ಪುತ್ತೂರು, ನ.26 (DaijiworldNews/PY): ಕೃಷಿ ಭೂಮಿಯನ್ನು ನೋಡಲು ಬಂದ ಫೋಟೋಗ್ರಾಫರ್ ಅನ್ನು ಸಂಬಂಧಿಕರೇ ಹತ್ಯೆಗೈದ ಪ್ರಕರಣವು ಪೂರ್ವ ನಿರ್ಧರಿತವಾಗಿಯೇ ನಡೆದಿತ್ತು ಎನ್ನುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಜಗದೀಶ್ ಅವರು ಪ್ರತಿ ಬಾರಿ ಪತ್ನಿಯೊಂದಿಗೆ ಬರುತ್ತಿದ್ದು, ಈ ಬಾರಿ ಒಂಟಿಯಾಗಿ ಬರುವುದನ್ನು ಆರೋಪಿಸಿ ಬಾಲಕೃಷ್ಣ ಯಾನೆ ಸುಬ್ಬಯ್ಯ ರೈ ಖಾತರಿಪಡಿಸಿಕೊಂಡಿರುವ ವಿಚಾರ ಈ ಅನುಮಾನಕ್ಕೆ ಕಾರಣವಾಗಿದೆ. ಮೈಸೂರಿನಿಂದ ಹೊರಡುವ ಮುನ್ನ ಒಬ್ಬನೇ ಬರುತ್ತಿದ್ದೀಯಲ್ಲಾ ಎಂದು ಬಾಲಕೃಷ್ಣ ಯಾನೆ ಸುಬ್ಬಯ್ಯ ರೈ ಅವರು ದೂರವಾಣಿ ಮೂಲಕ ವಿಚಾರಸಿದ್ದನ್ನು ಜಗದೀಶ್ ಅವರ ಸ್ನೇಹಿತರು ದೃಢಪಡಿಸಿದ್ದು, ಇದೊಂದು ಪೂರ್ವ ನಿರ್ಧರಿತ ಹತ್ಯೆ ಎನ್ನುವುದು ಬಲವಾಗಿದೆ.
ಜಗದೀಶ್ ಅವರು ನಾಪತ್ತೆಯಾದ ಬಗ್ಗೆ ದೂರಿನ ಬಳಿಕ ಪೊಲೀಸರು ತನಿಖೆ ನಡೆಸಿದಾಗ ಜಗದೀಶ್ ಅವರ ಸಂಚಾರಿ ದೂರವಾಣಿ ಮೈಸೂರು ವ್ಯಾಪ್ತಿಯಲ್ಲಿ ಸಿಗ್ನಲ್ ತೋರಿಸುತ್ತಿರುವುದು ಕಂಡುಬಂದಿದೆ. ಕಾಲ್ ಟ್ರೇಸ್ ಮಾಡುವ ವೇಳೆ ಬೆಂಗಳೂರಿನ ಕಡೆ ಸಿಗ್ನಲ್ ಬದಲಾಗುತ್ತಿರುವುದು ಪತ್ತೆಯಾಗಿದ್ದು, ಕೊಲೆಗಾರರು ಪ್ರಕರಣದ ದಿಕ್ಕು ತಪ್ಪಿಸಲು ಮಾಡಿರುವ ಉಪಾಯವಿದು ಎಂದು ವಿಚಾರಣೆಯ ವೇಳೆ ಬೆಳಕಿಗೆ ಬಂದಿದೆ.
ಹತ್ಯೆ ನಡೆಸಿದ ಬಳಿಕ ಜಗದೀಶ್ ಅವರ ಮೊಬೈಲ್ ಅನ್ನು ಮೈಸೂರಿಗೆ ತೆಗೆದುಕೊಂಡು ಹೋಗಿ ಅಲ್ಲಿ ಬೆಂಗಳೂರಿಗೆ ತೆರಳುವ ವಾಹನದಲ್ಲಿ ಎಸೆದಿದ್ದಾರೆ ಎನ್ನಲಾಗಿದೆ. ಜಗದೀಶ್ ಮೈಸೂರಿಗೆ ತೆರಳಿದ್ದಾರೆ ಎಂದು ಪೊಲೀಸರು ಹಾಗೂ ಮನೆಮಂದಿ ನಂಬಲು ಈ ರೀತಿಯ ಉಪಾಯ ಹೆಣೆದಿದ್ದರು.
