ಮಂಗಳೂರು, ನ 26 (DaijiworldNews/MS): ಸ್ವಿಮ್ಮಿಂಗ್ ಫೆಡರೇಶನ್ ಆಫ್ ಇಂಡಿಯಾ ಹಾಗೂ ಇತರೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಮಾಸ್ಟರ್ ಚಾಂಪಿಯನ್ಶಿಪ್ ಈಜು ಸ್ಪರ್ಧೆಗೆ ನ.26ರ ಶುಕ್ರವಾರ ನಗರದ ಸೇಂಟ್ ಅಲೋಶಿಯಸ್ ಕಾಲೇಜಿನ ಆವರಣದಲ್ಲಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಅವರು ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ರಾಷ್ಟ್ರ ಮಟ್ಟದ ಈ ಸ್ಪರ್ಧೆ ಆಯೋಜನೆಗೆ ಕಾಲಾವಕಾಶ ಕಡಿಮೆಯಿತ್ತು, ಅಲ್ಪ ಅವಧಿಯಲ್ಲಿಯೇ ಸೇಂಟ್ ಅಲೋಷಿಯಸ್ ಕಾಲೇಜಿನ ಆಡಳಿತ ಮಂಡಳಿ ಅತ್ಯುತ್ತಮ ವ್ಯವಸ್ಥೆಗಳನ್ನು ಮಾಡಿದೆ, ಅದಕ್ಕಾಗಿ ಇಬ್ಬರೂ ಫಾದರ್ ಗಳಿಗೆ ಆಭಾರಿಯಾಗಿದ್ದೇನೆ, ದೇಶದ ವಿವಿದೆಡೆಯಿಂದ ಈಜು ಸ್ಪರ್ಧಿಗಳು ಇಲ್ಲಿಗೆ ಆಗಮಿಸಿದ್ದಾರೆ, ಇನ್ನು ಮುಂಬರುವ ಋತುಗಳಲ್ಲಿಯೂ ಈಜು ಸ್ಫರ್ಧೆಗಳು ನಡೆಯಲಿವೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕೈಗಾರಿಕೆ ಹಾಗೂ ವಾಣಿಜ್ಯ ಕೇಂದ್ರದ ಜಂಟಿ ನಿರ್ದೇಶಕ ಗೋಕುಲ್ ದಾಸ್ ನಾಯಕ್, ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯ ಉಪನಿರ್ದೇಶಕ ಪ್ರದೀಪ್ ಡಿಸೋಜ, ಸಂತ ಅಲೋಶಿಯಸ್ ವಿದ್ಯಾ ಸಂಸ್ಥೆಯ ಹಣಕಾಸು ಅಧಿಕಾರಿ ಫಾದರ್ ವಿನ್ಸೆಂಟ್, ಅಲೋಶಿಯಸ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಫಾದರ್ ಸೀರಿಲ್, ಮಂಗಳೂರು ವಿಶೇಷ ಆರ್ಥಿಕ ವಲಯದ ಪಿಆರ್ ಒ ರಾಮಚಂದ್ರ ಭಂಡಾರಿ, ರಾಷ್ಟ್ರೀಯ ಮಾಸ್ಟರ್ ಈಜು ಚಾಂಪಿಯನ್ ಶಿಫ್ ನ ಅಧ್ಯಕ್ಷ ಮೋಹನ್, ಒಲಂಪಿಯನ್ ಹಕ್ಕಿಮುದ್ದಿನ್ ಹಬೀಬುಲ್ಲಾ ಹಾಗೂ ಇತರೆ ಗಣ್ಯರು ವೇದಿಕೆಯಲ್ಲಿದ್ದರು.
ಕರ್ನಾಟಕ ಈಜು ಸಂಸ್ಥೆಯ ಕಾರ್ಯದರ್ಶಿ ಸತೀಶ್ ನಿರೂಪಿಸಿದರು.ಮುಖ್ಯ ತರಬೇತುದಾರ ಲೋಕ ರಾಜ್, ಈಜುಕೊಳದ ನಿರ್ವಹಣೆದಾರರಾದ ನವೀನ್ ಹಾಗೂ ಶ್ರೀಮತಿ ರೂಪ ಪ್ರಭು ಇದ್ದರು. ರಾಜ್ಯ ಸೇರಿದಂತೆ ವಿವಿಧ ರಾಜ್ಯಗಳ ಈಜು ಸ್ಪರ್ಧಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಲು ಆಗಮಿಸಿದ್ದರು.