ಉಡುಪಿ, ನ.26 (DaijiworldNews/HR): ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಸಂಸ್ಥೆಯ ಪ್ರಸಾರಾಂಗ ವಿಭಾಗವಾದ ಮಣಿಪಾಲ್ ಯೂನಿವರ್ಸಲ್ ಪ್ರೆಸ್ ಎರಡು ಕನ್ನಡ ಪುಸ್ತಕಗಳನ್ನು ಪ್ರಕಟಿಸಿದ್ದು ಲೋಕಾರ್ಪಣ ಸಮಾರಂಭ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಜರಗಿತು.
ಪ್ರೊ. ಪಿ. ಆರ್. ಪಂಚಮುಖಿ ಅವರ 'ಸಾಮಾಜಿಕ ಸಮನ್ವಯದ ಹರಿಕಾರ ಕನಕದಾಸರು' ಮತ್ತು ಪ್ರೊ. ಎನ್. ಟಿ. ಭಟ್ ಅವರ 'ಭಾಷಾಂತರ : ಜಿಜ್ಞಾಸೆ ಮತ್ತು ಪ್ರಾತ್ಯಕ್ಷಿಕೆ' ಕೃತಿಗಳನ್ನು ಮಾಹೆಯ ಕುಲಪತಿಗಳಾದ ಲೆ. ಜ. [ಡಾ.] ಎಂ. ಡಿ. ವೆಂಕಟೇಶ್ ಮತ್ತು ಮಾಹೆಯ ಎಕ್ಸಿಕ್ಯೂಟಿವ್ ವೈಸ್ ಪ್ರೆಸಿಡೆಂಟ್ ಡಾ. ಎಚ್. ವಿನೋದ್ ಭಟ್ ಬಿಡುಗಡೆಗೊಳಿಸಿದರು.
ಲೆ. ಜ. [ಡಾ.] ಎಂ. ಡಿ. ವೆಂಕಟೇಶ್ ಮಾತನಾಡಿ, "ಮಣಿಪಾಲ್ ಯೂನಿವರ್ಸಲ್ ಪ್ರೆಸ್ ಸಂಸ್ಥೆಯು ಪ್ರಸ್ತುತ ತನ್ನ ಹತ್ತು ವರ್ಷಗಳನ್ನು ಪೂರೈಸುತ್ತಿದೆ. ಈ ದೀರ್ಘವಾದ ಪ್ರಯಾಣದಲ್ಲಿ ಎಂಯುಪಿಯು ಮಹತ್ತ್ವದ ಪುಸ್ತಕಗಳನ್ನು ಪ್ರಕಟಿಸುವ ಮೂಲಕ ಜ್ಞಾನ ಮತ್ತು ಮಾಹಿತಿಗಳನ್ನು ಸಂಗ್ರಹಿಸುವ ಮತ್ತು ವಿತರಿಸುವ ಕೆಲಸವನ್ನು ಮಾಡಿಕೊಂಡು ಬಂದಿದೆ. ಶೈಕ್ಷಣಿಕ, ವೈಜ್ಞಾನಿಕ, ಸಾಮಾಜಿಕ, ಸಾಹಿತ್ಯಿಕ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಕನ್ನಡ, ಇಂಗ್ಲಿಷ್, ಹಿಂದಿ, ಸಂಸ್ಕೃತ ಮತ್ತು ತುಳು ಭಾಷೆಗಳಲ್ಲಿ ಇನ್ನೂರಕ್ಕಿಂತಲೂ ಅಧಿಕ ಕೃತಿಗಳನ್ನು ಪ್ರಕಟಿಸಿದೆ. ಪ್ರಕಟಣೆಯನ್ನು ಅನ್ಯ ಭಾರತೀಯ ಭಾಷೆಗಳಿಗೂ ವಿಸ್ತರಿಸುವ ಯೋಚನೆ ಇದೆ" ಎಂದರು.
ಡಾ. ಎಚ್. ವಿನೋದ್ ಭಟ್ ಮಾತನಾಡಿ, "ಎಕಡೆಮಿಕ್ ವಲಯದ ಮತ್ತು ಸಾಮಾನ್ಯಜನತೆಯ ಆಸಕ್ತಿಗಳು ಭಿನ್ನವಾದುದು. ಇವುಗಳ ನಡುವಿನ ಸೂಕ್ಷ್ಮವ್ಯತ್ಯಾಸವನ್ನು ಅರ್ಥವಿಸಿಕೊಂಡು ಎಂಯುಪಿಯು ಸೂಕ್ತ ಪುಸ್ತಕಗಳನ್ನು ಪ್ರಕಟಣೆಗಾಗಿ ಆಯ್ಕೆ ಮಾಡಿದೆ. ಹಾಗಾಗಿ, ಎಂಯುಪಿಯು ಗಂಭೀರ ಮತ್ತು ಸಾಮಾನ್ಯ- ಎರಡೂ ವಿಭಾಗದ ಓದುಗರಿಗೆ ಪ್ರಿಯವಾದ ಸಂಸ್ಥೆಯಾಗಿ ಬೆಳೆದು ಬಂದಿದೆ" ಎಂದಿದ್ದಾರೆ.
ಎಂಯುಪಿಯ ಪ್ರಧಾನ ಸಂಪಾದಕರಾದ ಪ್ರೊ. ನೀತಾ ಇನಾಂದಾರ್ ಮಾತನಾಡಿ, "ಹತ್ತು ವರ್ಷಗಳ ಹಿಂದೆ ಇದೇ ದಿನ ಮಣಿಪಾಲ್ ಯೂನಿವರ್ಸಲ್ ಪ್ರೆಸ್ನ ಮಹತ್ವಾಕಾಂಕ್ಷೆಯ ಮೊದಲ ಕೃತಿ 'ದ ಪಾಥ್ ಆಫ್ ಪ್ರೂಫ್ಸ್' ಲೋಕಾರ್ಪಣೆಗೊಂಡ ಸಂದರ್ಭವನ್ನು ನೆನಪಿಸಿಕೊಂಡರು. ಪ್ರಸ್ತುತ 217ನೇಯ ಪ್ರಕಟಣೆಯ ಸಡಗರದಲ್ಲಿರುವ ಎಂಯುಪಿಯ ದೀರ್ಘ ಪ್ರಯಾಣದ ಅನುಭವವನ್ನು
ಅವರು ಹಂಚಿಕೊಂಡರು.
ಸಭಾ ಕಾರ್ಯಕ್ರಮದ ಬಳಿಕ ಪುಸ್ತಕಗಳ ಕುರಿತ ಸಂವಾದಗೋಷ್ಠಿ ನಡೆಯಿತು. ಲೇಖಕರಾದ ಎನ್. ಟಿ. ಭಟ್, ಸಂಪನ್ಮೂಲ ವ್ಯಕ್ತಿಗಳಾದ ಪ್ರೊ. ಪಾದೇಕಲ್ಲು ವಿಷ್ಣು ಭಟ್, ಪ್ರೊ. ಪಾರ್ವತಿ ಜಿ. ಐತಾಳ್ ಅವರು ಗೋಷ್ಠಿಯಲ್ಲಿ ಪಾಲ್ಗೊಂಡರು. ಡಾ. ಪೃಥ್ವೀರಾಜ ಕವತ್ತಾರು ಸಂವಾದವನ್ನು ನಡೆಸಿಕೊಟ್ಟರು.