*ಆರ್.ಬಿ.ಜಗದೀಶ್
ಕಾರ್ಕಳ, ನ 27 (DaijiworldNews/MS): ಕರ್ನಾಟಕ ಕನ್ನಡ ಸಂಸ್ಕೃತಿ ಇಲಾಖಾ ಸಚಿವರಾಗಿ ಅಧಿಕಾರ ಸ್ವೀಕರಿಸಿರುವ ವಿ.ಸುನೀಲ್ ಕುಮಾರ್ರವರು ತನ್ನ ಕ್ಷೇತ್ರದಲ್ಲಿ ವಿನೂತನ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದ್ದು, ತನ್ಮೂಲಕ ಕಾರ್ಕಳವು ವಿಶ್ವದ ಗಮನ ಸೆಳೆಯುವ ಎಲ್ಲಾ ಪ್ರಯತ್ನಗಳು ಈ ಮೂಲಕ ನಡೆಯಲಿದೆ.
ಕಾರ್ಕಳ ಉತ್ಸವ
ಡಿ.18ರಂದು ದತ್ತ ಜಯಂತಿ ಹಾಗೂ ಕಾರ್ಕಳ ಮಿಯ್ಯಾರು ಕಂಬಳ ನಡೆಯಲಿದ್ದು, ಅದೇ ದಿನ ಕಾರ್ಕಳ ಉತ್ಸವಕ್ಕೆ ಚಾಲನೆ ದೊರಕಲಿದೆ. ಈ ಕಾರ್ಯಕ್ರಮದಲ್ಲಿ ಸ್ಥಳೀಯ ಪ್ರತಿಭೆಗಳು ಅಲ್ಲದೇ ದೇಶ,ವಿದೇಶಗಳಿಂದ ಖ್ಯಾತಿ ಹೊಂದಿರುವ ಕಲಾವಿದರ ತಂಡವು ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ. ಆ ಮೂಲಕ ಕಲೆ,ಸಂಸ್ಕೃತಿಗಳಿಗೆ ಹೆಚ್ಚಿನ ರೀತಿಯಲ್ಲಿ ಪ್ರೋತ್ಸಾಹ ದೊರಕಲಿದೆ. ಡಿ.19ರಿಂದ 23ರ ತನಕ ಮಂಜುನಾಥ ಪೈ ಸಾಂಸ್ಕೃತಿಕ ಕಲಾ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಡಿ.20ಕ್ಕೆ ಹೆಬ್ರಿ, ಬೆಳ್ಮಣ್, ಬಜಗೋಳಿಯಲ್ಲಿ. ಡಿ.21ಕ್ಕೆ ಅಜೆಕಾರು, ಬೈಲೂರಿನಲ್ಲಿ ಕಲಾ ಸಾಂಸ್ಕೃತಿಕ ಕಾರ್ಯಕ್ರಮಗಳು ವಿವಿಧ ತಂಡಗಳಿಂದ ನಡೆಯಲಿದೆ.
ಮೆರವಣಿಗೆಗೆ ಚಾಲನೆ ನೀಡಲಿರುವ ಮುಖ್ಯಮಂತ್ರಿ
ಡಿ.24ರಂದು ಕಾರ್ಕಳ ಉತ್ಸವದ ಮೆರೆವಣಿಗೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಗರದ ಬಂಡೀಮಠ ಬಸ್ ನಿಲ್ದಾಣದ ಮುಂಭಾಗದಲ್ಲಿ ಚಾಲನೆ ನೀಡಲಿದ್ದಾರೆ.ಸ್ತಬ್ಧಚಿತ್ರ, ಡೋಲುಕುಣಿತ, ಚೆಂಡೆ, ಹುಲಿವೇಷ,ವಾದ್ಯ ಪರಿಕರಗಳು ಸೇರಿದಂತೆ ವಿಶಾಲ ಕರ್ನಾಟಕ ಒಳಗೊಂಡಂತೆ ಜಾನಪಥ, ವೀರಪುರುಷರು, ವೀರವನಿತೆಯರು, ಕನ್ನಡ ನಾಡಿನ ಇತಿಹಾಸ ನೆಲ,ಜಲವನ್ನು ಪರಿಚಯಿಸುವ ಕಲೆ,ಸಂಸ್ಕೃತಿ, ಪ್ರತಿಬಿಂಬಿಸುವ ಕಾರ್ಯವು ಈ ಭವ್ಯಮೆರವಣಿಗೆಯಲ್ಲಿ ಇದೆ.ಡಿ.24ರಿಂದ 26ರ ತನಕ ಸ್ವರಾಜ ಮೈದಾನದಲ್ಲಿ ಆಹೋರಾತ್ರಿ ವಿವಿಧ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಳ್ಳಲಿದೆ.
