ಮಂಗಳೂರು, ನ. 27 (DaijiworldNews/HR): "ಕೇಂದ್ರ ಸರ್ಕಾರದ ಅಸಮರ್ಪಕ ನೀತಿಯಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ಮಾನಸಿಕ ಒತ್ತಡದಿಂದ ಬಳಲುವಂತಾಗಿದ್ದು, ಎಂಬಿಬಿಎಸ್ ಪರೀಕ್ಷೆ ಮುಗಿಸಿದವರು ಕೌನ್ಸಿಲಿಂಗ್ ನಡೆಯದೇ ಇದ್ದ ಕಾರಣ ಕಾಯುತ್ತಿದ್ದಾರೆ. ನೀಟ್ ಪರೀಕ್ಷೆ ಬರೆದವರು ಸೀಟು ಹಂಚಿಕೆ ಆಗದೇ ಇರುವ ಕಾರಣ ಒತ್ತಡಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರ ಮೌನವಹಿಸಿ ವಿದ್ಯಾರ್ಥಿಗಳಿಗೆ ದ್ರೋಹವೆಸಗಿದೆ" ಎಂದು ಶಾಸಕ ಯು.ಟಿ. ಖಾದರ್ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ರಾಜ್ಯ ಬಿಜೆಪಿ ಸರ್ಕಾರಕ್ಕೆ ವೈದ್ಯಕೀಯ ಕ್ಷೇತ್ರದ ಬಗ್ಗೆ ಆಸಕ್ತಿ ಇದ್ದರೆ ಕರ್ನಾಟಕದಲ್ಲಿ ಸಿಇಟಿ ಮಾತ್ರ ಜಾರಿ ಮಾಡುತ್ತೇವೆ ಎಂದು ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು. ಕೇಂದ್ರ ಸರಕಾರದ ತಪ್ಪು ನೀತಿಯಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮುಳುವಾಗಿದೆ" ಎಂದರು.
ಇನ್ನು "ವೀರಪ್ಪ ಮೊಯಿಲಿ ಇರುವಾಗ ಸಿಇಟಿ ಪರೀಕ್ಷೆ ಆರಂಭಿಸಿದ್ದು, ಕೊಟ್ಟದ್ದನ್ನು ಸರಿಯಾಗಿ ನಿಭಾಯಿಸಲು ಸಾಧ್ಯವಾಗಲಿದ್ದಲ್ಲಿ ಎನ್ಇಪಿ ಜಾರಿಗೆ ಹೇಗೆ ತರುತ್ತಾರೆ?" ಎಂದು ಪ್ರಶ್ನಿಸಿದ್ದಾರೆ.
"ಕೇಂದ್ರ ಸರ್ಕಾರ ತಪ್ಪಿಗೆ ರಾಜ್ಯದ ಮಕ್ಕಳು ಯಾಕೆ ತೊಂದರೆ ಅನುಭವಿಸಬೇಕು. ಎಂಪಿಗಳು ಇದರ ಬಗ್ಗೆ ಯಾಕೆ ಆಸಕ್ತಿ ಇಲ್ಲ. ಸಿಇಟಿಯಲ್ಲಿ ಮಾರ್ಕ್ ಇಲ್ಲದಿದ್ದರೆ ವಿದ್ಯಾರ್ಥಿಗಳ ಭವಿಷ್ಯವೇ ಇಲ್ಲ. ರಾಜ್ಯ ಸರಕಾರ ಕೇಂದ್ರ ಸರಕಾರದ ಹೆದರಿಕೆಯಿಂದ ಬಗ್ಗೆ ಮೌನ ವಹಿಸಿದೆ" ಎಂದು ಆರೋಪಿಸಿದ್ದಾರೆ.