತನಕ ಪ್ರತಿ ತಿಂಗಳು ಶುಶ್ರೂಷೆ ಕೇಂದ್ರಕ್ಕೆ ನಿರ್ವಹಣೆಗೆ ಹಣ ಹೊಂದಿಸಬೇಕಾದ ಸವಾಲು ಸಂಘಟನೆಯ ಮುಂದಿದ್ದು, ಸಮಾಜದ ದಾನಿಗಳ ನೆರವು ಅಗತ್ಯವಾಗಿ ಬೇಕಿದೆ, ಆದ್ದರಿಂದ ಸಹೃದಯರು ಸಹಕಾರ ಅಗತ್ಯ ಎನ್ನುವ ಮನವಿಯನ್ನು ಗಾಣಿಗ ಯುವ ಸಂಘಟನೆ ಮಾಡಿದೆ.
ಈ ಕಾರ್ಯದಲ್ಲಿ ಗಾಣಿಗ ಯುವ ಸಂಘಟನೆ ಕೋಟ ಘಟಕದ ಗೌರವಾಧ್ಯಕ್ಷ ಪ್ರಶಾಂತ್ ಗಾಣಿಗ, ಕಾರ್ಯದರ್ಶಿ ಗಣೇಶ್ ಗಾಣಿಗ ಚಿತ್ರಪಾಡಿ, ಖಜಾಂಚಿ ಗಿರೀಶ್ ಗಾಣಿಗ, ಸಮಾಜದ ಪ್ರಮುಖರಾದ ದಿನೇಶ್ ಗಾಣಿಗ ಕೋಟ, ನಾಗರಾಜ್ ಗಾಣಿಗ ಸಾಲಿಗ್ರಾಮ, ರಾಜೇಶ್ ಗಾಣಿಗ ಅಚ್ಲಾಡಿ, ಸುರೇಶ್ ಗಾಣಿಗ ಶೇವಧಿ, ಕಿರಣ್ ಗಾಣಿಗ ಗೆಂಡೆಕೆರೆ, ವಿಜಯ ಗಾಣಿಗ ಕಾರ್ಕಡ, ರಂಜಿತ ಕಾರ್ಕಡ, ನಾಗರಾಜ್ ಪುತ್ರನ್ ಜೀವನ್ಮಿತ್ರ ತಂಡ, ನಿತ್ಯಾನಂದ ಒಳಕಾಡು, ತಾರಾನಾಥ ಮೆಸ್ತ ತಂಡ ಸಹಕರಿಸಿದರು.