೧೦ ಸಾವಿರ ಮಂದಿ ಆಸನ ವ್ಯವಸ್ಥೆ
ಸ್ವರಾಜ್ ಮೈದಾನದಲ್ಲಿ ಬೃಹತ್ ಆಕಾರದ ವೇದಿಕೆಯು ಉತ್ತರಾಭಿಮುಖವಾಗಿ ನಿರ್ಮಾಣಗೊಳ್ಳಲಿದೆ. ಡಿ.24ರಿಂದ 26ರ ವರೆಗಿನ ಎಲ್ಲಾ ಕಾರ್ಯಕ್ರಮಗಳು ಇದೇ ವೇದಿಕೆಯಲ್ಲಿ ನಡೆಯಲಿದ್ದು, ಕಾರ್ಯಕ್ರಮ ನೇರ ವೀಕ್ಷಣೆಗಾಗಿ 10,000 ಮಂದಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಲಾಗುತ್ತಿದೆ.ಸ್ವರಾಜ್ ಮೈದಾನದ ಒಂದು ಪಾರ್ಶ್ವದಲ್ಲಿ ಆಹಾರ ಮೇಳ, ವಸ್ತುಪ್ರದರ್ಶನಕ್ಕೂ ಕೂಡಾ ವ್ಯವಸ್ಥೆ ಮಾಡಲಾಗುತ್ತಿದೆ.
ಭರದಿಂದ ಸಾಗುತ್ತಿರುವ ಕಾಮಗಾರಿ
ಸ್ವರಾಜ್ ಮೈದಾನದ ಸುತ್ತಮುತ್ತಲಿನಲ್ಲಿ ಇರುವ ಗುರುಚಲು ಗಿಡಗಳ ತೆರವು ಕಾರ್ಯ ಸೇರಿದಂತೆ ಮಣ್ಣಿನ ರಾಶಿಗಳನ್ನು ತೆಗೆದು ಹೊಂಡ ಗುಂಡಿ ಮುಚ್ಚಿ ಸಮತಟ್ಟುಗೊಳಿಸಲು ಕೆಲಸವು 4 ಜೆಸಿಬಿ, 10ಕ್ಕೂ ಮಿಕ್ಕಿ ಟಿಪ್ಪರ್ಗಳು ಹಾಗೂ ಹಲವು ಕಾರ್ಮಿಕರು ಮಾಡುತ್ತಿದ್ದಾರೆ.
ಕಂಗೊಳಿಸಲಿದೆ ಕಾರ್ಕಳ
ಇಂಧನ ಸಚಿವರಾಗಿರುವ ಸುನೀಲ್ ಕುಮಾರ್ ಅವರು ಮುತುವರ್ಜಿಯಿಂದ ಅವಿಭಜಿತ ಕಾರ್ಕಳ ವಿದ್ಯುತ್ ದೀಪಗಳಿಂದ ಕಂಗೋಳಿಸಲಿದೆ. ಅದಕ್ಕಾಗಿ ಮೈಸೂರು ವಿಭಾಗದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಮಂಡಳಿಯ ಮೇಲಾಧಿಕಾರಿಗಳು ಕಾರ್ಕಳಕ್ಕೆ ಈಗಾಗಲೇ ಭೇಟಿ ನೀಡಿ, ಮೈಸೂರು ದಸರಾದ ಮಾದರಿಯಲ್ಲಿ ವಿದ್ಯುತ್ ಅಲಂಕಾರಗೊಳ್ಳಿಸುವುದಕ್ಕೆ ಮಾರ್ಗದರ್ಶನ ನೀಡಿದ್ದಾರೆ.
ಕಾರ್ಕಳ ಅಗಮಿಸುವ ಎಲ್ಲ ಪ್ರಮುಖ ಪೇಟೆಗಳು, ವೃತ್ತಗಳು, ನಗರದ ಪ್ರಮುಖ ರಸ್ತೆ, ಯಾತ್ರಾಸ್ಥಳಗಳು, ಬಸದಿಗಳು, ದೇವಾಲಯಗಳು, ಚರ್ಚ್ಗಳು, ಮಸೀದಿಗಳು, ಸೇರಿದಂತೆ, ರಸ್ತೆಗಳಲ್ಲಿ ವಿವಿಧ ವಿನ್ಯಾಸ ವಿದ್ಯುತ್ ದೀಪಾಲಂಕರಗೊಳ್ಳಲಿದೆ.ಆ ಮೂಲಕ ಕಾರ್ಕಳ ಹೊಸ ಇತಿಹಾಸ ಬರೆಯಲಿದೆ.