ಸಿಸಿ ಕ್ಯಾಮೆರಾ ದೃಶ್ಯ:
ತನ್ನ ಜಮೀನು ನೋಡಲು ಬಂದಿದ್ದ ಫೋಟೋಗ್ರಾಫರ್ ಜಗದೀಶ್ ನಾಪತ್ತೆ ಪ್ರಕರಣವನ್ನು ಪೊಲೀಸರು ಬೇಧಿಸುವಲ್ಲಿ ಸಿಸಿ ಕ್ಯಾಮೆರಾ ದೃಶ್ಯ ನೆರವಾಗಿದೆ ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ನ.18 ರಂದು ಪುತ್ತೂರಿನ ಕುಂಜೂರುಪಂಜ ಎಂಬಲ್ಲಿರುವ ತನ್ನ ಕೃಷಿಭೂಮಿಯನ್ನು ನೋಡಲು ಮೈಸೂರಿನಿಂದ ಪುತ್ತೂರಿಗೆ ಬಂದ ಜಗದೀಶ್ ಸಂಜೆ ಪುಳಿತ್ತಡಿಗೆ ತೆರಳಿ ನಂತರ ಅಲ್ಲಿಂದ ಮೈಸೂರಿಗೆ ತೆರಳಲೆಂದು ಓಮ್ನಿ ಕಾರಿನಲ್ಲಿ ಸುಳ್ಯ ತನಕ ಬಂದು ಅಲ್ಲಿಂದ ಬಸ್ನಲ್ಲಿ ಮೈಸೂರಿಗೆ ಹೋಗುವುದಾಗಿ ತಿಳಿಸಿದ್ದರು ಎಂದು ಬಾಲಕೃಷ್ಣ ಯಾನೆ ಸುಬ್ಬಯ್ಯ ರೈ ಅವರು ಜಗದೀಶ್ ಮನೆಯವರಿಗೆ ಹೇಳಿದ್ದರು.
ನ.18 ರಂದು ಪುತ್ತೂರಿನ ಕುಂಜೂರುಪಂಜ ಎಂಬಲ್ಲಿರುವ ಜಾಗವನ್ನು ನೋಡಿ ಬಂದಿದ್ದ ಜಗದೀಶ್ ಅವರು ಬಸ್ನಲ್ಲಿ ಬಂದು ಕಾವುನಲ್ಲಿ ಇಳಿದು ಅಲ್ಲಿಂದ ಮಾಡ್ಸೂರು ಸೇತುವೆಯವರೆಗೆ ಒಂಟಿಯಾಗಿ ನಡೆದುಕೊಂಡು ಬಂದು ಈಶ್ವರಮಂಗಲಕ್ಕೆ ತೆರಳುವ ರಸ್ತೆಯಲ್ಲಿ ಹೋಗಿರುವುದು ಮಸೀದಿಯ ಸಮೀಪದ ಸ್ಥಳೀಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಪಟ್ಲಡ್ಕದ ಮನೆಮಂದಿ ನೀಡದ ಹೇಳಿಕೆಯನ್ನು ಆಧರಿಸಿ ಆತ ಮರಳಿ ಓಮ್ನಿ ಕಾರಿನಲ್ಲಿ ಹಿಂತಿರುಗಿರುವ ವಿಚಾರ ನಿಜವೇ ಎನ್ನುವ ಕುರಿತು ಪೊಲೀಸರು ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ವಾಹನ ಹೋದ ದೃಶ್ಯ ಇರಲಿಲ್ಲ ಎನ್ನಲಾಗಿದೆ. ಈ ವಿಚಾರ ನಾಪತ್ತೆ ಪ್ರಕರಣದ ಕುರಿತು ಪೊಲೀಸರಿಗೆ ಅನುಮಾನ ಮೂಡಿಸಿತ್ತು ಎನ್ನಲಾಗಿದೆ.
ಪ್ರಕರಣ ಕೊಲೆ ಎಂದು ಸಾಬೀತಾಗಿದ್ದರೂ ಸಹ ಇನ್ನೂ ಅದರ ಪೂರ್ಣ ಮಾಹಿತಿಯನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಕಾಡಿನಲ್ಲಿ ಹೂತಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಶವವು, ನಾಪತ್ತೆ ಪ್ರಕರಣ ದಾಖಲಾಗಿರುವ ವ್ಯಕ್ತ ಜಗದೀಶ್ ಅವರದ್ದೇ ಎನ್ನುವುದನ್ನು ಅವರ ಮನಯವರು ದೃಢಪಡಿಸಿದ ಬಳಿಕವೇ ಮುಂದಿನ ಹಂತದ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರಿಗೆ ಸಾಧ್ಯ ಎನ್ನಲಾಗುತ್ತಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪಡವನ್ನೂರು ಗ್ರಾಮದ ಪಟ್ಲಡ್ಕದ ಬಾಲಕೃಷ್ಣ ಯಾನೆ ಸುಬ್ಬಯ್ಯ ರೈ, ಪತ್ನಿ ಜಯಲಕ್ಷ್ಮೀ, ಪುತ್ರ ಪ್ರಶಾಂತ್ ಹಾಗೂ ನೆರೆಮನೆಯ ನಿವಾಸಿ ಜೀವನ್ ಪ್ರಸಾದ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ.30ರವರೆಗೆ ಮೂವರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದ್ದು, ಜಯಲಕ್ಷ್ಮೀಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.