ಬಂಟ್ವಾಳ, ನ. 25 (DaijiworldNews/HR): ಮಕ್ಕಳ ಮಾಸೋತ್ಸವ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಬಂಟ್ಚಾಳ, ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ, ಲಯನ್ಸ್ ಕ್ಲಬ್ ಬಂಟ್ವಾಳ ಮತ್ತು ಲಯನ್ಸ್ ಸೇವಾ ಟ್ರಸ್ಟ್ ಬಂಟ್ವಾಳ ಸಹಯೋಗದೊಂದಿಗೆ ಮಗುಸ್ನೇಹಿ ಮನಸ್ಸು ವಿಚಾರದ ಕುರಿತು ಸಂವಾದ ಕಾರ್ಯಕ್ರಮ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರ ನಿರ್ಮಲ ಹೃದಯ ವಿಶೇಷ ಮಕ್ಕಳ ಪಾಲನಾ ಕೇಂದ್ರದಲ್ಲಿ ಗುರುವಾರ ನಡೆಯಿತು.
ಮಂಗಳೂರಿನ ಮಾನಸಿಕ ಆರೋಗ್ಯ ತಜ್ಞರಾದ ಡಾ. ರವೀಶ್ ತುಂಗ ಮಾಹಿತಿ ನೀಡಿ ಸಂವಾದ ಕಾರ್ಯಕ್ರಮ ನಡೆಸಿಕೊಟ್ಡರು.
ಕೊರೊನೋತ್ತರ ಕಾಲಘಟ್ಟದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಮಕ್ಕಳನ್ನು ಹೇಗೆ ಶಿಕ್ಷಕರು ನಿರ್ವಹಿಸಬೇಕು ಎಂಬ ಕುರಿತು ಡಾ.ತುಂಗ ವಿವರಿಸಿದರು. ಹದಿಹರೆಯದ ಮನಸ್ಸು ನಿಯಂತ್ರಣ ದೊಡ್ಡ ಸವಾಲು. ಮನಸ್ಸು ಮತ್ತು ದೇಹದ ಕುರಿತು ವಿಶ್ಲೇಷಿಸಿದ ಅವರು, ಮನಸ್ಸು ಇಡೀ ಶರೀರದಲ್ಲಿದೆ. ಯೋಚನೆ, ಭಾವನೆ, ವರ್ತನೆ ಒಂದಕ್ಕೊಂದು ಹೊಂದಾಣಿಕೆ ಇರಬೇಕು ಎಂದರು.
ಮಕ್ಕಳ ಮಾಸೋತ್ಸವ ಸಮಿತಿ ಜಿಲ್ಲಾ ಸಂಚಾಲಕ ಮಂಜು ವಿಟ್ಲ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಬಂಟ್ಚಾಳ ಅಧ್ಯಕ್ಷ ಡಾ.ವಸಂತ ಬಾಳಿಗಾ ವಹಿಸಿದ್ದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಣಾನೇಶ್, ವೆಲೊರೆಡ್ ಪ್ರತಿಷ್ಟಾನ ಅಧ್ಯಕ್ಷ ರೆನ್ನಿ ಡಿಸೋಜ, ಲಯನ್ಸ್ ಜಿಲ್ಲಾ ಸಂಪುಟ ಕೋಶಾಧಿಕಾರಿ ಶ್ರೀನಿವಾಸ ಪೂಜಾರಿ ಶುಭ ಹಾರೈಸಿದರು.