ಮಂಗಳೂರು, ನ.26 (DaijiworldNews/HR): ಪ್ರಸ್ತುತ ಕೊರೊನಾ ಸೋಂಕು ನಿಯಂತ್ರಣದಲ್ಲಿದ್ದು, ಈವರೆಗೆ ಸಾಧಿಸಿದ ಪ್ರಗತಿಯನ್ನು ಉಳಿಸಿಕೊಳ್ಳಲು ಮತ್ತು ರಾಜ್ಯದಲ್ಲಿನ ಪ್ರಕರಣಗಳ ಹೊರೆಯನ್ನು ಕಡಿಮೆ ಮಾಡಲು ಪರೀಕ್ಷೆ-ಪತ್ತೆ-ಚಿಕಿತ್ಸೆ ಲಸಿಕಾಕರಣ ಮತ್ತು ಕೊರೊನಾ ಸಮುಚಿತ ವರ್ತನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವುದು ಮೊದಲಾದ ಐದು ತಂತ್ರಗಳ ಮೇಲೆ ನಿರಂತರವಾಗಿ ಗಮನಹರಿಸುವ ಅಗತ್ಯವಿರುವುದರಿಂದ ಸರ್ಕಾರವು ಕೊರೊನಾ ಕಣ್ಣಾವಲು, ನಿಯಂತ್ರಣ ಮತ್ತು ಜಾಗೃತಿಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಹಾಗೂ ಈ ಮಾರ್ಗಸೂಚಿಗಳಿಗೆ ಸಂಬಂಧಿಸಿ ಹೊರಡಿಸಿರುವ ಸರ್ಕಾರದ ವಿಸ್ತರಣೆ ಆದೇಶಗಳನ್ನು ಡಿಸೆಂಬರ್ 08ರ ಬೆಳಿಗ್ಗೆ 6 ಗಂಟೆಯವರೆಗೆ ಮುಂದುವರೆಸಿ ಆದೇಶ ಹೊರಡಿಸಲಾಗಿದೆ.
ಜಿಲ್ಲೆಯ ಪ್ರಸಕ್ತ ವಿದ್ಯಮಾನಗಳನ್ನು ಅವಲೋಕಿಸಿ ಕೊರೊನಾ ಪ್ರಸರಣವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಕೋವಿಡ್-19 ಕಣ್ಣಾವಲು ನಿಯಂತ್ರಣ ಮತ್ತು ಜಾಗೃತ ಮಾರ್ಗಸೂಚಿಗಳನ್ನು ಮತ್ತು ಈ ಮಾರ್ಗಸೂಚಿಗಳಿಗೆ ಸಂಬಂಧಿಸಿದಂತೆ ಹೊರಡಿಸಿರುವ ಆದೇಶಗಳನ್ನು ಡಿಸೆಂಬರ್ 08 ರವರೆಗೆ ಅನ್ವಯವಾಗುವಂತೆ ಮತ್ತು ಕೇರಳ ರಾಜ್ಯದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರವೇಶವಿರುವ ಗಡಿಭಾಗಗಳಲ್ಲಿ ಈಗಾಗಲೇ ನಿರ್ಮಿಸಲಾಗಿರುವ ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ಕಾರ್ಯವನ್ನು ಮುಂದುವರಿಸುವಂತೆ
ಜಿಲ್ಲಾ ಎಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ, ಜಿಲ್ಲಾ ದಂಡಾಧಿಕಾರಿಗಳೂ ಹಾಗೂ ಜಿಲ್ಲಾಧಿಕಾರಿಯವರಾದ ಡಾ. ರಾಜೇಂದ್ರ ಕೆ.ವಿ. ಅವರು ಆದೇಶ ಹೊರಡಿಸಿದ್ದಾರೆ.
ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಅಂತಹವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005 ರ ಕಲಂ 11 ರಿಂದ (1) ರನ್ವಯ, ಐಪಿಸಿ ಕಲಂ 188 ರಂತ ಮತ್ತು ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮ 2(02) ರ ಕಲಂ 4, 5 ಮತ್ತು (1) ರಂತೆ ಕ್ರಮ ಜರಗಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.